ದೆಹಲಿ ಗಡಿ ಸಿಂಘುವಿನಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ
ನವದೆಹಲಿ, ಜನವರಿ 29: ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಜಾಥಾ ಸಂದರ್ಭ ನಡೆದ ಗಲಭೆ ತಣ್ಣಗಾಯಿತು ಎನ್ನುತ್ತಿದ್ದಂತೆ ಇದೀಗ ಮತ್ತೆ ದೆಹಲಿ ಗಡಿ ಸಿಂಘುವಿನಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗಿದೆ.
ಶುಕ್ರವಾರ ಪ್ರತಿಭಟನಾನಿರತ ರೈತರು ಹಾಗೂ ಸ್ಥಳೀಯರು ಎಂದು ಹೇಳಿಕೊಂಡು ಬಂದ ಗುಂಪಿನ ನಡುವೆ ಘರ್ಷಣೆ ಆರಂಭವಾಗಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಗಲಭೆಯಲ್ಲಿ ಕಲ್ಲೆಸೆತವಾಗಿದ್ದು, ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ. ಬ್ಯಾರಿಕೇಡ್ ಗಳನ್ನೂ ಮುರಿದು ಹಾಕಲಾಗಿದೆ. ಈ ವೇಳೆ ಅಲಿಪುರ ಎಸ್ ಎಚ್ ಒ ಪ್ರದೀಪ್ ಕುಮಾರ್ ಮೇಲೆ ಕತ್ತಿಯಿಂದ ದಾಳಿ ನಡೆಸಿರುವುದಾಗಿ ಆರೋಪಿಸಲಾಗಿದೆ.
ಗಣರಾಜ್ಯೋತ್ಸದಂದು ದೆಹಲಿ ನಗರದಲ್ಲಿ ಗಲಭೆ ನಡೆದ ಬೆನ್ನಲ್ಲೇ ಕೆಲವು ರೈತ ಸಂಘಗಳು ಹೋರಾಟವನ್ನು ಹಿಂಪಡೆದುಕೊಂಡಿವೆ. ಆದರೆ ಹೋರಾಟದಿಂದ ಹಿಂದೆ ಸರಿಯದ ಇನ್ನೂ ಹಲವು ರೈತ ಸಂಘಗಳು ಗಡಿಯಲ್ಲೇ ಬೀಡುಬಿಟ್ಟಿದ್ದು, ಹೋರಾಟ ಮುಂದುವರೆಸಿವೆ.
ಈ ಸಂದರ್ಭ ಸಿಂಘು ಗಡಿಯನ್ನು ತೊರೆಯುವಂತೆ ಕೆಲವು ಸ್ಥಳೀಯರು ರೈತರಿಗೆ ಒತ್ತಾಯಿಸಿರುವುದಾಗಿ ತಿಳಿದುಬಂದಿದೆ. ರೈತರ ವಿರುದ್ಧ "ಸಿಂಘು ಗಡಿ ಖಾಲಿ ಮಾಡಿ" ಎಂಬ ಘೋಷಣೆ ಕೂಗುತ್ತಾ ಇಲ್ಲಿಂದ ಮರಳುವಂತೆ ಆಗ್ರಹಿಸಿದ್ದಾರೆ.
ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜಕ್ಕೆ ರೈತರು ಅವಮಾನ ಮಾಡಿದ್ದಾರೆ. ಅವರು ಇಲ್ಲಿಂದ ಮರಳಬೇಕು ಎಂದು ಸ್ಥಳೀಯರು ಒತ್ತಾಯ ಮಾಡಿದ್ದಾಗಿ ತಿಳಿದುಬಂದಿದೆ.

ರೈತರು ಮತ್ತು ಸ್ಥಳೀಯರ ನಡುವೆ ಈ ಸಂಬಂಧ ಘರ್ಷಣೆ ನಡೆದಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದ್ದಾರೆ.












Click it and Unblock the Notifications