ಆರೆಸ್ಸೆಸ್ ಹಸ್ತಕ್ಷೇಪ : ಶಿರೋಮಣಿಯಿಂದ ಎನ್ಡಿಎ ಮೈತ್ರಿ ತ್ಯಜಿಸುವ ಬೆದರಿಕೆ
ನವದೆಹಲಿ, ಫೆಬ್ರುವರಿ 1 : ತನಗೆ ಮುಂದಿರುವ ಮಹಾಮೈತ್ರಿಕೂಟದ ಸವಾಲನ್ನು ಸಮರ್ಥವಾಗಿ ಎದುರಿಸಲು ತನ್ನ ಮಿತ್ರಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿ ಮೇಲೆ ಬೆದರಿಕೆ ಮೂಲಕ ಒತ್ತಡ ಹೇರುವ ಪ್ರಯತ್ನಗಳು ಆರಂಭವಾಗಿವೆ.
ಅಲ್ಲದೆ ಸಿಖ್ಖರ ಧಾರ್ಮಿಕ ಕ್ರಿಯೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಸ್ತಕ್ಷೇಪ ಮಾಡುತ್ತಿದೆ ಎಂದು ಶಿರೋಮಣಿ ಅಕಾಲಿ ದಳ ಆರೋಪಿಸಿದೆ. ಇದು ಕೂಡ ಎನ್ಡಿಎ ಮೈತ್ರಿಯಿಂದ ಹೊರಬರುವ ಬೆದರಿಕೆ ಒಡ್ಡಲು ಕಾರಣ.
ಎನ್ಡಿಎ ಆಯೋಜಿಸಿದ್ದ ಸಭೆಯನ್ನು ಬಹಿಷ್ಕರಿಸಿದ್ದ ಶಿರೋಮಣಿ ಅಕಾಲಿ ದಳ (ಎಸ್ಎಡಿ) ತನ್ನ ಬೇಡಿಕೆಗಳನ್ನು ಈಡೇರಿಸದೆಯೇ ಇದ್ದರೆ ಲೋಕಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಬೆದರಿಕೆ ಒಡ್ಡಿದೆ.
ಎಸ್ಎಡಿ ನಾಯಕಿ ಮತ್ತು ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಆಯೋಜಿಸಿದ್ದ ಭೋಜನಕೂಟದಲ್ಲಿ ಬಿಜೆಪಿಯ ಹಿರಿಯ ನಾಯಕರೆಲ್ಲರೂ ತೆರಳಿದ್ದರು. ಆದರೆ, ಎನ್ಡಿಎ ನಡೆಸಿದ ಸಭೆಗೆ ಬಿಜೆಪಿಯ ದೀರ್ಘಕಾಲದ ಮಿತ್ರಪಕ್ಷ ಎಸ್ಎಡಿ ಗೈರು ಹಾಜರಾಗಿದೆ.

ತಮ್ಮ ಧಾರ್ಮಿಕ ಪ್ರದೇಶಗಳ ನಿರ್ವಹಣೆಯ ಚಟುವಟಿಕೆಗಳಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದರೂ ಬಿಜೆಪಿ ನಾಯಕತ್ವ ಏನೂ ಮಾಡುತ್ತಿಲ್ಲ. ಅಲ್ಪಸಂಖ್ಯಾತರ ವಿರುದ್ಧ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ತನ್ನ ಮುಖಂಡರನ್ನು ತಡೆಯುತ್ತಿಲ್ಲ. ರೈತರಿಗೆ ಪ್ಯಾಕೇಜ್ ನೀಡಬೇಕೆಂಬ ತನ್ನ ಬೇಡಿಕೆಯನ್ನು ನಿರ್ಲಕ್ಷಿಸಿದೆ ಎಂದು ಎಸ್ಎಡಿಯ ಹಿರಿಯ ಮುಖಂಡ ಮತ್ತು ರಾಜ್ಯ ಸಭಾ ಸದಸ್ಯ ನರೇಶ್ ಗುಜ್ರಾಲ್ ಆರೋಪಿಸಿದ್ದಾರೆ.
'ಗುರುದ್ವಾರ ನಿರ್ವಹಣೆಯ ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದಂತೆ ಬಿಜೆಪಿಗೆ ನಮ್ಮ ಪಕ್ಷ ಸೂಚಿಸಿತ್ತು. ನಮ್ಮ ಧಾರ್ಮಿಕ ವಿಚಾರಗಳಲ್ಲಿಯೂ ಮೂಗು ತೂರಿಸದಂತೆ ಹೇಳಿತ್ತು. ಆದರೆ, ಆರೆಸ್ಸೆಸ್ ಸಿಖ್ಖರ ಧಾರ್ಮಿಕ ಸಂಗತಿಗಳಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತಲೇ ಇದೆ. ಇದಕ್ಕೆ ನಾವು ಅನುವು ಮಾಡಿಕೊಡಲು ಸಾಧ್ಯವಿಲ್ಲ' ಎಂದು ಅವರು ಬಜೆಟ್ ಕಲಾಪದ ಮೊದಲ ದಿನ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಎನ್ಡಿಎ ಸಭೆಯಲ್ಲಿ ಭಾಗವಹಿಸದೆ ಇರಲು ನಿರ್ಧರಿಸಿದ ಬಳಿಕ ತಿಳಿಸಿದ್ದಾರೆ.
ಈ ಸಭೆಯ ಬಹಿಷ್ಕಾರದ ನಿರ್ಧಾರವನ್ನು ಮುಂದುವರಿಸುತ್ತೇವೆ. ನಮ್ಮ ಬೇಡಿಕೆಗಳ ವಿಚಾರದಲ್ಲಿ ಬಿಜೆಪಿ ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದರೆ ತಾರ್ಕಿಕವಾಗಿ ನಾವು ಬೇರ್ಪಡುತ್ತೇವೆ ಎಂದು ಹೇಳಿದ್ದಾರೆ.
ಶಿರೋಮಣಿ ಉಳಿಸಿಕೊಳ್ಳಲು ಸ್ವಾಮಿ ಸಲಹೆ : ಶಿರೋಮಣಿ ಅಕಾಲಿ ದಳ ನಮ್ಮ (ಬಿಜೆಪಿಯ) ಹಳೆಯ ಸಂಗಾತಿಯಾಗಿದ್ದು, ಮೈತ್ರಿಕೂಟದಲ್ಲಿ ಅವರನ್ನು ಉಳಿಸಿಕೊಳ್ಳಲು ಒಂದು ಹೆಜ್ಜೆ ಮುಂದೆ ಇಟ್ಟರೆ ತಪ್ಪೇನಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲಹೆ ನೀಡಿದ್ದಾರೆ.












Click it and Unblock the Notifications