ಅಗತ್ಯವಿಲ್ಲದ ಯೋಜನೆಗಳಿಗೆ ಖುರ್ಚು ಮಾಡುವ ಹಣವನ್ನು ಕೊರೊನಾ ಲಸಿಕೆ ಉತ್ಪಾದನೆಗೆ ಬಳಸಿ: ರಾಹುಲ್
ನವದೆಹಲಿ, ಏಪ್ರಿಲ್ 24:ಅನಗತ್ಯ ಯೋಜನೆಗಳಿಗೆ ವ್ಯಯಿಸುವ ಹಣವನ್ನು ಕೊರೊನಾ ಲಸಿಕೆ ಉತ್ಪಾದನೆಗೆ ಬಳಕೆ ಮಾಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನಿನ್ನೆಯಷ್ಟೇ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿಯವರು, ದೇಶದಲ್ಲಿ ಕೊರೋನಾ ವೈರಸ್ ನಿಂದಲ್ಲ... ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಲೇ ಸೋಂಕಿತರು ಸಾವನ್ನಪ್ಪುತ್ತಿದ್ದಾರೆಂದು ಆರೋಪಿಸಿದ್ದರು.
ಕೊರೋನಾ ವೈರಸ್ ಸೋಂಕಿನಿಂದಾಗಿ ಮನುಷ್ಯನ ದೇಹದಲ್ಲಿ ಆಮ್ಲಜನಕದ ಕೊರತೆ ಮಾತ್ರ ಉಂಟಾಗುತ್ತದೆ. ಆದರೆ ಮೋದಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ರೋಗಿಗಳಿಗೆ ಅನಿವಾರ್ಯವಾಗಿ ಬೇಕಾದ ಆಮ್ಲಜನಕ ಜನಕದ ಸಿಲಿಂಡರ್ ಗಳು ಮತ್ತು ಐಸಿಯು ಬೆಡ್ ಕೊರತೆಯುಂಟಾಗಿದೆ. ಇದರಿಂದಲೇ ಸಾವಿರಾರು ಮಂದಿ ನಿತ್ಯ ಸಾವಿಗೀಡಾಗುತ್ತಿದ್ದಾರೆ ಎಂದು ಹೇಳಿದ್ದರು.

ಪಿಆರ್ ಹಾಗೂ ಇನ್ನಿತರೆ ಅನಗತ್ಯ ಯೋಜನೆಗಳ ಬದಲಿಗೆ ಕೊರೋನಾ ಲಸಿಕೆ, ಆ್ಯಕ್ಸಿಜನ್ ಹಾಗೂ ಇನ್ನಿತರೆ ಆರೋಗ್ಯ ಸೇವೆಗಳಿಗೆ ಹಣ ಖರ್ಚು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಾಂತಿಯುತವಾಗಿ ಮನವಿ ಮಾಡಿಕೊಳ್ಳುತ್ತಿದ್ದೇನೆ.
ಮುಂದಿನ ದಿನಗಳಲ್ಲಿ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಪರಿಸ್ಥಿತಿ ಎದುರಿಸಲು ದೇಶ ಸಜ್ಜಾಗಿರಬೇಕಿದೆ. ಪ್ರಸ್ತುತದ ಪರಿಸ್ಥಿತಿ ಅಸಹನೀಯವಾಗಿದೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಸತತ ಮೂರನೇ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ.ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3,46,786 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಒಟ್ಟು 1,66,10,481 ಕೊರೊನಾ ಸೋಂಕಿತರಿದ್ದಾರೆ, ಕಳೆದ 24 ಗಂಟೆಯಲ್ಲಿ 2624 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ 2,19,838 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications