ಧಾಂಧೂಂ ಅಂತ ರಾಮ ಮಂದಿರದ ನಿರ್ಮಾಣ : ಸಾಧುಸಂತರ ಘೋಷಣೆ
ನವದೆಹಲಿ, ನವೆಂಬರ್ 03 : ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತು ಬಾಬ್ರಿ ಮಸೀದಿ ಧ್ವಂಸ ಮಾಡಿದ ವರ್ಷಾಚರಣೆ ಸನಿಹಕ್ಕೆ ಬರುತ್ತಿದ್ದಂತೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆ ಬೇಡವೆ ಎಂಬ ಬಗ್ಗೆ ಚರ್ಚೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ.
ರಾಮ ಮಂದಿರ ನಿರ್ಮಾಣ ಮಾಡಲು ತುದಿಗಾಲಿನಲ್ಲಿ ನಿಂತಿರುವ ಹಿಂದೂ ಸಂಘಟನೆಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘ, ರಾಮ ಮಂದಿರ ನಿರ್ಮಾಣವನ್ನು ಬೆಂಬಲಿಸುವವರು ವಿವಾದಿತ ರಾಮ ಜನ್ಮಭೂಮಿ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಿಸಲು, 1992ರ ಮಾದರಿಯ ಹೋರಾಟಕ್ಕೆ ಸಿದ್ಧರಿರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ರಾಮ ಮಂದಿರ ನಿರ್ಮಾಣಕ್ಕಾಗಿ ಚಿಂತನಮಂಥನ ನಡೆಸಲು 3 ಸಾವಿರಕ್ಕೂ ಹೆಚ್ಚು ಸಾಧುಗಳು, ಸಂತರಿರುವ ಅಖಿಲ ಭಾರತೀಯ ಸಂತ ಸಮಿತಿ ದೆಹಲಿಯ ಸ್ಟೇಡಿಯಂನಲ್ಲಿ ಎರಡು ದಿನಗಳ ಸಭೆಯನ್ನು ಶನಿವಾರ ಆರಂಭಿಸಿದ್ದು, ದೀಪಾವಳಿಯ ನಂತರ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಕಟ್ಟಾ ಹಿಂದೂವಾದಿ ಯೋಗಿ ಆದಿತ್ಯನಾಥ್ ಅವರು, ದೀಪಾವಳಿಯ ಸುಸಂದರ್ಭದಲ್ಲಿ ಅಯೋಧ್ಯೆಯಲ್ಲಿ, ರಾಮ ಜನ್ಮಭೂಮಿಯ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ಬಗ್ಗೆ ಸಿಹಿ ಸುದ್ದಿಯನ್ನು ನೀಡುವುದಾಗಿ ಈಗಾಗಲೆ ಘೋಷಿಸಿದ್ದಾರೆ. ಇದನ್ನು ಉತ್ತರ ಪ್ರದೇಶದ ಬಿಜೆಪಿ ನಾಯಕ ಮಹೇಂದ್ರ ಪಾಂಡೆ ಅವರು ಕೂಡ ಖಚಿತಪಡಿಸಿದ್ದಾರೆ.

ಧಾಂಧೂಂ ಅಂತ ರಾಮ ಮಂದಿರ ನಿರ್ಮಾಣ
ಧೂಂ ಧಾಂ ಅಂತ ರಾಮ ಮಂದಿರ ನಿರ್ಮಾಣವಾಗುತ್ತದೆ. ಡಿಸೆಂಬರ್ 6ರಂದೆ ಶಿಲಾನ್ಯಾಸ ಮಾಡಲಾಗುತ್ತದೆ. ಹಿಂದೂಸ್ತಾನದ ಹಿಂದೂಗಳನ್ನು ಅಯೋಧ್ಯೆಗೆ ಕರೆಯಿರಿ, ರಾಮ ಮಂದಿರದ ಘೋಷಣೆ ಮಾಡಿರಿ. ನಮಗೆ ಯಾರ (ಸರ್ವೋಚ್ಚ ನ್ಯಾಯಾಲಯದ) ಅನುಮತಿಯ ಅಗತ್ಯವಿಲ್ಲ. ರಾಮ ಮಂದಿರ ನಿರ್ಮಾಣ ಆಗೇ ಆಗುತ್ತದೆ ಎಂದು ಸಾಧ್ವಿ ಪ್ರಚಿ ಅವರು ತಲ್ಕಾಟೋರಾ ಸ್ಟೇಡಿಯಂನಲ್ಲಿ ಘೋಷಣೆ ಮಾಡಿದ್ದಾರೆ. ಇದಕ್ಕೆ ಸಭೆಯಲ್ಲಿ ಒಕ್ಕೊರಲಿನಿಂದ ಸಹಮತಿ ವ್ಯಕ್ತವಾಗಿದೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಉವಾಚ
ಇದಕ್ಕೆ ಪೂರಕವೆಂಬಂತೆ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಆಗಿರು ರಾಮ್ ಮಾಧವ್ ಅವರು, ರಾಮ ಮಂದಿರ ನಿರ್ಮಾಣಕ್ಕೆ ಮಸೂದೆ ಮಂಡಿಸಲೇಬೇಕೆಂದು ಸಂಘ ಮತ್ತು ಸಾಧು ಸಂತರಿಂದ ಬೇಡಿಕೆಯಿದೆ. ಮಂದಿರ ನಿರ್ಮಾಣದ ಬಗ್ಗೆ 1992ಕ್ಕಿಂತ ಮೊದಲು ಇದ್ದ ಅನಿಸಿಕೆಯನ್ನು ನ್ಯಾಯಾಂಗ ಏಕೆ ಹೊಂದಿದೆಯೋ ಗೊತ್ತಿಲ್ಲ. ನ್ಯಾಯಾಲಯದ ಉದಾಸೀನತೆಯಿಂದಾಗಿ ಆರೆಸ್ಸೆಸ್ ಮತ್ತು ಸಾಧುಸಂತರು ಧೃತಿಗೆಡುತ್ತಿದ್ದಾರೆ, ವಿಚಲಿತರಾಗುತ್ತಿದ್ದಾರೆ ಎಂದು ಅಭಿಮತ ವ್ಯಕ್ತಪಡಿಸಿದ್ದಾರೆ. 1992ರ ಸಮಯದಲ್ಲಿ ನಡೆಸಲಾಗಿದ್ದ ಆಂದೋಲನವನ್ನೇ ಮತ್ತೆ ಆರಂಭಿಸುವುದಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳಿದ್ದಕ್ಕೆ ಪ್ರತಿಯಾಗಿ ರಾಮ್ ಮಾಧವ್ ಅವರು ಈರೀತಿ ಪ್ರತಿಕ್ರಿಯಿಸಿದ್ದಾರೆ.

ಮಂದಿರ ನಿರ್ಮಾಣದ ಬಗ್ಗೆ ಕಾನೂನು ರೂಪಿಸಿ
ಮಾಜಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಸಿಡಿದೆದ್ದಿದ್ದ ಸರ್ವೋಚ್ಚ ನ್ಯಾಯಾಲಯದ ನಾಲ್ವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ಜಸ್ತಿ ಚಲಮೇಶ್ವರ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರಕಾರ ಕಾನೂನು ರೂಪಿಸುವುದು ಸಾಧ್ಯವಿದೆ. ಮಸೂದೆ ಮಂಡಿಸಿ ನ್ಯಾಯಾಲಯದ ನಿರ್ಣಯವನ್ನು ಬದಲಿಸಿದ ಹಲವಾರು ಘಟನೆಗಳು ನಮ್ಮ ಮುಂದಿವೆ. ಈ ನಿಟ್ಟಿನಲ್ಲಿ ವಿವಾದಿತ ರಾಮ ಜನ್ಮಭೂಮಿ ಕುರಿತ ಪ್ರಕರಣ ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆಗಿದ್ದರೂ, ಕೇಂದ್ರ ಸರಕಾರ ಮಸೂದೆಯನ್ನು ತಂದು ರಾಮ ಮಂದಿರ ನಿರ್ಮಾಣ ಮಾಡಬಹುದು ಎಂದು ಕೇಂದ್ರ ಸರಕಾರಕ್ಕೆ ಕಿವಿಮಾತು ಹೇಳಿದ್ದಾರೆ.

ರಾಜನಾಥ್ ಸಿಂಗ್ ಆಡಿರುವ ಮಹತ್ವದ ಮಾತು
ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರು ಮಹತ್ವದ ಮಾತೊಂದನ್ನು ವಾರಣಾಸಿಯಲ್ಲಿ ಶನಿವಾರ ಆಡಿದ್ದಾರೆ. ಅದೇನೆಂದರೆ, ಒಂದು ವೇಳೆ ರಾಮ ಮಂದಿರ ನಿರ್ಮಾಣವಾದರೆ ಎಲ್ಲರೂ ಖುಷಿಯಾಗಿರುತ್ತಾರೆ ಎಂದು ಹೇಳಿದ್ದಾರೆ. ಇದು ಕೇಂದ್ರ ಸರಕಾರದ ನಿಲುವನ್ನು ದೃಢಪಡಿಸಿದಂತಿದೆ. ದೀಪಾವಳಿಯ ನಂತರ ರಾಮ ಮಂದಿರದ ನಿರ್ಮಾಣದ ಆರಂಭಿಕ ಕಾಮಗಾರಿ ಶುರುವಾಗುತ್ತದೆ ಎಂದು ಯೋಗಿ ಆದಿತ್ಯನಾಥ ಕೂಡ ಹೇಳಿದ್ದರು.

ಅಯೋಧ್ಯೆಯಲ್ಲಿ ಮಂದಿರ, ಲಖನೌದಲ್ಲಿ ಮಸೀದಿ
ರಾಮ ಜನ್ಮಭೂಮಿ ನ್ಯಾಸದ ಅಧ್ಯಕ್ಷರಾಗಿರುವ ರಾಮ್ ವಿಲಾಸ್ ವೇದಾಂತಿ ಅವರು, ಮಸೂದೆ ಮಂಡನೆಯಾಗಲಿ ಬಿಡಲಿ, ಪರಸ್ಪರ ಒಪ್ಪಂದದ ಮೇರೆಗೆ ಡಿಸೆಂಬರ್ ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಆರಂಭವಾಗುತ್ತದೆ ಮತ್ತು ಲಖನೌದಲ್ಲಿ ಬಾಬ್ರಿ ಮಸೀದಿಯ ನಿರ್ಮಾಣವಾಗುತ್ತದೆ ಎಂದು ಹಿಂದೂ ಮುಸ್ಲಿಂರು ಒಪ್ಪತಕ್ಕಂತ ಮಾತು ಆಡಿದ್ದಾರೆ. ನಮಗೆ ನಮಾಜು ಮಾಡಲು ಮಸೀದಿ ನಿರ್ಮಾಣವಾಗಬೇಕು ಎಂದು ಮುಸ್ಲಿಂರು ಪಟ್ಟು ಹಿಡಿದಿದ್ದರು. ಆದರೆ, ನಮಾಜು ಮಾಡಲು ಮಸೀದಿಯೇ ಆಗಬೇಕೆಂದೇನಿಲ್ಲ ಎಂದು ಅಲಹಾಬಾದ್ ಕೋರ್ಟ್ 1994ರಲ್ಲಿಯೇ ಮಹತ್ವದ ತೀರ್ಪು ನೀಡಿದೆ.

ರಾಮ ಮಂದಿರ ಪಾಕ್ ನಲ್ಲಿ ನಿರ್ಮಾಣವಾಗಬೇಕೆ?
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ದೆಹಲಿಯ ಮುಸ್ಲಿಂ ಮೌಲ್ವಿಗಳು ಸಹಮತ ಹೊಂದಿದ್ದಾರೆ ಮತ್ತು ತಮ್ಮ ಬಿಗು ನಿಲುವನ್ನು ಸಡಿಲಗೊಳಿಸುತ್ತಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಶಾಸಕ ರೋಶನ್ ಬೇಗ್ ಅವರು ಕೂಡ, "ಮುಸ್ಲಿಮರು ಎಂದಿಗೂ ರಾಮಮಂದಿರ ನಿರ್ಮಾಣವನ್ನು ವಿರೋಧಿಸಿಲ್ಲ. ರಾಮ ಮಂದಿರವನ್ನು ಭಾರತದಲ್ಲಲ್ಲದೆ ಪಾಕಿಸ್ತಾನದಲ್ಲಿ ನಿರ್ಮಿಸುವುದಕ್ಕಾಗುತ್ತದೆಯೇ? ಅದನ್ನು ಭಾರತದಲ್ಲೇ ಕಟ್ಟಬೇಕು. ಸದ್ಯಕ್ಕೆ ಈ ವಿವಾದ ಕೋರ್ಟಿನಲ್ಲಿದೆ. ಆದರೆ ಈ ಸಂದರ್ಭದಲ್ಲಿ ಬಿಜೆಪಿ ಕಾನೂನು ತರುವ ಬಗ್ಗೆ ಚಿಂತನೆ ನಡೆಸುತ್ತಿದೆ" ಎಂದು ಹೇಳಿಕೆ ನೀಡಿದ್ದರು.

151 ಅಡಿ ಎತ್ತರ ರಾಮನ ಪುತ್ಥಳಿ
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಸರಯೂ ನದಿಯ ದಡದ ಮೇಲೆ 151 ಅಡಿ ಎತ್ತರ ರಾಮನ ಪುತ್ಥಳಿಯ ನಿರ್ಮಾಣದ ಘೋಷಣೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿಯ ದಿನವೇ ಮಾಡುವ ಸಾಧ್ಯತೆಯಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್ ಅವರು, ಈ ವಿಷಯವನ್ನು ಸರ್ದಾರ ವಲ್ಲಭ್ ಭಾಯಿ ಪಟೇಲ್ ಅವರ ಪುತ್ಥಳಿಯ ಅನಾವರಣದ ಸಂದರ್ಭದಲ್ಲಿಯೇ ಪ್ರಕಟಿಸಬಹುದಾಗಿತ್ತಲ್ಲ. ಅದನ್ನು ಯಾರು ವಿರೋಧಿಸುತ್ತಾರೆ? ನಾವು ಸ್ವಾಗತಿಸುತ್ತೇವೆ. ಅದಕ್ಕಿಂತ ಉದ್ದವಾದ ಪುತ್ಥಳಿಯನ್ನು ರಾಂಪುರದಲ್ಲಿ ನಿರ್ಮಿಸುತ್ತೇವೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.












Click it and Unblock the Notifications