ರಾಜಸ್ಥಾನ ಸಚಿವರ ಮಗನ ವಿರುದ್ಧ ಅತ್ಯಾಚಾರ ಆರೋಪ, ಎಫ್ಐಆರ್
ನವದೆಹಲಿ, ಮೇ 9: ರಾಜಸ್ಥಾನ ಸಚಿವರೊಬ್ಬರ ಮಗನ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ. ಬೇರೊಂದು ಧರ್ಮದ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಇದಾಗಿದ್ದು, ಸಚಿವರ ಮಗನ ವಿರುದ್ಧ ಸಂತ್ರಸ್ತೆ ನೀಡಿದ ದೂರಿನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬುದು ಯುವತಿ ಮಾಡಿರುವ ಆರೋಪ. ರಾಜಸ್ಥಾನದಲ್ಲಿ ಈಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೆಹಲಿಯ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರನ್ನು ಆಧರಿಸಿ ಶೂನ್ಯ ಎಫ್ಐಆರ್ ದಾಖಲು ಮಾಡಲಾಗಿದೆ. ಬಳಿಕ ಎಫ್ಐಆರ್ ಅನ್ನು ರಾಜಸ್ಥಾನಕ್ಕೆ ವರ್ಗಾಯಿಸಲಾಗಲಿದೆ.
"ಅತ್ಯಾಚಾರ ಆಗಿದೆ ಎಂದು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಝೀರೋ ಎಫ್ಐಆರ್ ದಾಖಲಿಸಲಾಗಿದೆ. ಮದುವೆಯ ನೆಪದಲ್ಲಿ ತನ್ನ ಮೇಲೆ ಆ ವ್ಯಕ್ತಿ ಅತ್ಯಾಚಾರ ಎಸಗಿದರೆಂದು ಮಹಿಳೆ ಆರೋಪಿಸಿದ್ದಾರೆ. ತನಿಖೆ ನಡೆಸಲು ಎಫ್ಐಆರ್ ಅನ್ನು ರಾಜಸ್ಥಾನಕ್ಕೆ ವರ್ಗಾಯಿಸಲಾಗುತ್ತಿದೆ" ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಏನಿದ ಝೀರೋ ಎಫ್ಐಆರ್?: ಮಾಮೂಲಿಯ ಎಫ್ಐಆರ್ಗೂ ಶೂನ್ಯ ಎಫ್ಐಆರ್ಗೂ ಒಂದೇ ವಿಷಯದಲ್ಲಿ ವ್ಯತ್ಯಾಸ ಇದೆ. ಮಾಮೂಲಿಯ ಎಫ್ಐಆರ್ ಅನ್ನು ಘಟನೆ ನಡೆದ ಸ್ಥಳದ ವ್ಯಾಪ್ತಿಗೆ ಬರುವ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗುತ್ತದೆ. ಝೀರೋ ಎಫ್ಐಆರ್ ಅನ್ನು ಯಾವ ಪೊಲೀಸ್ ಠಾಣೆಯಲ್ಲಿ ಬೇಕಾದರೂ ದಾಖಲು ಮಾಡಬಹುದು. ಪ್ರಕರಣದ ಗಂಭೀರತೆ ನೋಡಿಕೊಂಡು ಪೊಲೀಸರು ಝೀರೋ ಎಫ್ಐಆರ್ ದಾಖಲು ಮಾಡಬಹುದಾ? ಎಂದು ನಿರ್ಧರಿಸುತ್ತಾರೆ.
ಸಂತ್ರಸ್ತೆಯ ದೂರಿನ ಅನ್ವಯ ಆರೋಪಿ ಆಕೆಯ ಜೊತೆ ದೀರ್ಘ ಕಾಲದಿಂದ ಸಂಪರ್ಕದ್ದ. ತನ್ನ ಮೇಲೆ ಹಲ್ಲೆ ಕೂಡ ಆಗಿದೆ. ಪ್ರಜ್ಞಾಶೂನ್ಯ ಸ್ಥಿತಿಯಲ್ಲಿದ್ದಾಗ ತನ್ನ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
2021, ಸೆಪ್ಟೆಂಬರ್ 3 ಮತ್ತು 4ರಂದು ನಾನು ದೆಹಲಿಗೆ ಸಂದರ್ಶನಕ್ಕೆಂದು ಬಂದಿದ್ದೆ. ಅದಾಗಲೇ ಆರೋಪಿಯು ದೆಹಲಿಗೆ ಬಂದಿದ್ದರು. ಹೋಟೆಲ್ವೊಂದರಲ್ಲಿ ರೂಮ್ ಬುಕ್ ಮಾಡುತ್ತಾರೆ. ಅದರಲ್ಲಿ ನಮ್ಮನ್ನು ಗಂಡ ಮತ್ತು ಹೆಂಡತಿ ಎಂದು ನಮೂದಿಸುತ್ತಾರೆ. ನನ್ನನ್ನು ಮದುವೆಯಾಗುವುದಾಗಿ ಅವರು ಭರವಸೆ ಕೊಡುತ್ತಾರೆ.

ಅದಾದ ಬಳಿಕ ಹಲವು ಬಾರಿ ಆತ ನನ್ನ ಮೇಲೆ ಅತ್ಯಾಚಾರ ಎಸಗಿ, ಅದರ ಚಿತ್ರೀಕರಣ ಮಾಡುತ್ತಾರೆ. ಯಾರಿಗಾದರೂ ಈ ವಿಷಯ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ಬೆದರಿಕೆ ಹಾಕುತ್ತಾರೆ. ತನ್ನ ಹೆಂಡತಿಗೆ ಡಿವೋರ್ಸ್ ಪಡೆಯುತ್ತಿದ್ದು, ನನ್ನನ್ನು ಮದುವೆಯಾಗುವುದಾಗಿ ಹೇಳುತ್ತಾರೆ. ಹಲವು ಸಂದರ್ಭಗಳಲ್ಲಿ ಅವರು ನನ್ನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದಾರೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ, ತಾವಿಬ್ಬರೂ ವಯಸ್ಕರಾಗಿದ್ದು ತಮ್ಮಿಚ್ಛೆಯಂತೆ ದೈಹಿಕ ಸಂಬಂಧ ಹೊಂದಿದ್ದೇವೆ ಎಂದು ಸಂತ್ರಸ್ತೆ ಹೇಳಿರುವುದನ್ನ ಆರೋಪಿ ಅಫಿಡವಿಟ್ ಮಾಡಿದ್ದಾರೆ ಎಂಬ ಮಾಹಿತಿ ಇದೆ. ರಾಜಸ್ಥಾನ ಸಚಿವರ ಮಗನಾಗಿರುವ ಆರೋಪಿಯ ಹೆಸರನ್ನು ಬಹಿರಂಗಪಡಿಸದೇ ಗೌಪ್ಯವಾಗಿಡಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications