ಟೂಲ್ಕಿಟ್ ಪ್ರಕರಣ; ಶಂತನು ಮುಲುಕ್ಗೆ ಬಂಧನದಿಂದ ರಕ್ಷಣೆ
ನವದೆಹಲಿ, ಫೆಬ್ರವರಿ 25: ರೈತರ ಪ್ರತಿಭಟನೆ ಸಂಬಂಧ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂತನು ಮುಲುಕ್ಗೆ ಬಂಧನದಿಂದ ದೆಹಲಿ ಹೈಕೋರ್ಟ್ ರಕ್ಷಣೆ ನೀಡಿದೆ.
ಮಾರ್ಚ್ 9ರವರೆಗೂ ಶಂತನು ಮುಲುಕ್ ಬಂಧಿಸದಂತೆ ನ್ಯಾಯಾಲಯ ಸೂಚನೆ ನೀಡಿದೆ. ಟೂಲ್ ಕಿಟ್ ಪ್ರಕರಣದಲ್ಲಿ ದಿಶಾ ರವಿ, ನಿಕಿತಾ ಜೇಕಬ್ ಅವರೊಂದಿಗೆ ಆರೋಪಿಯಾಗರುವ ಶಂತನು ಮುಲುಕ್ ಅವರು ನಿರೀಕ್ಷಣಾ ಜಾಮೀನು ಕೋರಿ ಮಂಗಳವಾರ ದೆಹಲಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಫೆಬ್ರವರಿ 16ರಂದು ಹತ್ತು ದಿನಗಳ ಕಾಲ ಬಾಂಬೆ ಹೈಕೋರ್ಟ್ ಮುಲುಕ್ಗೆ ನಿರೀಕ್ಷಣಾ ಜಾಮೀನನ್ನು ನೀಡಿತ್ತು.

ಶಂತನು ಮುಲುಕ್, ದಿಶಾ ರವಿ ಮತ್ತು ನಿಕಿತಾ ಜೇಕಬ್ ಅವರು ದೇಶದ್ರೋಹ ಮತ್ತು ರೈತರ ಪ್ರತಿಭಟನೆ ವಿಚಾರದಲ್ಲಿ ಸಂಚು ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಭಾರತಕ್ಕೆ ಕಳಂಕ ತರಲು ಹಾಗೂ ಹಿಂಸಾಚಾರ ಹೆಚ್ಚಿಸಲು ಟೂಲ್ಕಿಟ್ ಮುಖ್ಯ ಪಾತ್ರ ವಹಿಸಿತ್ತು ಎಂದು ಪೊಲೀಸರು ಇವರ ವಿರುದ್ಧ ಆರೋಪಿಸಿದ್ದರು. ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಾಲಯ, ದಿಶಾ ರವಿಗೆ ಷರತ್ತುಬದ್ಧ ಜಾಮೀನು ನೀಡಿತ್ತು.
ಪುಣೆ ಮೂಲದ ಎಂಜಿನಿಯರ್ ಆಗಿರುವ ಶಂತನು, ತಾನು ರೈತರ ಪ್ರತಿಭಟನೆ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸಿ ಬೇರೆಯವರಿಗೆ ಸುಲಭವಾಗಿ ಅರ್ಥವಾಗುವಂತೆ ವಿವರ ಸಿದ್ಧಪಡಿಸಲು ನೆರವು ನೀಡಿದ್ದಷ್ಟೆ ಎಂದು ತಿಳಿಸಿದ್ದಾರೆ. ಶಂತನು ಅವರು ಪ್ರತಿಭಟನೆಯ ಕುರಿತಾದ ವಿವರವುಳ್ಳ ದಾಖಲೆಯನ್ನು ಸಿದ್ಧಪಡಿಸಿದ್ದರಷ್ಟೇ. ಅವರ ಗಮನಕ್ಕೆ ಬಾರದೆ ಅಥವಾ ಅವರು ಭಾಗಿಯಾಗಿಲ್ಲದೆಯೇ ಇತರರು ಅದನ್ನು ಬದಲಿಸಿದ್ದಾರೆ ಎಂದು ಶಂತನು ಪರ ವಕೀಲರು ಜಾಮೀನು ಅರ್ಜಿಯಲ್ಲಿ ವಿವರಿಸಿದ್ದರು.












Click it and Unblock the Notifications