ದೇವರಿಗೂ ರೈಲಿನಲ್ಲಿ ಆಸನ ಮೀಸಲು: ಭಕ್ತರಿಗೆ ಭೇಟಿಯ ಅವಕಾಶ
ನವದೆಹಲಿ, ಫೆಬ್ರವರಿ 17: ರೈಲಿನಲ್ಲಿ ಸೀಟನ್ನು ಮೀಸಲು ಪಡೆಯುವುದು ಹರಸಾಹಸವೇ ಸರಿ, ಕೆಲವೊಮ್ಮೆ ವಾರಗಟ್ಟಲೆ ಸೀಟಿಗಾಗಿ ಕಾಯಬೇಕಾಗುತ್ತದೆ. ಇನ್ನೊಂದೆಡೆ ಮಹಿಳೆಯರು, ವೃದ್ಧರು ಇನ್ನು ಕೆಲವು ವಿಶೇಷ ವ್ಯಕ್ತಿಗಳಿಗೆ ಸೀಟುಗಳನ್ನು ಮೀಸಲಿಡುತ್ತಾರೆ.
ಆದರೆ ಇದೇ ಮೊದಲ ಬಾರಿಗೆ ರೈಲಿನಲ್ಲಿ ದೇವರಿಗೂ ಸೀಟನ್ನು ಮೀಸಲಿಡಲಾಗಿದೆ.ರೈಲ್ವೆ ಇಲಾಖೆಯು ಮಹಾ ಶಿವರಾತ್ರಿ ಪ್ರಯುಕ್ತ ಮಹಾ ಶಿವನಿಗೂ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಿದೆ.
ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಉದ್ಘಾಟನೆ ಮಾಡಿರುವ ಕಾಶಿ ಮಹಾಕಾಳ ಎಕ್ಸ್ಪ್ರೆಸ್ ನಲ್ಲಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಜ್ಯೋತಿರ್ಲಿಂಗಗಳಿರುವ ಇಂದೋರ್ ಹಾಗೂ ವಾರಾಣಸಿ ನಡುವೆ ಸಂಚರಿಸುವ ಈ ರೈಲಿನಲ್ಲಿ ಒಂದು ಸೀಟನ್ನು ಮಹಾಶಿವನ ಹೆಸರಿನಲ್ಲಿ ಮೀಸಲಿಡಲಾಗಿದೆ.

ಅಂದಹಾಗೆ ಇಲ್ಲಿ ಯಾವುದೇ ವ್ಯಕ್ತಿಯೇನೂ ಪ್ರಯಾಣಿಸುವುದಿಲ್ಲ ಬದಲಾಗಿ ಬಿ-5 ಕೋಚಿನ ಸೀಟ್ ನಂಬರ್ 64 ರಲ್ಲಿ ಮಿನಿ ಶಿವ ದೇವಾಲಯವನ್ನು ನಿರ್ಮಿಸಲಾಗಿದೆ.
ಹೀಗಾಗಿ ಶಿವ ಭಕ್ತರು ಜ್ಯೋತಿರ್ಲಿಂಗ ಕ್ಷೇತ್ರಗಳಿಗೆ ಭೇಟಿ ನೀಡುವ ಮುನ್ನವೇ ಶಿವನ ದರ್ಶನ ಪಡೆಯಬಹುದಾಗಿದೆ. ಪೂಜಿಸಲು ಅವಕಾಶ ನೀಡಲಾಗಿದೆ.
ಆದರೆ ಈ ಮಿನಿ ಶಿವಾಲಯವು ವರ್ಷ ಪೂರ್ತಿ ಇರಲಿದೆಯೇ ಅಥವಾ ಮಹಾ ಶಿವರಾತ್ರಿಗೆ ತಾತ್ಕಾಲಿಕ ವ್ಯವಸ್ಥೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಹಾಗೆಯೇ ಈ ಟಿಕೆಟ್ ನ ವೆಚ್ಚವನ್ನು ಯಾರು ಭರಿಸಲಿದ್ದಾರೆ ಎನ್ನುವುದನ್ನೂ ರೈಲ್ವೆ ಇಲಾಖೆ ಇನ್ನೂ ಮಾಹಿತಿ ನೀಡಿಲ್ಲ.
ರೈಲ್ವೆ ಇಲಾಖೆಯ ಇತಿಹಸದಲ್ಲಿ ಇದೇ ಮೊದಲ ಬಾರಿ ರೈಲಿನಲ್ಲಿ ದೇವಾಲಯವೊಂದನ್ನು ನಿರ್ಮಿಸಲಾಗುತ್ತಿದೆ. ಫೆಬ್ರವರಿ 21ರಂದು ಇಡೀ ದೇಶದೆಲ್ಲೆಡೆ ಮಹಾ ಶಿವರಾತ್ರಿಯನ್ನು ಜಾಗರಣೆಯೊಂದಿಗೆ ಆಚರಿಸಲಾಗುತ್ತದೆ.












Click it and Unblock the Notifications