ನಿರ್ಭಯಾ ಪ್ರಕರಣ: ಆರೋಪಿಗಳ ಮರಣದಂಡನೆಗೆ ಇನ್ನೆಷ್ಟು ವಿಳಂಬ?
ನವದೆಹಲಿ, ಡಿಸೆಂಬರ್ 13: ಇನ್ನು ಮೂರು ದಿನ ಕಳೆದರೆ, ಅಂದರೆ ಡಿಸೆಂಬರ್ 16 ಕ್ಕೆ 'ನಿರ್ಭಯಾ ಪ್ರಕರಣ' ಎಂಬ ಕರಾಳ ದಿನಕ್ಕೆ ಬರೋಬ್ಬರಿ ಆರು ವರ್ಷವಾಗುತ್ತದೆ! ಆದರೆ ಆಕೆಯ ಮೇಲೆ ಅತ್ಯಂತ ಅಮಾನುಷವಾಗಿ, ವಿಕೃತವಾಗಿ ಅತ್ಯಾಚಾರ ನಡೆಸಿ ಕೊಂದ ಆರೋಪಿಗಳಿಗೆ ಮಾತ್ರ ಇಂದಿಗೂ ಗಲ್ಲುಶಿಕ್ಷೆಯಾಗಿಲ್ಲ.
ನನ್ನ ಮಗಳನ್ನು ಕೊಂದವರನ್ನು ಯಾಕಿನ್ನೂ ಗಲ್ಲಿಗೇರಿಸಿಲ್ಲ? ನಿರ್ಭಯಾ ತಾಯಿ
ಆರೋಪಿಗಳನ್ನು ಎರಡು ವಾರಗಳೊಳಗೆ ಗಲ್ಲಿಗೇರಿಸಬೇಕೆಂದು ವಕೀಲ ಅಲಾಖ್ ಅಲೋಕ್ ಶ್ರೀವತ್ಸ್ ಎಂಬುವವರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿದೆ.
ರಕ್ಕಸರಿಗೆ ಗಲ್ಲು: ಸುಪ್ರೀಂ ತೀರ್ಪಿಗೆ ಟ್ವಿಟ್ಟಿಗರ ಹರ್ಷ
ಎರಡು ವಾರಗಳೊಳಗೆ ನಿರ್ಭಯಾ ಅವರನ್ನು ಕೊಂದ ಮುಕೇಶ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಅಕ್ಷಯ್ ಎಂಬ ನಾಲ್ವರು ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಶ್ರೀವತ್ಸ ಕೋರಿದ್ದರು. ಶಿಕ್ಷೆ ತಡವಾದಷ್ಟೂ ನ್ಯಾಯಾಂಗದ ಮೇಲಿನ ಭರವಸೆ ಕಡಿಮೆಯಾಗುತ್ತದೆ ಮತ್ತು ಇಂಥ ಪ್ರಕರಣಗಳು ಹೆಚ್ಚಾಗುತ್ತವೆ ಎಂಬ ಕಳವಳವನ್ನೂ ಶ್ರೀವತ್ಸ ತಮ್ಮ ಅರ್ಜಿಯಲ್ಲಿ ವ್ಯಕ್ತಪಡಿಸಿದ್ದರು.ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಅದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.
2017 ರ ಮೇ 5 ರಂದು ನಿರ್ಭಯಾ ಪ್ರಕರಣದ ನಾಲ್ವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಲ್ಲಿ ಒಬ್ಬ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರೆ, ಇನ್ನೋರ್ವ ಬಾಲಾಪರಾಧಿ ಎಂಬ ಕಾರಣಕ್ಕೆ ಆತನಿಗೆ ಮೂರು ವರ್ಷಗಳ ಕಾಲವಷ್ಟೇ ಜೈಲುಶಿಕ್ಷೆ ನೀಡಿ ಬಿಡುಗಡೆ ಮಾಡಲಾಗಿದೆ.
ನಿರ್ಭಯಾ ಕೇಸ್ : 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ ಖಾಯಂ, ಸುಪ್ರೀಂ ಆದೇಶ
ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡುವಂತೆ ನಾಲ್ವರಲ್ಲಿ ಮೂವರು ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ಈ ಮೊದಲೇ ವಜಾ ಮಾಡಿತ್ತು.
2012 ರ ಡಿಸೆಂಬರ್ 16 ರಂದು ದೆಹಲಿಯಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಚಲಿಸುತ್ತಿರುವ ಬಸ್ಸಿನಲ್ಲೇ ಅತ್ಯಾಚಾರ ಎಸಗಲಾಗಿತ್ತು. ಆಕೆಯೊಂದಿಗಿದ್ದ ಆಕೆಯ ಪ್ರಿಯಕರನನ್ನೂ ಥಳಿಸಿ, ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ಅತ್ಯಾಚಾರಕ್ಕೊಳಗಾದ ನಿರ್ಭಯಾ ಚಿಕಿತ್ಸೆ ಫಲಕಾರಿಯಾಗದೆ, ಕೆಲದಿನಗಳಲ್ಲೇ ಅಸುನೀಗಿದ್ದರು.