ವಾರಾಂತ್ಯದ ಲಾಕ್ಡೌನ್ಗೆ ಸಿದ್ಧ, ನ್ಯಾಯಾಲಯದ ಅನುಮತಿ ಮುಖ್ಯ- ದೆಹಲಿ ಸರ್ಕಾರ
ನವದೆಹಲಿ, ನವೆಂಬರ್ 16: ದೆಹಲಿಯಲ್ಲಿ ದಿನೇ ದಿನೇ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು ಆತಂಕ ಹೆಚ್ಚಾಗಿದೆ. ವಾಯುಮಾಲಿನ್ಯ ಜನರ ಆರೋಗ್ಯದ ಮೇಲೆ ಪರಿಣಾಮ ಬೀರದೇ ಇರಲು ದೆಹಲಿ ಸರ್ಕಾರ ಸರ್ಕಾರಿ ನೌಕರರಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದೆ. ಜೊತೆಗೆ ಶಾಲೆಗೂ ರಜೆ ಘೋಷಿಸಿದೆ. ಇದರೊಂದಿಗೆ ವಾರಾಂತ್ಯದ ಲಾಕ್ಡೌನ್ಗೆ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದೆ.
ರಾಜಧಾನಿಯ ವಿಷಕಾರಿ ವಾಯು ಬಿಕ್ಕಟ್ಟಿನ ವಿರುದ್ಧ ಹೋರಾಡಲು ಇಂದು ಸುಪ್ರೀಂಕೋರ್ಟ್ ಆದೇಶಿಸಿದ ತುರ್ತು ಸಭೆಯಲ್ಲಿ ದೆಹಲಿ ಸರ್ಕಾರವು ವಾರಾಂತ್ಯದ ಲಾಕ್ಡೌನ್ ಸಕಲ ಸಿದ್ಧತೆ ಮಾಡಿಕೊಂಡಿರುವುದಾಗಿ ತಿಳಿಸಿದೆ. ಜೊತೆಗೆ ಒಂದು ವಾರದವರೆಗೆ ಶಾಲೆಗಳನ್ನು ಮುಚ್ಚಲು ಹಾಗೂ ನೌಕರರಿಗೆ ಮನೆಯಿಂದ ಕೆಲಸ ಮಾಡುವಂತೆ ಸೂಚಿಸಿದೆ. ಮಾತ್ರವಲ್ಲದೆ ನಗರದಲ್ಲಿ ನಿರ್ಮಾಣ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ವಿರಾಮಗೊಳಿಸುವಂತೆ ದೆಹಲಿ ಸರ್ಕಾರ ಶಿಫಾರಸು ಮಾಡಿದೆ. ಸುಪ್ರೀಂಕೋರ್ಟ್ ವಾಯುಮಾಲಿನ್ಯ ಬಿಕ್ಕಟ್ಟಿನ ಬಗ್ಗೆ ಕಠಿಣ ಪ್ರಶ್ನೆಗಳನ್ನು ಎತ್ತಿದ್ದು ತುರ್ತು ಕ್ರಮಗಳನ್ನು ಜಾರಿಗೊಳಿಸುವಂತೆ ಸೂಚಿಸಿದ ನಂತರ ಕೇಂದ್ರ ಮತ್ತು ದೆಹಲಿಯ ಅಧಿಕಾರಿಗಳು ಇಂದು ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿದ ದೆಹಲಿ ಸಚಿವ ಗೋಪಾಲ್ ರೈ "ನಾವು ವಾರಾಂತ್ಯದ ಲಾಕ್ಡೌನ್ ಅನ್ನು ಪ್ರಸ್ತಾಪಿಸಿದ್ದೇವೆ. ಜೊತೆಗೆ ಅದಕ್ಕೆ ಬೇಕಾದ ಸಿದ್ಧತೆಯನ್ನೂ ಮಾಡಿಕೊಂಡಿದ್ದೇವೆ. ಲಾಕ್ಡೌನ್ ಈಗ ನ್ಯಾಯಾಲಯದ ನಿರ್ದೇಶನಗಳನ್ನು ಅವಲಂಬಿಸಿರುತ್ತದೆ" ಎಂದು ತಿಳಿಸಿದ್ದಾರೆ. ಜೊತೆಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು. ದೆಹಲಿ ಮತ್ತು ಸುತ್ತಮುತ್ತಲಿನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸುಪ್ರೀಂಕೋರ್ಟ್ ನಿನ್ನೆ ಸೂಚಿಸಿದ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಲಾಯಿತು. ಕೇಂದ್ರ ಸರ್ಕಾರದೊಂದಿಗೆ ತುರ್ತು ಸಭೆ ನಡೆಸಿ ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ.
"ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಒಂದು ವಾರದವರೆಗೆ ಮನೆಯಿಂದಲೇ ಕೆಲಸ ಮಾಡಲು" ನ್ಯಾಯಾಧೀಶರು ಹೇಳಿದರು. ಕಳೆ ಸುಡುವಿಕೆಯು ದೆಹಲಿಯ ಒಟ್ಟು ವಾಯುಮಾಲಿನ್ಯದಲ್ಲಿ ಶೇಕಡಾ 4 ರಷ್ಟಿದೆ ಎಂದು ಕೇಂದ್ರ ತಿಳಿಸಿದ್ದು "ಇದಕ್ಕೆ ಯಾವುದೇ ಆಧಾರವಿಲ್ಲ" ಎಂದು ನ್ಯಾಯಾಲಯ ಹೇಳಿದೆ. ನೆರೆಯ ಹರಿಯಾಣ ಮತ್ತು ಪಂಜಾಬ್ನಲ್ಲಿ ಕೃಷಿ ಬೆಂಕಿಯಿಂದ ಹೊರಹೊಮ್ಮುವ ಕಲುಷಿತ ಗಾಳಿಯೆ ಮಾಲಿನ್ಯಕ್ಕೆ ಕಾರಣವೆಂದು ಹೇಳುವ ದೆಹಲಿ ಸರ್ಕಾರದ ಹೇಳಿಕೆಯನ್ನು ಖಂಡಿಸಿದ ನ್ಯಾಯಾಲಯ ತರಾಟೆ ತೆಗೆದುಕೊಂಡಿದೆ. ಕುಂಟು ನೆಪಗಳಿಂದ ವಾಯುಮಾಲಿನ್ಯ ನಿಯಂತ್ರಣಕ್ಕೆ ಬಾರದು. ಸರಿಯಾದ ಪರಿಶೋಧನೆಯನ್ನು ನಡೆಸುವಂತೆ ಒತ್ತಾಯಿಸಿದೆ
ನವೆಂಬರ್ ಆರಂಭದಿಂದಲೂ ವಿಷಕಾರಿ ಗಾಳಿಯನ್ನು ಎದುರಿಸುತ್ತಿರುವ ದೆಹಲಿಯು ವಾರಾಂತ್ಯದಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಂಡಿತು. ಶಾಲೆಗಳನ್ನು ಮುಚ್ಚಲು ಮತ್ತು ಕಟ್ಟಡದ ಕೆಲಸವನ್ನು ನಾಲ್ಕು ದಿನಗಳವರೆಗೆ ನಿಲ್ಲಿಸಲು ಆದೇಶಿಸಿತು. ನೆರೆಯ ಪ್ರದೇಶಗಳಿಗೆ ಇದೇ ರೀತಿಯ ನಿರ್ಬಂಧಗಳನ್ನು ಅನ್ವಯಿಸುವ ಮೂಲಕ ಪರಿಣಾಮ ಬೀರಬಹುದು. ಅದಾಗ್ಯೂ ವಾಯು ಮಾಲಿನ್ಯದ ವಿರುದ್ಧ ಹೋರಾಡಲು ಸಂಪೂರ್ಣ ಲಾಕ್ಡೌನ್ನಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ ಎಂದು ದೆಹಲಿ ಸರ್ಕಾರ ನಿನ್ನೆ ವಿಚಾರಣೆಯ ಮೊದಲು ಸಲ್ಲಿಸಿದ ಅಫಿಡವಿಟ್ನಲ್ಲಿ ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಪ್ರಪಂಚದ ಅತ್ಯಂತ ಕಲುಷಿತ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಕೃಷಿ ತ್ಯಾಜ್ಯವನ್ನು ಸುಡುವುದು, ಸಾರಿಗೆಯಿಂದ ಹೊರಸೂಸುವ ಹೊಗೆ, ನಗರದಿಂದ ಹೊರಗಿರುವ ಕಲ್ಲಿದ್ದಲು ಸ್ಥಾವರಗಳು ಮತ್ತು ಇತರ ಕೈಗಾರಿಕೆಗಳು, ಹಾಗೆಯೇ ತೆರೆದ ಕಸವನ್ನು ಸುಡುವುದು ಮತ್ತು ಧೂಳಿನಿಂದ ಕಲುಷಿತಗೊಳ್ಳುತ್ತಿದೆ. ಸೋಮವಾರ ದೆಹಲಿಯಲ್ಲಿ ಗಾಳಿಯ ಗುಣಮಟ್ಟದ ಸೂಚ್ಯಂಕವು 343 ರಷ್ಟಿತ್ತು, ಇದು "ಅತ್ಯಂತ ಕಳಪೆ" ಸಂಕೇತವಾಗಿದೆ. ಇದು ಉಸಿರಾಟದ ಕಾಯಿಲೆಗೆ ಕಾರಣವಾಗಬಹುದು.