ಹಬ್ಬಕ್ಕಿಂತ ಜೀವ ಮುಖ್ಯ; ಹೈಕೋರ್ಟ್ ಆದೇಶಕ್ಕೆ ಹಸ್ತಕ್ಷೇಪ ಮಾಡಲ್ಲ ಎಂದ ಸುಪ್ರೀಂ
ನವದೆಹಲಿ, ನವೆಂಬರ್ 11: "ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆ ಬಹು ಮುಖ್ಯ ಸಂಗತಿ ಹೌದು. ಆದರೆ ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಜೀವ ಉಳಿಸಿಕೊಳ್ಳುವುದು ಅದಕ್ಕಿಂತ ಮುಖ್ಯ ಎನಿಸುತ್ತಿದೆ..." ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ರಜಾಕಾಲದ ಪೀಠವು ಹೀಗೆ ಹೇಳಿಕೆ ನೀಡಿದೆ.
ಪಶ್ಚಿಮ ಬಂಗಾಳದಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಿ ಕೋಲ್ಕತ್ತಾ ಹೈ ಕೋರ್ಟ್ ಆದೇಶ ಹೊರಡಿಸಿದ್ದು, ಈ ಆದೇಶವನ್ನು ಪ್ರಶ್ನಿಸಿ ಗೌತಮ್ ರಾಯ್ ಹಾಗೂ ಬುರಾಬಜಾರ್ ಫೈರ್ ವರ್ಕರ್ ಡೀಲರ್ಸ್ ಅಸೋಸಿಯೇಷನ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಬುಧವಾರ ಅರ್ಜಿಯನ್ನು ಕೈಗೆತ್ತಿಕೊಂಡ ಪೀಠವು, ಈ ವಿಷಯದಲ್ಲಿ ಹೈ ಕೋರ್ಟ್ ನೊಂದಿಗೆ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನಿರಾಕರಿಸಿದೆ.
ಮಿತಿ ಮೀರಿ ಜನರಿಗೆ ಕಂಟಕವಾಗಿರುವ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೋಲ್ಕತ್ತಾ ಹೈ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ. ಈ ನಡುವೆ ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಜೀವವನ್ನು ಉಳಿಸುವುದೂ ಬಹು ಮುಖ್ಯವಾಗಿದೆ. ಹೀಗಿದ್ದಾಗ ಈ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.

"ಹಬ್ಬಗಳು ನಮ್ಮ ದೇಶದಲ್ಲಿ ಬಹುಮುಖ್ಯವಾದವು ಹೌದು. ಆದರೆ ಕೊರೊನಾ ಜೀವನವೇ ಕಷ್ಟಕರವಾಗಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಹೈಕೋರ್ಟ್ ಗೆ ಸ್ಥಳೀಯ ಪರಿಸ್ಥಿತಿಯ ಕುರಿತು ಹೆಚ್ಚು ಅರಿವಿದೆ. ಹಾಗೇನಾದರೂ ಅವಕಾಶವಿದ್ದಿದ್ದರೆ, ಹೈಕೋರ್ಟ್ ಪಟಾಕಿ ಬಳಕೆಗೆ ಅವಕಾಶ ನೀಡುತ್ತಿತ್ತು. ಈ ಪರಿಸ್ಥಿತಿಯಲ್ಲಿ, ನೀವು, ನಾವು ಎಲ್ಲರೂ ಜೀವವನ್ನು ಉಳಿಸಿಕೊಳ್ಳಲು ಒದ್ದಾಡುತ್ತಿದ್ದೇವೆ. ನಮ್ಮೆಲ್ಲರ ಮನೆಯಲ್ಲೂ ಮಕ್ಕಳು, ಹಿರಿಯರು ಇದ್ದಾರೆ. ಜೀವವೇ ಎಲ್ಲಕ್ಕಿಂತ ಅಮೂಲ್ಯವಾಗಿದೆ. ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಈ ಆದೇಶ ಹೊರಡಿಸಲಾಗಿದೆ. ಹಿರಿಯ ನಾಗರಿಕರ ಆರೋಗ್ಯದ ಹಿತದೃಷ್ಟಿ ಈ ಆದೇಶದಲ್ಲಿದೆ ಎಂದು ಪೀಠವು ಸಮರ್ಥಿಸಿಕೊಂಡಿತು.
ದೀಪಾವಳಿ ಹಬ್ಬಕ್ಕೆ ಕೋಲ್ಕತ್ತಾ ಹೈಕೋರ್ಟ್ ಪಟಾಕಿ ಬಳಕೆ ಮತ್ತು ಮಾರಾಟಕ್ಕೆ ನಿಷೇಧ ವಿಧಿಸಿದೆ. ದೀಪಾವಳಿ, ಕಾಳಿ ಪೂಜೆ, ಚತ್ ಪೂಜೆಯ ಸಂದರ್ಭದಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳನ್ನೂ ಹೊರಡಿಸಿದೆ. ಅತಿ ಕಟ್ಟುನಿಟ್ಟಾಗಿ ನಿಯಮ ಪಾಲಿಸಿಬೇಕೆಂದು ಸೂಚಿಸಿದೆ.












Click it and Unblock the Notifications