Breaking:ಸ್ಮೃತಿ ಇರಾನಿ ಮಾನನಷ್ಟ ಪ್ರಕರಣ;ಕಾಂಗ್ರೆಸ್ಸಿಗರಿಗೆ ನೋಟಿಸ್
ನವದೆಹಲಿ, ಜುಲೈ, 29: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಮಾಡಿರುವ ಟ್ವೀಟ್ಗಳನ್ನು 24 ಗಂಟೆಗಳ ಒಳಗೆ ಡಿಲೀಟ್ ಮಾಡುವಂತೆ ಮೂವರು ಕಾಂಗ್ರೆಸ್ ನಾಯಕರಿಗೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ.
ಸ್ಮೃತಿ ಇರಾನಿ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಜೈರಾಮ್ ರಮೇಶ್, ಪವನ್ ಖೇರಾ ಮತ್ತು ನೆಟ್ಟಾ ಡಿಸೋಜಾ ಅವರು ಆಗಸ್ಟ್ 18 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.
ಬಾರ್ ಮತ್ತು ಮಗಳು: ಕಾಂಗ್ರೆಸ್ಸಿಗರಿಗೆ ಸ್ಮೃತಿ ಇರಾನಿ ಲೀಗಲ್ ನೋಟೀಸ್
ಕಾಂಗ್ರೆಸ್ ನಾಯಕರು ತಮ್ಮ ಟ್ವೀಟ್ಗಳನ್ನು ತೆಗೆದುಹಾಕದಿದ್ದರೇ, ಟ್ವಿಟ್ಟರ್ ಅವುಗಳನ್ನು ತೆಗೆದು ಹಾಕುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಜೈರಾಮ್ ರಮೇಶ್ ಅವರು ಸಮನ್ಸ್ ಬಂದಿರುವುದನ್ನು ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ. "ಸ್ಮೃತಿ ಇರಾನಿ ಅವರು ದಾಖಲಿಸಿರುವ ಪ್ರಕರಣಕ್ಕೆ ಔಪಚಾರಿಕವಾಗಿ ಉತ್ತರಿಸುವಂತೆ ದೆಹಲಿ ಹೈಕೋರ್ಟ್ ನಮಗೆ ನೋಟಿಸ್ ನೀಡಿದೆ. ನ್ಯಾಯಾಲಯದ ಮುಂದೆ ಸತ್ಯವನ್ನು ಪ್ರಸ್ತುತಪಡಿಸಲು ನಾವು ಎದುರು ನೋಡುತ್ತೇವೆ. ಇರಾನಿ ಅವರು ಮಾಡುತ್ತಿರುವ ವಾದವನ್ನು ನಾವು ಪ್ರಶ್ನಿಸುತ್ತೇವೆ ಮತ್ತು ನಿರಾಕರಿಸುತ್ತೇವೆ" ಎಂದು ಸಂಸದ ಟ್ವೀಟ್ ಮಾಡಿದ್ದಾರೆ.
ಸ್ಮೃತಿ ಇರಾನಿ ಅವರ 18 ವರ್ಷದ ಮಗಳು ಗೋವಾದಲ್ಲಿ "ಅಕ್ರಮ ಬಾರ್" ನಡೆಸುತ್ತಿದ್ದಾಳೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿತ್ತು. ಕಳೆದ ವಾರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮೂವರು ಕಾಂಗ್ರೆಸ್ ನಾಯಕರು ಮತ್ತು ಅವರ ಪಕ್ಷಕ್ಕೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಅವರು ಲಿಖಿತವಾಗಿ ಕ್ಷಮೆಯಾಚಿಸಲು ಮತ್ತು ತಮ್ಮ ಮಗಳ ಮೇಲಿನ ಆರೋಪಗಳನ್ನು ತಕ್ಷಣವೇ ಹಿಂಪಡೆಯಲು ಆಗ್ರಹಿಸಿದ್ದರು.
ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ತಾನು ಗಟ್ಟಿಯಾಗಿ ಧ್ವನಿ ಎತ್ತುತ್ತಿರುವುದರಿಂದ ಗಾಂಧಿ ಕುಟುಂಬದವರು ಈ ಸುಳ್ಳು ಆರೋಪಗಳನ್ನು ಹೇಳಿಸುತ್ತಿದ್ದಾರೆ. ತಾನು ಇದನ್ನು ಇಲ್ಲಿಗೇ ಬಿಡುವುದಿಲ್ಲ ಎಂದು ಸ್ಮೃತಿ ಇರಾನಿ ಹೇಳಿದ್ದರು.
"ಅವರು ತಮ್ಮ ಆರೋಪಗಳನ್ನು ವಾಪಸ್ ಪಡೆದು ಬೇಷರತ್ ಕ್ಷಮೆ ಕೋರದೇ ಹೋದರೆ ಇರಾನಿಯವರು ಕಾನೂನು ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹಾಕುತ್ತಾರೆ" ಎಂದು ಲೀಗಲ್ ನೋಟೀಸ್ನಲ್ಲಿ ಎಚ್ಚರಿಕೆ ನೀಡಲಾಗಿತ್ತು.
Recommended Video