''750 ಭೂಮಾಪಕರ ನೇಮಕಾತಿ: ಅಭ್ಯರ್ಥಿಗಳಿಗೆ ಉದ್ಯೋಗವು ಇಲ್ಲ, ಶುಲ್ಕ ವಾಪಾಸ್ ನೀಡಿಲ್ಲ''
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಈ ಪೈಕಿ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗ (KPSC) ಮೂಲಕ 750 ಭೂಮಾಪಕರ (Surveyors) ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಶಲ್ಕ ಸಮೇತವಾಗಿ ಅರ್ಜಿಗಳನ್ನು ಸ್ವೀಕರಿಸಿತ್ತು. ನಂತರ ಕಾರಣಾಂತರಗಳಿಂದ ನೇಮಕಾತಿ ಸ್ಥಗಿತಗೊಳಿಸಿದ್ದ ಸರ್ಕಾರ ಈವರೆಗೆ ಪುನಃ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಿಲ್ಲ. ಇತ್ತ ಶುಲ್ಕ ಕಟ್ಟಿದ ಅಭ್ಯರ್ಥಿಗಳ ಹಣ ಸಹಿತ ಮರಳಿ ನೀಡಿಲ್ಲ. ಇದು ಜನಾಕ್ರೋಶಕ್ಕೆ ಕಾರಣವಾಗಿದ್ದು, ವಿಪಕ್ಷ ನಾಯಕ ಆರ್.ಅಶೋಕ್ ಈ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
2024ರ ಫೆಬ್ರವರಿಯಲ್ಲಿ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಒಳಗೊಂಡಂತೆ 750 ಭೂಮಾಪಕರ ನೇಮಕಾತಿಗೆ ಅರ್ಜಿಗಳನ್ನು ಕರೆದಿತ್ತು. ಅರ್ಜಿ ಪ್ರಕ್ರಿಯೆ ನಡೆಸಿ ಶುಲ್ಕ ಪಾವತಿ ಅದ ಬಳಿಕ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮುನ್ನವೇ ಭರ್ತಿ ಪ್ರಕ್ರಿಯೆ ಸ್ಥಗತವಾಯಿತು. ಈ ಬಗ್ಗೆ ಸರ್ಕಾರ ತುಟ್ಟಿ ಬಿಚ್ಚದೇ ಮೌನ ವಹಿಸಿದೆ ಎಂದು ಅಭ್ಯರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

"ಕಮಿಷನ್ ಮಾಸ್ಟರ್"ಡಿಕೆಶಿ ಲೂಟಿ ಸರ್ಕಾರ
ಇದೇ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೇಮಕಾತಿಯೂ ಇಲ್ಲ, ಕಟ್ಟಿದ ಹಣವೂ ವಾಪಸ್ ಇಲ್ಲ! ಇದು ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಲೂಟಿ ಸರ್ಕಾರದ ಅಸಲಿ ಮುಖ ಎಂದು ಅವರು ಲೇವಡಿ ಮಾಡಿದರು.
ಕರ್ನಾಟಕ ಲೋಕಸೇವಾ ಆಯೋಗ (KPSC) ಮೂಲಕ ನೂರಾರು ಭೂಮಾಪಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಲಕ್ಷಾಂತರ ನಿರುದ್ಯೋಗಿ ಯುವಕರಿಂದ ಕೋಟ್ಯಂತರ ರೂಪಾಯಿ ಲೂಟಿ ಮಾಡಿದೆ. ಈಗ ಪರೀಕ್ಷೆಯನ್ನೂ ರದ್ದುಗೊಳಿಸಲಾಗಿದೆ. ಇತ್ತ ಉದ್ಯೋಗವೂ ಇಲ್ಲ, ಅತ್ತ ಯುವಕರು ಕಷ್ಟಪಟ್ಟು ಕಟ್ಟಿದ ಅರ್ಜಿ ಶುಲ್ಕವನ್ನೂ ವಾಪಸ್ ನೀಡದೇ ಈ ಕಾಂಗ್ರೆಸ್ ಸರ್ಕಾರ ಮಹಾವಂಚನೆ ಮಾಡಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಯುವಕರ ಜೀವನದ ಜತೆ ಸರ್ಕಾರ ಚೆಲ್ಲಾಟ
ಉದ್ಯೋಗಾಕಾಂಕ್ಷಿಗಳ ಕನಸಿನ ಜೊತೆ ಚೆಲ್ಲಾಟವಾಡುವುದು ಈ ಲಜ್ಜೆಗೆಟ್ಟ ಕಾಂಗ್ರೆಸ್ ರಾಜ್ಯ ಸರ್ಕಾರದ ಚಾಳಿಯಾಗಿದೆ. ರಾಜ್ಯದಲ್ಲಿ ಬರೋಬ್ಬರಿ 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ ಎಂದು ಇವರದ್ದೇ ಅಧಿಕೃತ ದಾಖಲೆಗಳು ಹೇಳುತ್ತಿವೆ. ಶಾಸಕ ಆರ್.ವಿ. ದೇಶಪಾಂಡೆ ಸಮಿತಿ ವರದಿಯ ಪ್ರಕಾರ ರಾಜ್ಯದಲ್ಲಿ 7 ಲಕ್ಷ ನಿರುದ್ಯೋಗಿಗಳು ಸರ್ಕಾರಿ ನೌಕರಿಯ ನಿರೀಕ್ಷೆಯಲ್ಲಿದ್ದಾರೆ. ಆದರೂ ಹುದ್ದೆಗಳನ್ನು ಭರ್ತಿ ಮಾಡದ ಈ ಸರ್ಕಾರ, ಯುವಕರ ಭವಿಷ್ಯವನ್ನು ಕತ್ತಲಿಗೆ ತಳ್ಳುತ್ತಿದೆ ಎಂದು ಸರ್ಕಾರದ ನಡೆ ವಿರುದ್ಧ ಅಸಮಾಧಾನ ಹೊರ ಹಾಕಿದರು.
ರಾಜ್ಯದಲ್ಲಿ ಸದ್ಯಕ್ಕೆ 5.72 ಲಕ್ಷಕ್ಕೂ ಹೆಚ್ಚು ಸರ್ವೇ ಅರ್ಜಿಗಳು ಬಾಕಿ ಉಳಿದಿವೆ. ಭೂಮಾಪಕರಿಲ್ಲದೆ ಜಮೀನು ಅಳತೆ, ಪೋಡಿ, ನಕ್ಷೆ ತಯಾರಿಕೆಗೆ ಅನ್ನದಾತರು ವರ್ಷಗಟ್ಟಲೆ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಸಕಾಲಕ್ಕೆ ದಾಖಲೆ ಸಿಗದೆ ಬೆಳೆ ಸಾಲವೂ ಸಿಗದೆ ಕಣ್ಣೀರು ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ರಿಯಲ್ ಎಸ್ಟೇಟ್ ದಂಧೆ ಮತ್ತು ಕಮಿಷನ್ ಲೂಟಿಯಲ್ಲಿ ಬ್ಯುಸಿಯಾಗಿರುವ ನಿಮಗೆ ಯುವಕರ, ರೈತರ ಕಷ್ಟ ಕಾಣಿಸುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಉದ್ಯೋಗಾಕಾಂಕ್ಷಿಗಳಿಂದ ವಸೂಲಿ ಮಾಡಿದ ಕೋಟ್ಯಂತರ ರೂಪಾಯಿ ಹಣ ಯಾರ ಜೇಬು ಸೇರಿದೆ? ಯುವಕರ ಅರ್ಜಿ ಶುಲ್ಕದಲ್ಲೂ ನಿಮ್ಮ ಕಮಿಷನ್ ಕಾರುಬಾರು ನಡೆಯುತ್ತಿದೆಯೇ?. ಕೂಡಲೇ ರದ್ದುಗೊಂಡಿರುವ ನೇಮಕಾತಿ ಪ್ರಕ್ರಿಯೆ ಮರು ಚಾಲನೆಗೊಳಿಸಿ, ಖಾಲಿ ಇರುವ ಎಲ್ಲಾ ಭೂಮಾಪಕರ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕು. ಇಲ್ಲವೇ ಅಭ್ಯರ್ಥಿಗಳಿಂದ ಕಿತ್ತುಕೊಂಡ ಹಣವನ್ನು ತಕ್ಷಣವೇ ವಾಪಸ್ ನೀಡಬೇಕು. ಇಲ್ಲದಿದ್ದರೆ ಈ ನೊಂದ ಲಕ್ಷಾಂತರ ಯುವಕರು ಮತ್ತು ಅನ್ನದಾತರು ನಿಮ್ಮ ಈ ಜನವಿರೋಧಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.













Click it and Unblock the Notifications