ಜಾನ್ ಕೆರಿಗೆ ಟ್ರಾಫಿಕ್ ನರಕ ತೋರಿಸಿದ ದೆಹಲಿ ಮಳೆ
ನವದೆಹಲಿ, ಆಗಸ್ಟ್, 31: ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ವರುಣ ಆರ್ಭಟಿಸುತ್ತಾ ಇದ್ದಾನೆ. ನವದೆಹಲಿ ಮತ್ತು ಗುರುಗ್ರಾಮದ ಸುತ್ತ-ಮುತ್ತ ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಮಂಗಳವಾರ ಆರಂಭವಾದ ಮಳೆ ಬುಧವಾರವೂ ಮುಂದುವರಿದಿದೆ. ಸುಳಿಗಾಳಿ ಪರಿಣಾಮ ಚೆನ್ನೈ ಮತ್ತು ಬೆಂಗಳೂರಿನಲ್ಲೂ ಮಳೆಯಾಗುತ್ತಿದೆ. ಸದ್ಯ ನವದೆಹಲಿಯ ಉಷ್ಣಾಂಶದಲ್ಲಿ ಕುಸಿತವಾಗಿದೆ. ಮೋಡ ಕವಿದ ವಾತಾವರಣ ದೆಹಲಿಯಲ್ಲಿ ಮನೆಮಾಡಿದೆ. ಹೈದರಾಬಾದಿನಲ್ಲೂ ಸಹ ಮಳೆಯಾಗುತ್ತಿದೆ.[ಸುಳಿಗಾಳಿ ಪರಿಣಾಮ 2 ದಿನ ಭಾರೀ ಮಳೆ ಸಾಧ್ಯತೆ]
ಭಾರತ ಪ್ರವಾಸದಲ್ಲಿರುವ ಅಮೆರಿಕ ಕಾರ್ಯದರ್ಶಿ ಜಾನ್ ಕೆರಿ ನವದೆಹಲಿ ಮಳೆಯನ್ನು ತಮಾಷೆಯ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದು ಸುದ್ದಿಯಾಗಿದೆ. ಐಐಟಿ- ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಾನ್ ಕೆರಿ, ನೀವೇನು ಬೋಟ್ ನಲ್ಲಿ ಬಂದ್ರಾ? ಅಥವಾ ನೆಲ, ನೀರು ಎರಡರಲ್ಲೂ ಸಂಚರಿಸುವ ವಾಹನಗಳಲ್ಲಿ ಬಂದ್ರಾ ಎಂದು ಹಾಸ್ಯ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ತಾಣದಲ್ಲಿ ವ್ಯತಿರಿಕ್ತ ಅಭಿಪ್ರಾಯಗಳು ದಾಖಲಾಗಿವೆ.
ಟ್ರಾಫಿಕ್ ಅರಣ್ಯ
ಧಾರಾಕಾರ ಮಳೆ ಪರಿಣಾಮ ದೆಹಲಿ ಟ್ರಾಫಿಕ್ ರಾಜ್ಯವಾಗಿ ಮಾರ್ಪಟ್ಟಿದೆ. ಜಾನ್ ಕೆರಿ ಕೆಲವೆಡೆಗೆ ತೆರಳುವುದನ್ನು ರದ್ದು ಮಾಡಿದ್ದಾರೆ. ತಮ್ಮ ಬೆಂಗಾವಲು ಪಡೆಯೊಂದಿಗೆ ವಿಮಾನ ನಿಲ್ದಾಣದಿಂದ ಹೋಟೆಲ್ ಗೆ ತೆರಳಲು ಸುಮಾರು ಒಂದು ಗಂಟೆ ಕೆರಿ ಟ್ರಾಫಿಕ್ ನಲ್ಲಿ ಕಾದರು.
ಟ್ವಿಟರ್ ಟ್ರೆಂಡ್
ದೆಹಲಿ ನಾಗರಿಕರು ಟ್ವಿಟ್ಟರ್ ಬಳಸಿಕೊಂಡು ಮಳೆ ಮತ್ತು ಅವಘಡದ ಮಾಹಿತಿಯನ್ನು ಎಲ್ಲರಿಗೂ ತಿಳಿಸುತ್ತಿದ್ದಾರೆ. ಗಾಳಿಯ ವೇಗ ಯಾವ ಪ್ರಮಾಣದಲ್ಲಿದೆ? ಟ್ರಾಫಿಕ್ ಹೇಗಿದೆ ? ಎಂಬುದನ್ನು ದಾಖಲಿಸುತ್ತಿದ್ದಾರೆ.
ಸಂಚಾರ ವ್ಯತ್ಯಯ
ಮಳೆ ಪರಿಣಾಮ ವಿಮಾನ ಹಾರಾಟ, ರಸ್ತೆ ಸಾರಿಗೆ ಸಂಚಾರಕ್ಕೆ ವ್ಯತ್ಯಯವುಂಟಾಗಿದೆ. ರಸ್ತೆ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ದ್ವಿಚಕ್ರ ವಾಹನ ಸವಾರರ ಪರದಾಟ ಮಾತ್ರ ಯಾರಿಗೂ ಬೇಡ.
ಸಕಲ ಮುನ್ನೆಚ್ಚರಿಕೆ
ನವದೆಹಲಿ ಪೊಲೀಸರು ಜನರಿಗೆ ಸಕಲ ಮುನ್ನೆಚ್ಚರಿಕೆ ಕ್ರಮದ ಬಗ್ಗೆ ತಿಳಿಸಿದ್ದು ಅನಿವಾರ್ಯ ಇದ್ದರೆ ಮಾತ್ರ ಸಂಚರಿಸಿ. ಡಿವೈಡರ್ ಗಳು ಮತ್ತು ಅಪಾಯಕಾರಿ ಮಾರ್ಗಗಳ ಬಗ್ಗೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದ್ದರು.