ಮೋದಿ ಸಂಪುಟ ತೊರೆಯಲಿದ್ದಾರೆ ಸಚಿವ ಅನಂತ ಗೀತೆ?
ನವದೆಹಲಿ, ಸೆ. 30 : ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡದೆ ಬಿಜೆಪಿ ಜತೆಗಿನ 25 ವರ್ಷಗಳಷ್ಟು ಸುದೀರ್ಘ ಮೈತ್ರಿಯನ್ನು ಕಡಿದುಕೊಂಡ ಶಿವಸೇನೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದಲೂ ನಿರ್ಗಮಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿರುವ ಸಚಿವ ಅನಂತ ಗೀತೆ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.
ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಭಾರತಕ್ಕೆ ಮರಳುತ್ತಿದ್ದಂತೆ ಅನಂತ ಗೀತೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸೋಮವಾರ ತಿಳಿಸಿದ್ದಾರೆ. ಮೋದಿ ಸಂಪುಟದಲ್ಲಿ ಶಿವಸೇನೆಯ ಅನಂತ ಗೀತೆ ಅವರು ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಖಾತೆ ಸಚಿವರಾಗಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆಯಲ್ಲಿ ಒಮ್ಮತ ಮೂಡದ ಕಾರಣ ಬಿಜೆಪಿ ಮತ್ತು ಶಿವಸೇನೆ ಜೊತೆಗಿನ 25 ವರ್ಷಗಳಷ್ಟು ಸುದೀರ್ಘ ಮೈತ್ರಿ ಇತ್ತೀಚೆಗೆ ಮುರಿದುಬಿದ್ದಿತ್ತು. ಈಗ ಶಿವಸೇನೆ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದಲೂ ನಿರ್ಗಮಿಸಲು ಚಿಂತನೆ ನಡೆಸಿದೆ. ಅದರ ಭಾಗವಾಗಿಯೇ ಅನಂತ ಗೀತೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. [ಮುರಿದು ಬಿದ್ದ ಬಿಜೆಪಿ-ಶಿವಸೇನಾ 'ಮಹಾ' ಮೈತ್ರಿ]
ಬಿಜೆಪಿ ಜೊತೆಗಿನ ಮೈತ್ರಿ ಮುರಿದ ಬಳಿಕವೂ ದೆಹಲಿಯಲ್ಲಿ ಅಧಿಕಾರ ಹಂಚಿಕೊಂಡಿರುವುದರ ಕುರಿತು ರಾಜ್ ಠಾಕ್ರೆ ಭಾನುವಾರ ಪ್ರಶ್ನಿಸಿದ್ದರು. ಈ ಹೇಳಿಕೆ ಮರುದಿನವೇ ಅನಂತ ಗೀತೆ ರಾಜೀನಾಮೆ ಬಗ್ಗೆ ಶಿವಸೇನೆ ನಿರ್ಧಾರ ಕೈಗೊಂಡಿದೆ. 18 ಸಂಸದರನ್ನು ಹೊಂದಿರುವ ಶಿವಸೇನೆ, ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ನಂತರ ಹೆಚ್ಚು ಸಂಸದರನ್ನು ಹೊಂದಿರುವ ಎರಡನೇ ಅತಿದೊಡ್ಡ ಪಕ್ಷವಾಗಿದೆ. [ಬಿಜೆಪಿ ಆಫರ್ ರಿಜೆಕ್ಟ್ ಮಾಡಿದ ಶಿವಸೇನಾ]












Click it and Unblock the Notifications