ಭಾರತದ ಆರ್ಥಿಕತೆ, ಸಂಕಷ್ಟದಲ್ಲಿರುವ ಸಾಲಗಾರರಿಗೆ ಆರ್ ಬಿಐ 'ಶಕ್ತಿ'!
ನವದೆಹಲಿ, ಮೇ.22: ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕಾಗಿ ನಾಲ್ಕನೇ ಹಂತದ ಭಾರತ ಲಾಕ್ ಡೌನ್ ಮುಂದುವರಿಸಲಾಗಿದೆ. ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿರುವ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಿಹಿಸುದ್ದಿಯನ್ನು ನೀಡಿದ್ದಾರೆ.
Recommended Video
ಭಾರತದ ಆರ್ಥಿಕತೆ ಶಕ್ತಿ ತುಂಬುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಕ್ರಮಗಳನ್ನು ತೆಗೆದುಕೊಂಡಿದೆ. ದೇಶದಲ್ಲಿ ಕೈಗಾರಿಕಾ ಉತ್ಪಾದನಾ ಪ್ರಮಾಣದಲ್ಲಿ ಶೇ.17ರಷ್ಟು ಕುಸಿತ ಕಂಡು ಬಂದಿದೆ. ರಫ್ತು ಪ್ರಮಾಣವು ಶೇ.60ರಷ್ಟು ಕಡಿಮೆಯಾಗಿದೆ.
ಸಾಲಗಾರರಿಗೆ ಸಿಹಿಸುದ್ದಿ: ಇಎಂಐ ಪಾವತಿಗೆ ಮೂರು ತಿಂಗಳ ವಿನಾಯಿತಿ
ಭಾರತ ಲಾಕ್ ಡೌನ್ 4.0 ನಡುವೆ ತೀವ್ರ ಸಂಕಷ್ಟದಲ್ಲಿರುವ ಭಾರತೀಯ ಉತ್ಪಾದನಾ ಮಾರುಕಟ್ಟೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಣೆಗಳನ್ನು ಹೊರಡಿಸಿದೆ. ಇದರ ನಡುವೆ ಸಾಲದ ಸುಳಿಯಲ್ಲಿ ಸಿಲುಕಿದವರಿಗೂ ಗುಡ್ ನ್ಯೂಸ್ ಕೊಟ್ಟಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನಡೆಸಿದ ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು ಇಲ್ಲಿವೆ.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಶೇ.4ಕ್ಕೆ ಇಳಿಕೆ
ಭಾರತದಲ್ಲಿ 40 ಬೇಸಿಸ್ ಪಾಯಿಂಟ್ ರೆಪೋ ದರವನ್ನು ಕಡಿತಗೊಳಿಸಲಾಗಿದೆ. ಇದರಿಂದ ಈ ಮೊದಲ ಶೇ.4.4ರಷ್ಟಿದ್ದ ರೆಪೋ ದರವನ್ನು ಶೇ.4ಕ್ಕೆ ಇಳಿಸಲಾಗಿದೆ. ರಿವರ್ಸ್ ರೆಪೋ ದರವನ್ನು ಶೇ.3.75ರಿಂದ ಶೇ.3.35ಕ್ಕೆ ಇಳಿಸಿದ್ದು ಬ್ಯಾಂಕ್ ಗಳಿಗೆ ಇದರ ಪ್ರಯೋಜನವಾಗಲಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಕಡಿತೊಗಳಿಸಿದ್ದರಿಂದ ಸಾಲದ ಮೇಲಿನ ಬಡ್ಡಿದರವು ಕಡಿಮೆಯಾಗಲಿದೆ. ಇದರ ಜೊತೆಗೆ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲದ ಮೇಲಿನ ಇಎಂಐ ಹಣವು ಕಡಿಮೆಯಾಗಲಿದೆ.
ಇಎಂಐ ಅವಧಿ ಮೂರು ತಿಂಗಳಿಗೆ ವಿಸ್ತರಣೆ
ಮೂರು ತಿಂಗಳ ಅವಧಿಗೆ ಇಎಂಐ ಪಾವತಿಸುವುದನ್ನು ವಿಸ್ತರಿಸಿದೆ. ಸಾಲದ ಮೇಲಿನ ಕಂತು ಪಾವತಿ ದಿನಾಂಕವನ್ನು ಜೂನ್.1ರಿಂದ ಆಗಸ್ಟ್.31ರವರೆಗೂ ವಿಸ್ತರಣೆ ಮಾಡಲಾಗಿದೆ. ಗೃಹಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲ ಸೇರಿದಂತೆ ಎಲ್ಲ ರೀತಿಯ ಸಾಲದ ಕಂತು ಪಾವತಿ ದಿನಾಂಕವನ್ನು ವಿಸ್ತರಿಸಲಾಗಿದೆ. ಮುಂದಿನ ಮೂರು ತಿಂಗಳವರೆಗೂ ಎಲ್ಲ ರೀತಿಯ ಸಾಲಗಳ ಇಎಂಐ ಕಟ್ಟುವಂತಿಲ್ಲ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.
ಮಾರುಕಟ್ಟೆಗೆ ಚೈತನ್ಯ ತುಂಬಲು 15 ಸಾವಿರ ಕೋಟಿ ಘೋಷಣೆ
ಭಾರತದಲ್ಲಿ ಆಮದು ಪ್ರಮಾಣದಲ್ಲಿ ಶೇ.5.8ರಷ್ಟು ಕುಸಿತ ಕಂಡಿದೆ. ಲಾಕ್ ಡೌನ್ ಸಂದರ್ಭದಲ್ಲಿ ಉತ್ಪಾದನೆ ಮತ್ತು ಪೂರೈಕೆಯಲ್ಲಿ ಕುಸಿತ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಚೈತನ್ಯ ನೀಡುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ 15 ಸಾವಿರ ಕೋಟಿ ರೂಪಾಯಿ ಘೋಷಿಸಿದೆ.
ಭಾರತದ ಜಿಡಿಪಿಗೆ ಮೊದಲ ತ್ರೈಮಾಸಿಕದಲ್ಲಿ ಹೊಡೆತ
ಭಾರತದ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪಾದನೆ(ಜಿಡಿಪಿ)ಗೆ ಭಾರೀ ಹೊಡೆತ ಬೀಳುವ ನಿರೀಕ್ಷೆಯಿದೆ. ಕೈಗಾರಿಕೆಗಳಲ್ಲಿ ಉತ್ಪಾದನೆ ಪ್ರಮಾಣ ತೀರಾ ಕಡಿಮೆಯಾಗಿದ್ದರೂ ಕೃಷಿ ಚಟುವಟಿಕೆಗಳಲ್ಲಿನ ಬೆಳವಣಿಗೆ ಹೊಸ ಆಶಾಕಿರಣವನ್ನು ಮೂಡಿಸಿದೆ. ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಶೇ.3.7ರಷ್ಟು ಏರಿಕೆ ಕಂಡು ಬಂದಿದೆ. ಇದರಿಂದ 2020-21ನೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ದೇಶೀಯ ಉತ್ಪಾದನೆ ಪ್ರಮಾಣದಲ್ಲಿ ಸುಧಾರಣೆ ಕಂಡು ಬರುವ ಸಾಧ್ಯತೆಗಳಿವೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ.