ರಫೇಲ್: ಶನಿವಾರದೊಳಗೆ ಪ್ರತಿಕ್ರಿಯೆ ನೀಡಲು ಕೇಂದ್ರಕ್ಕೆ ಸುಪ್ರೀಂ ಸೂಚನೆ
ನವದೆಹಲಿ, ಏಪ್ರಿಲ್ 30: ರಫೇಲ್ ಪ್ರಕರಣದ ಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಶನಿವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಮಂಗಳವಾರ ಸುಪ್ರೀಂ ಕೋರ್ಟ್ ಹೇಳಿದೆ. ಈ ಸಂಬಂಧ ಕೋರ್ಟ್ ಸೋಮವಾರದಂದು ಅಹವಾಲು ಅಲಿಸಲಿದೆ. ಪ್ರತಿಕ್ರಿಯೆ ನೀಡಲು ನಾಲ್ಕು ವಾರದ ಸಮಯ ನೀಡಬೇಕೆಂದು ಕೇಂದ್ರ ಸರಕಾರ ಕೇಳಿತ್ತು. ಆದರೆ ಅದಕ್ಕೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪೀಠ ಒಪ್ಪಲಿಲ್ಲ.
ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ಬೇಕು. ಸದ್ಯಕ್ಕೆ ರಫೇಲ್ ಮೇಲ್ಮನವಿ ವಿಚಾರಣೆಯನ್ನು ತಡೆಹಿಡಿಯುವಂತೆ ಕೇಂದ್ರ ಸರಕಾರ ಕೇಳಿತ್ತು. ಇದಕ್ಕೂ ಮುನ್ನ, ಅರ್ಜಿದಾರರು ಸಲ್ಲಿಸಿದ್ದ ಕೆಲವು ದಾಖಲೆ ವಿಚಾರವಾಗಿ ಸರಕಾರ ಮಂಡಿಸಿದ್ದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.
ರಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು ಎಂಬ ಅರ್ಜಿಯನ್ನು ಕಳೆದ ವರ್ಷದ ಡಿಸೆಂಬರ್ ನಲ್ಲಿ ತಿರಸ್ಕರಿಸಿತ್ತು. ಆ ನಂತರ ತೀರ್ಪನ್ನು ಪ್ರಶ್ನಿಸಿದ ಅರ್ಜಿದಾರರು ಪುನರ್ ಪರಿಶೀಲನೆಗೆ ಮನವಿ ಸಲ್ಲಿಸಿದ್ದರು.

ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಅನಧಿಕೃತವಾಗಿ ನಕಲು ಮಾಡಿಕೊಂಡು, ಸೋರಿಕೆ ಆಗಿದೆ. ಇವುಗಳನ್ನು ಪರಿಗಣಿಸಬಾರದು. ಇವು ಸೂಕ್ಷ್ಮ ವಿಚಾರ ಎಂದು ಸರಕಾರ ವಾದ ಮಂಡಿಸಿತ್ತು. ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.
ಕಳೆದ ಡಿಸೆಂಬರ್ ನಲ್ಲಿ ರಫೇಲ್ ಯುದ್ಧ ವಿಮಾನ ಖರೀದಿ ಬಗ್ಗೆ ಸುಪ್ರೀಂ ಕೋರ್ಟ್ ನೀಡಿದ್ದ ಕ್ಲೀನ್ ಚಿಟ್ ಬಗ್ಗೆ ಕೇಂದ್ರದ ಮಾಜಿ ಸಚಿವರಾದ ಅರುಣ್ ಶೌರಿ, ಯಶವಂತ್ ಸಿನ್ಹಾ ಹಾಗೂ ವಕೀಲ ಪ್ರಶಾಂತ್ ಭೂಷಣ್ ಪುನರ್ ಪರಿಶೀಲನೆಗೆ ಅರ್ಜಿ ಹಾಕಿದ್ದಾರೆ.
ಈ ಮೂವರನ್ನು ಹೊರತುಪಡಿಸಿ ಎಎಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಪ್ರತ್ಯೇಕವಾದ ಪರಿಶೀಲನಾ ಅರ್ಜಿಯನ್ನು ಹಾಕಿದ್ದಾರೆ.












Click it and Unblock the Notifications