ಬಳ್ಳಾರಿಗೆ ತೆರಳಲು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಅನುಮತಿ
ನವದೆಹಲಿ, ಜೂನ್ 7: ತವರೂರು ಬಳ್ಳಾರಿಗೆ ತೆರಳಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ಗಣಿ ಧಣಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಮನವಿಯನ್ನು ಸುಪ್ರೀಂಕೋರ್ಟ್ ಪುರಸ್ಕರಿಸಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಜನಾರ್ದನ ರೆಡ್ಡಿ ಅವರು, ಬಳ್ಳಾರಿ ಪ್ರವೇಶಿಸದಂತೆ ತಮ್ಮ ಮೇಲೆ ಹೇರಿರುವ ನಿರ್ಬಂಧವನ್ನು ಸಡಿಲ ಮಾಡಬೇಕು ಎಂದು ಕೋರಿದ್ದರು.
ಇದನ್ನು ಮಾನ್ಯ ಮಾಡಿರುವ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನೇತೃತ್ವದ ರಜಾಕಾಲದ ನ್ಯಾಯಪೀಠ ಎರಡು ವಾರ ಬಳ್ಳಾರಿಗೆ ತೆರಳಲು ಶುಕ್ರವಾರ ಅನುಮತಿ ನೀಡಿದೆ.
ಜೂನ್ 8 ರಿಂದ ಎರಡು ವಾರ ಕಾಲ ಅವರು ಬಳ್ಳಾರಿಯಲ್ಲಿ ಇರಬಹುದು. ಆದರೆ, ಈ ಭೇಟಿ ವೇಳೆ ತಮ್ಮ ವಿರುದ್ಧ ಸಾಕ್ಷ್ಯಗಳ ನಾಶಪಡಿಸುವ ಪ್ರಯತ್ನ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸದಂತೆ ಷರತ್ತು ವಿಧಿಸಲಾಗಿದೆ.
ತಮ್ಮ ಮಾವ ಪರಮೇಶ್ವರ್ ರೆಡ್ಡಿ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ಬಳ್ಳಾರಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರನ್ನು ನೋಡಲು ಬಳ್ಳಾರಿಗೆ ತೆರಳಲು ಅವಕಾಶ ನೀಡಬೇಕು ಎಂದು ಕೋರಿದ್ದರು.

ಸಿಬಿಐ ವಿರುದ್ಧ ಅಸಮಾಧಾನ
ಈ ನಡುವೆ ಗಣಿಗಾರಿಕೆ ಪ್ರಕರಣದಲ್ಲಿ ಚಾರ್ಜ್ ಷೀಟ್ ಸಲ್ಲಿಸದ ಬಗ್ಗೆ ಸುಪ್ರೀಂಕೋರ್ಟ್ ಸಿಬಿಐ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಆರು ವರ್ಷ ಕಳೆದರೂ ಸಿಬಿಐ ಇನ್ನೂ ದೋಷಾರೋಪಪಟ್ಟಿ ಸಲ್ಲಿಕೆ ಮಾಡಿಲ್ಲ ಏಕೆ ಎಂದು ರಜಾಕಾಲದ ನ್ಯಾಯಪೀಠ ಕಿಡಿಕಾರಿತು.

ಪ್ರವೇಶ ನಿರಾಕರಿಸಿದ್ದ ಸುಪ್ರೀಂ
ಅಕ್ರಮ ಗಣಿಗಾರಿಕೆಯ ನಂಬರ್ ಒನ್ ಆರೋಪಿಯಾಗಿರುವ ಜನಾರ್ದನ ರೆಡ್ಡಿ ಅವರು ಮೂರೂವರೆ ವರ್ಷ ಸೆರೆವಾಸ ಅನುಭವಿಸಿದ್ದರು. 2015ರಲ್ಲಿ ಸುಪ್ರೀಂಕೋರ್ಟ್ನಿಂದ ಷರತ್ತುಬದ್ಧ ಜಾಮೀನು ಪಡೆದು ಬಿಡುಗಡೆ ಹೊಂದಿದ್ದರು. ಬಳ್ಳಾರಿ ಹಾಗೂ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಗಳಿಗೆ ಅವರು ಭೇಟಿ ನೀಡುವಂತಿಲ್ಲ ಮತ್ತು ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.

ಚುನಾವಣಾ ಪ್ರಚಾರಕ್ಕೆ ಅನುಮತಿ ನಕಾರ
2016ರ ನವೆಂಬರ್ 16ರಂದು ಜನಾರ್ದನ ರೆಡ್ಡಿ ಅವರ ಮಗಳು ಬ್ರಹ್ಮಿಣಿ ಮದುವೆ ನಡೆದಿತ್ತು. ಆ ಸಂದರ್ಭದಲ್ಲಿ ಮದುವೆ ಸಮಾರಂಭದಲ್ಲಿ ಭಾಗವಹಿಸಲು ನವೆಂಬರ್ 1ರಿಂದ ನವೆಂಬರ್ 21ರವರೆಗೆ ಮಾತ್ರ ಬಳ್ಳಾರಿಯಲ್ಲಿ ಇರಲು ಅವರಿಗೆ ತಾತ್ಕಾಲಿಕ ಅನುಮತಿ ನೀಡಲಾಗಿತ್ತು. 2018ರ ವಿಧಾನಸಭೆ ಚುನಾವಣೆಯಲ್ಲಿ ಸಹೋದರ ಜಿ. ಸೋಮಶೇಖರ ರೆಡ್ಡಿ ಪರ ಪ್ರಚಾರ ನಡೆಸುವ ಸಲುವಾಗಿ ಬಳ್ಳಾರಿಗೆ ಹೋಗಲು ಅನುಮತಿ ನೀಡುವಂತೆ ರೆಡ್ಡಿ ಕೋರಿದ್ದರು. ಆದರೆ, ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ನಿರ್ಬಂಧ ಸಡಿಲಿಸಲು ಪೂರಕವಾದ ಗಟ್ಟಿ ಅಂಶಗಳಿಲ್ಲ. ನೀವು ಅಲ್ಲಿ ಹೋಗಿ ಪ್ರಚಾರ ಮಾಡುವುದು ಬೇಡ ಎಂದು ಸುಪ್ರೀಂಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.

ಸವಾಲು ಹಾಕಿದ್ದ ಸಿದ್ದರಾಮಯ್ಯ
ಕಳೆದ ವರ್ಷ ನಡೆದ ಬಳ್ಳಾರಿ ಲೋಕಸಭೆ ಉಪ ಚುನಾವಣೆ ವೇಳೆ ಜನಾರ್ದನ ರೆಡ್ಡಿ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ನಡೆದಿತ್ತು. ಸಿದ್ದರಾಮಯ್ಯ ಅವರಿಂದಲೇ ತಾವು ನಾಲ್ಕು ವರ್ಷ ಜೈಲಿನಲ್ಲಿ ಅನ್ಯಾಯವಾಗಿ ಕಳೆಯುವಂತಾಗಿತ್ತು ಎಂದು ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ವ್ಯಂಗ್ಯದೊಂದಿಗೆ ಸವಾಲು ಹಾಕಿದ್ದ ಸಿದ್ದರಾಮಯ್ಯ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದರು. ನೀವು ಮಾಡಿರುವ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡೋಣ. ನಿಮ್ಮನ್ನು ಬಳ್ಳಾರಿಯಿಂದ ಗಡಿಪಾರು ಮಾಡಿರುವುದರಿಂದ ನಿಮಗೆ ಅನುಕೂಲವಾಗುವ ಸ್ಥಳ ಮತ್ತು ದಿನಾಂಕ ನೀವೇ ನಿಗದಿ ಮಾಡಿ ಎಂದು ಅವರು ಅಣಕಿಸಿದ್ದರು.












Click it and Unblock the Notifications