ಭಾರತೀಯ ಕಿಸಾನ್ ಒಕ್ಕೂಟಕ್ಕೆ 'ಜೈ' ಎಂದ ಶಿರೋಮಣಿ ಅಕಾಲಿ ದಳ
ನವದೆಹಲಿ, ಜನವರಿ.31: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಕಿಸಾನ್ ಒಕ್ಕೂಟಕ್ಕೆ ಶಿರೋಮಣಿ ಅಕಾಲಿ ದಳ ಪಕ್ಷವು ಬೆಂಬಲಿಸುತ್ತದೆ ಎಂದು ಪಕ್ಷದ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಘೋಷಿಸಿದ್ದಾರೆ.
ಭಾನುವಾರ ಕೃಷಿ ಕಾಯ್ದೆಗಳ ವಿರುದ್ಧ ರೈತರು ಮತ್ತು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ನವದೆಹಲಿ ಮತ್ತು ಉತ್ತರ ಪ್ರದೇಶದ ಘಾಜಿಪುರ್ ಗಡಿ ಪ್ರದೇಶಕ್ಕೆ ಎಸ್ಎಡಿ ಮುಖ್ಯಸ್ಥ ಸುಖ್ಬೀರ್ ಸಿಂಗ್ ಬಾದಲ್ ಭೇಟಿ ನೀಡಿದರು. ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಜೊತೆಗೆ ಮಾತುಕತೆ ನಡೆಸಿದ ಸುಖ್ಬೀರ್ ಸಿಂಗ್ ಬಾದಲ್, ರೈತರ ಹೋರಾಟಕ್ಕೆ ಬೆಂಬಲಿಸುವುದಾಗಿ ಘೋಷಿಸಿದರು.
"ಕೃಷಿ ಕಾಯ್ದೆ ಕುರಿತು ಕೇಂದ್ರದ ಜೊತೆ ಸಂಧಾನಕ್ಕೆ OK, ಆದರೆ..?"
ಕೃಷಿ ಕಾಯ್ದೆಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಪಟ್ಟು ಬಿಡದೇ ಹೋರಾಟಕ್ಕೆ ಕುಳಿತಿರುವ ರಾಕೇಶ್ ತಿಕೈಟ್ ಅವರಿಗೆ ರೈತರೆಲ್ಲ ಅಭಿನಂದಿಸಬೇಕಿದೆ. ನಾನೂ ಕೂಡಾ ಅವರ ಹೋರಾಟಕ್ಕೆ ಅಭಿನಂದಿನೆ ಸಲ್ಲಿಸುತ್ತೇನೆ. ರೈತರ ಪರವಾಗಿ ನಡೆಯುತ್ತಿರುವ ಹೋರಾಟಕ್ಕೆ ಶಿರೋಮಣಿ ಅಕಾಲಿ ದಳ ಕೂಡಾ ಬೆಂಬಲಿಸುತ್ತವೆ ಎಂದು ಸುಖ್ಬೀರ್ ಸಿಂಗ್ ಬಾದಲ್ ತಿಳಿಸಿದ್ದಾರೆ.
ಸಂಧಾನಕ್ಕೂ ಸೈ ಎಂದ ರಾಕೇಶ್ ತಿಕೈಟ್:
ಕೃಷಿ ಕಾಯ್ದೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಯಾವುದೇ ರೀತಿ ಪೂರ್ವ ಷರತ್ತುಗಳನ್ನು ವಿಧಿಸದಿದ್ದಲ್ಲಿ ರೈತರು ಮತ್ತು ರೈತ ಸಂಘಟನೆಗಳು ಸಂಧಾನಿ ಮಾತುಕತೆಗೆ ಸಿದ್ಧ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಹೇಳಿದ್ದಾರೆ. ಕೇಂದ್ರ ಸರ್ಕಾರವು ರೈತರ ಎದುರಿಗೆ ಗನ್ ಹಿಡಿದು ನಿಂತುಕೊಂಡು ಚರ್ಚೆ ಮಾಡೋಣ ಬನ್ನಿ ಎಂದರೆ ಅದು ಸಾಧ್ಯವಾಗದ ಮಾತು. ಗನ್ ಪಾಯಿಂಟ್ ನಲ್ಲಿ ನಿಂತು ಸಂಧಾನ ಮಾತುಕತೆ ನಡೆಸುವುದಕ್ಕೆ ಸಾಧ್ಯವಿಲ್ಲ. ರೈತರಿಗೆ ಮತ್ತು ರೈತ ಸಂಘಟನೆಗಳಿಗೆ ಮೊದಲೇ ಷರತ್ತು ವಿಧಿಸುವುದಕ್ಕೆ ಬಿಟ್ಟು ಕೇಂದ್ರ ಸರ್ಕಾರವು ಶಾಂತಿ ಮಾತುಕತೆಗೆ ಆಹ್ವಾನ ನೀಡಲಿ. ನಾವೂ ಕೂಡಾ ಶಾಂತಿಯುತ ಚರ್ಚೆಗೆ ಸಿದ್ಧರಿದ್ದೇವೆ ಎಂದು ರಾಕೇಶ್ ತಿಕೈಟ್ ಆಗ್ರಹಿಸಿದ್ದರು.