ಚುನಾವಣೆ ಸ್ಪರ್ಧೆಗೆ ಕನಿಷ್ಠ ವಿದ್ಯಾರ್ಹತೆ: ಹೋಳಿ ಬಳಿಕ ಸುಪ್ರೀಂಕೋರ್ಟ್ ನಿರ್ಧಾರ
ನವದೆಹಲಿ, ಮಾರ್ಚ್ 14: ಉದ್ಯೋಗದಲ್ಲಿ ವಯೋಮಿತಿ ಮತ್ತು ಶಿಕ್ಷಣದ ಅಗತ್ಯಗಳಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಕೂಡ ಕನಿಷ್ಠ ವಿದ್ಯಾರ್ಹತೆ ಹಾಗೂ ಗರಿಷ್ಠ ವಯೋಮಿತಿ ನಿಗದಿಪಡಿಸಬೇಕೇ? ಈ ಪ್ರಶ್ನೆ ಮತ್ತು ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿತ್ತು.
ಈ ವಿಚಾರ ಈಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಬಾರಿಯ ಚುನಾವಣೆಗೆ ಮುನ್ನವೇ ಈ ಕುರಿತಾದ ನ್ಯಾಯಾಲಯದ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.
ಚುನಾವಣೆಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಪಡಿಸಬೇಕು ಮತ್ತು ಅವರು ಒಂದು ವಯೋಮಾನದ ಬಳಿಕ ಮತ್ತೆ ಸ್ಪರ್ಧೆಗೆ ಇಳಿಯದಂತೆ ತಡೆಯಲು ವಯಸ್ಸಿನ ಮಿತಿ ಹೇರಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಹೋಳಿ ಹಬ್ಬದ ರಜೆಯ ಅವಧಿ ಬಳಿಕ ನಡೆಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ.

ಬಿಜೆಪಿ ಮುಖಂಡ ಮತ್ತು ಸುಪ್ರೀಂಕೋರ್ಟ್ ವಕೀಲ ಅಶ್ವಿನಿ ಕುಮಾರ್ ಈ ಹಿಂದೆ ಪ್ರಧಾನಿ ಕಾರ್ಯಾಲಯ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು. ವಿಧಾನಸಭೆ ಮತ್ತು ಸಂಸತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿರಬೇಕು ಎಂಬ ಕಾನೂನು ತರಲು ಒತ್ತಾಯಿಸಿದ್ದರು.
21ನೇ ಶತಮಾನದ ಭಾರತದಲ್ಲಿ ಶಿಕ್ಷಣ ಸುಲಭವಾಗಿ ಎಲ್ಲರಿಗೂ ಸಿಗುತ್ತಿದೆ. ಜನರು ತಮ್ಮ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ಬಳಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸುವುದು ಸಮಾಜದ ಎಲ್ಲ ಹಂತಗಳಲ್ಲಿಯೂ ಆಡಳಿತದ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications