ವೈದ್ಯರ ನಿರ್ಲಕ್ಷ್ಯದಿಂದ ಸಾವು, 6 ಕೋಟಿ ಪರಿಹಾರ

ಗುರುವಾರ ಈ ಕುರಿತು ಆದೇಶ ನೀಡಿರುವ ಸುಪ್ರೀಂಕೋರ್ಟ್, ವೈದ್ಯರ ನಿರ್ಲಕ್ಷ್ಯದಿಂದ ಸಾವಿಗೀಡಾದ ಎನ್ ಆರ್ ಐ ವೈದ್ಯೆ ಅನುರಾಧ ಸಹಾ ಪತಿ ಕುನಾಲ್ ಸಹಾ ಅವರಿಗೆ ಪರಿಹಾರದ ಹಣ ನೀಡುವಂತೆ ಕೋಲ್ಕತ್ತಾದ ಅಡ್ವಾನ್ಸ್ ಡ್ ಮೆಡಿಕೇರ್ ಅಂಡ್ ರಿಸರ್ಚ್ ಇನ್ಸ್ ಟಿಟ್ಯೂಟ್ ಗೆ ಆದೇಶ ನೀಡಿದೆ.
ಆಸ್ಪತ್ರೆಯ ಮೂವರು ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಸಾವನ್ನಪ್ಪಿರುವುದು ಸಾಬೀತಾಗಿದ್ದು, ಮೂವರೂ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಮತ್ತು ಉಳಿದ ಪರಿಹಾರದ ಹಣವನ್ನು ಆಸ್ಪತ್ರೆ ಆಡಳಿತ ಮಂಡಳಿ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಪ್ರಕರಣವೇನು : 1998ರಲ್ಲಿ ಏಪ್ರಿಲ್-ಮೇ ತಿಂಗಳ ರಜೆಯ ಪ್ರವಾಸಕ್ಕಾಗಿ ಕುನಾಲ್ ದಂಪತಿ ಕೋಲ್ಕತ್ತಾಗೆ ಭೇಟಿ ನೀಡಿದ್ದರು. ಈ ಸಂದರ್ಭ ಅನುರಾಧ ಸಹಾ ಟಾಕ್ಸಿಕ್ ಎಪಿಡರ್ಮಲ್ ನೆಕ್ರೋಲಿಸಿಸ್' ಎಂಬ ಅಪರೂಪದ ಮತ್ತು ಮಾರಣಾಂತಿಕ ರೋಗಕ್ಕೆ ತುತ್ತಾಗಿದ್ದರು.
ತನ್ನ ದೇಹದ ಮೇಲೆ ರೋಗದ ಕಲೆಗಳನ್ನ ಗುರುತಿಸಿದ ಅನುರಾಧ ಕೋಲ್ಕತ್ತಾದ ಅಮ್ರಿ (ಅಡ್ವಾನ್ಸ್ ಡ್ ಮೆಡಿಕೇರ್ ಅಮಡ್ ರಿಸರ್ಚ್ ಇನ್ಸ್ ಟಿಟ್ಯೂಟ್ ) ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದರು.
ಮೇ 11ರಂದು ಅನುರಾಧರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿತ್ತು. ಆದರೆ, ಮೇ.16 ರವರೆಗೂ ಚಿಕಿತ್ಸೆ ನೀಡಿದರೂ, ಅವರು ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರಲಿಲ್ಲ. ಆದ್ದರಿಂದ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಕೋಲ್ಕತ್ತಾ ಆಸ್ಪತ್ರೆಯಲ್ಲಿ ಅನುರಾಧಾ ಅವರಿಗೆ ಓವರ್ ಡೋಸ್ ಸ್ಟಿರಾಯ್ಡ್ ನೀಡಿದ್ದರಿಂದ ಅವರ ಸ್ಥಿತಿ ಗಂಭೀರವಾಗಿತ್ತು. ಮೇ.28ರಂದು ಅವರು ಸಾವನ್ನಪ್ಪಿದ್ದರು.
ಕೋಲ್ಕತ್ತಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಾಗಿ ಅನುರಾಧ ಸಾವನ್ನಪ್ಪಿದ್ದಾರೆ. ಆಸ್ಪತ್ರೆ ಪರಿಹಾರ ನಿಡಬೇಕು ಎಂದು ಅನುರಾಧ ಪತಿ ಕುನಾಲ್ ಸಹಾ ದೂರು ದಾಖಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ, ಸುಪ್ರೀಂಕೋರ್ಟ್ ಕೋಲ್ಕತ್ತಾ ಆಸ್ಪತ್ರೆಗೆ 6 ಕೋಟಿ ರೂ. ಪರಿಹಾರ ನೀಡುವಂತೆ ಆದೇಶ ನೀಡಿದೆ. ದೇಶವ ವೈದ್ಯಕೀಯ ಇತಿಹಾಸದಲ್ಲೇ ಇಷ್ಟು ಮೊತ್ತದ ಪರಿಹಾರ ನೀಡಲು ಆದೇಶ ನೀಡಿರುವುದು ಇದೇ ಮೊದಲು.












Click it and Unblock the Notifications