ದೆಹಲಿ ಸಚಿವಾಲಯದ ಬೆಂಕಿ ಅನಾಹುತಕ್ಕೆ ಮೋದಿಯೇ ಕಾರಣ: ರಾಹುಲ್ ಗಾಂಧಿ
ನವದೆಹಲಿ, ಮೇ 1: ರಾಜಧಾನಿ ದೆಹಲಿಯ ಶಾಸ್ತ್ರಿ ಭವನದಲ್ಲಿ ನಡೆದ ಬೆಂಕಿ ಅನಾಹುತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯೇ ಕಾರಣ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ಮೋದಿಜೀ ಕಡತಗಳನ್ನು ವ್ಯವಸ್ಥಿತವಾಗಿ ಸುಟ್ಟು ಹಾಕುವುದರಿಂದ, ನಿಮ್ಮ ಸರಕಾರದ ಅಕ್ರಮಗಳು ಬಯಲಿಗೆ ಬರುವುದಿಲ್ಲ ಎಂದುಕೊಳ್ಳಬೇಡಿ. ಅಧಿಕಾರದಿಂದ ಇಳಿಯುವ ದಿನಗಳು ಹತ್ತಿರ ಬರುತ್ತಿವೆ ಎಂದು ರಾಹುಲ್ ಬರೆದುಕೊಂಡಿದ್ದಾರೆ.
ರಾಜ್ಯದ ಈ 3 'ಎಚ್ಎಂಟಿ' ಕ್ಷೇತ್ರದ ಫಲಿತಾಂಶದ ಮೇಲೆ ಊರಿಗೆಲ್ಲಾ ಕಣ್ಣು
ರಾಹುಲ್ ಗಾಂಧಿ ಟ್ವೀಟಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಇದೇ ಶಾಸ್ತ್ರಿ ಭವನದಲ್ಲಿ ನಡೆದ ಬೆಂಕಿ ಅವಘಡವನ್ನು ಟ್ವಿಟ್ಟಿಗರು ಎಳೆದು ತಂದಿದ್ದಾರೆ.
Modi ji burning files is not going to save you. Your day of judgement is coming. https://t.co/eqFvTJfDgY
— Rahul Gandhi (@RahulGandhi) April 30, 2019
ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಬೆಂಕಿ ಅನಾಹುತದಲ್ಲಿ, ಮೇಲಿನ ಮಹಡಿಯಲ್ಲಿ ಇಟ್ಟಿದ್ದ ಬೇಡದ ವಸ್ತುಗಳಿಗೆ ಬೆಂಕಿ ತಗುಲಿತ್ತು. ಅದನ್ನು ಕೇವಲ 30 ನಿಮಿಷದೊಳಗೆ ಅಗ್ನಿಶಾಮಕ ದಳ ನಂದಿಸಿದೆ, ಯಾವುದೇ ಕಡತಗಳಿಗೆ ಹಾನಿಯಾಗಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ದೆಹಲಿಯ ಪ್ರಮುಖ ಸಚಿವಾಲಯಗಳಿರುವ ಶಾಸ್ತ್ರಿ ಭವನದಲ್ಲಿ ಮಂಗಳವಾರ (ಏ 30) ಬೆಂಕಿ ಅವಘಡ ಸಂಭವಿಸಿತ್ತು. ಮಧ್ಯಾಹ್ನ 1.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ 7 ವಾಹನಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ನಲವತ್ತು ನಿಮಿಷದಲ್ಲಿ ಹತೋಟಿಗೆ ತಂದಿದ್ದರು.
ಕಾರ್ಪೊರೇಟ್ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ, ಕಾನೂನು ಸಚಿವಾಲಯ, ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್, ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳ ಸಚಿವಾಲಯಗಳು ಶಾಸ್ತ್ರಿ ಭವನದಲ್ಲಿದೆ.