ಆಂಧ್ರ- ಕರ್ನಾಟಕ ಗಡಿ ಸಮೀಕ್ಷೆಗೆ ಸುಪ್ರೀಂ ಆದೇಶ

ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ್ ಅವರು ಅಕ್ರಮ ಗಣಿಗಾರಿಕೆ ತಡೆಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಉನ್ನತಾಧಿಕಾರ ಸಮಿತಿಗೆ (ಸಿಇಸಿ) ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿತ್ತು. ಅಕ್ರಮ ಗಣಿಗಾರಿಕೆ ನಡೆಸಿದ ಕಂಪನಿಗಳು ಉಭಯ ರಾಜ್ಯಗಳ ಗಡಿಯನ್ನೇ ಬದಲಾವಣೆ ಮಾಡಿವೆ ಎಂದು ಸಿಇಸಿ ವರದಿ ನೀಡಿತ್ತು.
ಅಕ್ರಮ ಗಣಿಗಾರಿಕೆಯಿಂದಾಗಿ ಗಡಿಗಳು ಬದಲವಾವಣೆಯಾಗಿವೆ. ವಾಸ್ತವಿಕ ಗಡಿ ಗುರುತಿಸುವ ಕಾರ್ಯ ನಡೆಬೇಕು ಎಂದು ಸಿಇಸಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು. ಸಿಇಸಿ ಶಿಫಾರಸಿ ಅನ್ವಯ ಸುಪ್ರೀಂ ಕೋರ್ಟ್ ಹಸಿರು ಪೀಠ ಗಡಿ ಗುರುತಿಸಲು ಸೋಮವಾರ ಆದೇಶ ನೀಡಿದೆ. ಗಡಿ ಸಮೀಕ್ಷೆಗೆ ಕರ್ನಾಟಕ-ಆಂಧ್ರ ಉಭಯ ರಾಜ್ಯಗಳು ಸಹಕಾರ ನೀಡಬೇಕು ಎಂದು ಸೂಚಿಸಿದೆ.
ಗಡಿ ವಿವಾದ ಹಿನ್ನಲೆ : ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ಜನಾರ್ದನರೆಡ್ಡಿ ಅವರ ಮೇಲೆ ರಾಜ್ಯದ ಗಡಿ ಮತ್ತು ಬಿಐಓಪಿ ಗಣಿಯನ್ನು ಒತ್ತುವರಿ ಮಾಡಿಕೊಂಡ ಆರೋಪಗಳು 2007 ರ ಜನವರಿ 15 ರಿಂದ ಇದೆ. ಗಣಿ ಉದ್ಯಮಿಗಳಾದ ನಾರಾಯಣ ರೆಡ್ಡಿ ಗಣಿ ಕಂಪನಿ ಸೇರಿದಂತೆ ವಿವಿಧ ಗಣಿಗಳ ಗಡಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಇವೆ.
ಕರ್ನಾಟಕ - ಆಂಧ್ರದ ಗಡಿಗಳನ್ನು ಗುರುತಿಸುವಂತೆ ಕೋರಿ ಟಪಾಲ್ ಗಣೇಶ್ ಮತ್ತು ಬಿಐಓಪಿ ಕಂಪನಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು. ನ್ಯಾಯಾಲಯ ಹಿಂದೆ ಸರ್ವೆ ಆಫ್ ಇಂಡಿಯಾಕ್ಕೆ ಆದೇಶ ನೀಡಿ, ಸರ್ವೆ ಅಧಿಕಾರಿ ಎ.ಕೆ. ಪಾದ, ಅರಣ್ಯ ಅಧಿಕಾರಿ ದೀಪಕ್ ಶರ್ಮಾ ನೇತೃತ್ವದಲ್ಲಿ ಗಡಿಗಳನ್ನು ಗುರುತಿಸುವಂತೆ ಸೂಚಿಸಿತ್ತು.
ಎ.ಕೆ. ಪಾದ ನೇತೃತ್ವದ ಈ ವರದಿಯು ಏಕಪಕ್ಷೀಯವಾಗಿದ್ದು, ಕರ್ನಾಟಕ್ಕೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗುತ್ತದೆ. ಉತ್ತಮ ಕಬ್ಬಿಣದ ಅದಿರು ಇರುವ ಸ್ಥಳ ಆಂಧ್ರದ ಪಾಲಾಗುತ್ತದೆ ಎಂಬ ಆರೋಪಗಳಿದ್ದವು. ಆದ್ದರಿಂದ ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ, ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಎ.ಕೆ. ಪಾದ ಮತ್ತು ದೀಪಕ್ ಶರ್ಮ ನೇತೃತ್ವದ ವರದಿಯನ್ನು ತಿರಸ್ಕರಿಸಲು ಮನವಿ ಸಲ್ಲಿಸಿದ್ದರು.












Click it and Unblock the Notifications