ಸೈನಿಕರ ರಕ್ತಕ್ಕೆ ಕಾಂಗ್ರೆಸ್ ಕ್ರೆಡಿಟ್ ಪಡೆದುಕೊಳ್ಳಲಿಲ್ಲ: ರಾಹುಲ್ ಗಾಂಧಿ
ನವದೆಹಲಿ, ಮೇ 4: ರಫೇಲ್ ಡೀಲ್ನಲ್ಲಿ 30 ಸಾವಿರ ಕೋಟಿ ರೂಪಾಯಿ ಲೂಟಿ ಆಗಿದೆ. ಈ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ. ಹೀಗಾಗಿ ಅಲ್ಲಿ ಕ್ಷಮೆ ಕೋರಿದ್ದೇನೆ. ಆದರೆ ಈಗಲೂ 'ಚೌಕಿದಾರ್ ಚೋರ್ ಹೈ' ಹೇಳಿಕೆಗೆ ಬದ್ಧನಾಗಿದ್ದೇನೆ. ಚೌಕಿದಾರ್ ಚೋರ್ ಎನ್ನುವುದು ಸತ್ಯ ಮತ್ತು ವಾಸ್ತವ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನನ್ನ ಜತೆ 5-10ನಿಮಿಷ ಚರ್ಚೆಗೆ ಬರಲಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸವಾಲು ಹಾಕಿದರು.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ಪ್ರಧಾನಿ ಮೋದಿ, ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದರು.
ಅಮೇಥಿಯ ಜನರಿಗೆ ಬಹಿರಂಗ ಪತ್ರ ಬರೆದ ರಾಹುಲ್ ಗಾಂಧಿ
ಆಡಳಿತ ಪಕ್ಷದ ಪರವಾಗಿ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಸಾಂವಿಧಾನಿಕ ಸಂಸ್ಥೆಯು ತನ್ನ ಜವಾಬ್ದಾರಿಯನ್ನು ಪಕ್ಷಪಾತಿಯಾಗದೆ ನಿರ್ವಹಿಸಲಿ ಎಂದು ರಾಹುಲ್ ಹೇಳಿದರು.
ಇಂದಿನ ಅತ್ಯಂತ ದೊಡ್ಡ ಸಮಸ್ಯೆಯೆಂದರೆ ನಿರುದ್ಯೋಗ ಮತ್ತು ಮೋದಿ ಅವರು ಆರ್ಥಿಕತೆಯನ್ನು ಹಾಳುಗೆಡವಿದ ರೀತಿ. ಎರಡು ಕೋಟಿ ಉದ್ಯೋಗದ ಭರವಸೆ ನೀಡಿದ್ದಿರಿ, ಅವುಗಳ ಕಥೆಯೇನು ಮೋದಿಜಿ ಎಂದು ದೇಶ ಪ್ರಶ್ನಿಸುತ್ತಿದೆ. ಅವರು ಉದ್ಯೋಗ ಮತ್ತು ರೈತರ ಬಗ್ಗೆ ಒಂದೂ ಮಾತು ಹೇಳುವುದಿಲ್ಲ. ಏಕೆಂದರೆ ಹೇಳಲು ಅವರ ಬಳಿ ಏನೂ ಇಲ್ಲ ಎಂದು ಟೀಕಿಸಿದರು.
ಐದು ವರ್ಷದಲ್ಲಿ 914 ಬಾಂಬ್ ದಾಳಿಗಳು ಭಾರತದಲ್ಲಿ ಆಗಿವೆ: ರಾಹುಲ್ ಟ್ವೀಟ್
ಲೋಕಸಭೆ ಚುನಾವಣೆ ಮುಗಿಯುವುದರ ಒಳಗೆ ಪ್ರಧಾನಿ ನರೇಂದ್ರ ಮೋದಿ ಕಡೇಪಕ್ಷ ಒಂದಾದರೂ ಸುದ್ದಿಗೋಷ್ಠಿ ನಡೆಸಬೇಕಿದೆ ಎಂದು ರಾಹುಲ್ ವ್ಯಂಗ್ಯವಾಗಿ ಹೇಳಿದರು.
ಮೋದಿ ಖಾಸಗಿ ಆಸ್ತಿಯಲ್ಲ
ನರೇಂದ್ರ ಮೋದಿ ಅವರು ಅಂದುಕೊಂಡಿರುವಂತೆ ಸೇನೆ, ವಾಯುಪಡೆ ಅಥವಾ ನೌಕಾದಳ ಅವರ ಖಾಸಗಿ ಆಸ್ತಿಗಳಲ್ಲ. ಯುಪಿಎ ಸರ್ಕಾರದ ಅವಧಿಯಲ್ಲಿ ಸರ್ಜಿಕಲ್ ದಾಳಿಗಳು ವಿಡಿಯೋ ಗೇಮ್ಗಳಲ್ಲಿ ನಡೆದಿತ್ತು ಎಂದು ಅವರು ಹೇಳುವುದಾದರೆ ಅದು ಸೈನ್ಯಕ್ಕೆ ಮಾಡುವ ಅವಮಾನವೇ ಹೊರತು, ಕಾಂಗ್ರೆಸ್ಗೆ ಅಲ್ಲ ಎಂದರು.
|
ಚೌಕಿದಾರ್ ಚೋರ್ ಹೈ
ರಫೇಲ್ ಡೀಲ್ ಕುರಿತಂತೆ ಸುಪ್ರೀಂಕೋರ್ಟ್ನಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿ ಸುಪ್ರೀಂಕೋರ್ಟ್ಅನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಕ್ಕೆ ನಾನು ಕ್ಷಮೆಯಾಚಿಸಿದ್ದೇನೆ. ಆದರೆ, ನಾನು ಬಿಜೆಪಿ ಅಥವಾ ಮೋದಿಜಿಗೆ ಕ್ಷಮೆ ಯಾಚಿಸಿಲ್ಲ. 'ಚೌಕಿದಾರ್ ಚೋರ್ ಹೈ' ಎನ್ನುವುದು ನಮ್ಮ ಘೋಷಣೆಯಾಗಿಯೇ ಉಳಿಯಲಿದೆ ಎಂದು ಹೇಳಿದರು.
'ಯುಪಿಎ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು ಪಾಕ್ಗೂ ಗೊತ್ತಿಲ್ಲ, ಉಗ್ರರಿಗೂ ಗೊತ್ತಿಲ್ಲ'
ಮಸೂದ್ನನ್ನು ಬಿಟ್ಟಿದ್ದು ಬಿಜೆಪಿ
ಪುಲ್ವಾಮಾ ದಾಳಿಯ ಸಂಚುಕೋರ, ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆದರೆ, ಆತನನ್ನು ಪಾಕಿಸ್ತಾನಕ್ಕೆ ಕಳುಹಿಸಿದವರು ಯಾರು? ಉಗ್ರರಿಗೆ ಮಂಡಿಯೂರಿ ಆತನನ್ನು ಬಿಡುಗಡೆ ಮಾಡಿದವರು ಯಾರು? ಕಾಂಗ್ರೆಸ್ ಅಲ್ಲ, ಅದು ಬಿಜೆಪಿ ಸರ್ಕಾರ ಎಂದು ಟೀಕಿಸಿದರು.
ರಫೇಲ್ ತನಿಖೆಗೆ ಸಿದ್ಧ
ರಾಹುಲ್ ಗಾಂಧಿ ಅವರ ಹಿಂದಿನ ವ್ಯವಹಾರ ಪಾಲುದಾರನಿಗೆ ಯುಪಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಆಫ್ಸೆಟ್ ಗುತ್ತಿಗೆ ನೀಡಲಾಗಿತ್ತು ಎಂದು ಅಮಿತ್ ಶಾ ಆರೋಪಿಸಿದ್ದರು. ನಿಮಗೆ ಬೇಕಾದ ತನಿಖೆಯನ್ನು ನೀವು ನಡೆಸಿ. ನಿಮಗೆ ಬೇಕಾದಂತೆ ವಿಚಾರಣೆ ನಡೆಸಿ. ನಾನು ಯಾವುದೇ ತಪ್ಪು ಮಾಡಿಲ್ಲ ಎನ್ನುವುದು ನನಗೆ ತಿಳಿದಿರುವುದರಿಂದ ನಾನು ಎಲ್ಲದಕ್ಕೂ ಸಿದ್ಧ ಎಂದು ಸವಾಲು ಹಾಕಿದರು.
ಭಾರತ ಹಾವಾಡಿಗರ ದೇಶ ಎಂದು ಬಿಂಬಿಸಿದ್ದ ಕಾಂಗ್ರೆಸ್: ನರೇಂದ್ರ ಮೋದಿ
10-20 ದಿನದಲ್ಲಿ ಮೋದಿ ಸಾಮ್ರಾಜ್ಯ ಪತನ
ಐದು ವರ್ಷಗಳ ಹಿಂದೆ ಮೋದಿಜಿ ಅವರು ಇನ್ನು 10-15 ವರ್ಷ ಆಡಳಿತ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಅವರು ಸೋಲು ಕಾಣುವುದಿಲ್ಲ ಎನ್ನಲಾಗಿತ್ತು. ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಅವರನ್ನು ಉರುಳಿಸಿದೆ. ಅದೊಂದು ಪೊಳ್ಳು ಹುಲ್ಲುಕಡ್ಡಿಯಂತಹ ರಚನೆ. ಇನ್ನು 10-20 ದಿನಗಳಲ್ಲಿ ಕುಸಿದು ಹೋಗುತ್ತದೆ ಎಂದು ಭವಿಷ್ಯ ನುಡಿದರು.
ಸೈನಿಕರ ರಕ್ತಕ್ಕೆ ಶ್ರೇಯಸ್ಸು ಬೇಡ
ನಾವೂ ಅನೇಕ ಸರ್ಜಿಕಲ್ ದಾಳಿಗಳನ್ನು ನಡೆಸಿದ್ದೆವು. ಆದರೆ ಅದರ ಬಗ್ಗೆ ಮಾತನಾಡಲಿಲ್ಲ. ಏಕೆಂದರೆ ನಾವು ಸೇನೆಯನ್ನು ಗೌರವಿಸುತ್ತೇವೆ. ಸರ್ಜಿಕಲ್ ದಾಳಿಗಳನ್ನು ನಡೆಸಿರುವುದು ನಮ್ಮ ಸೇನೆ, ಕಾಂಗ್ರೆಸ್ ಅಥವಾ ಬೇರಾರೂ ಅಲ್ಲ ಎನ್ನುವುದು ನಮಗೆ ತಿಳಿದಿದೆ. ನಮ್ಮ ಸೈನಿಕರ ರಕ್ತಕ್ಕೆ ನಾವು ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ. ಅದನ್ನು ಅವರಿಗೇ ಬಿಟ್ಟಿದ್ದೇವೆ. ತಮ್ಮ ಕೆಲಸಗಳಿಗೆ ಅವರಿಗೇ ಶ್ರೇಯಸ್ಸು ಸಲ್ಲಬೇಕಿರುವಂಥದ್ದು, ಬೇರಾರಿಗೂ ಅಲ್ಲ ಎಂದು ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಹೇಳಿದ್ದಾರೆ.
ನ್ಯಾಯ್ ಬಳಸುತ್ತೇವೆ
ಅಪನಗದೀಕರಣದ ಮೂಲಕ ಮೋದಿ ಅವರು ಬಡವರಿಗೆ ಹೊಡೆತ ನೀಡಿದ್ದರು. ಆರ್ಥಿಕತೆಯನ್ನು ಸುಧಾರಿಸಲು ನಾವು 'ನ್ಯಾಯ್' ಅನ್ನು ಬಳಸುತ್ತೇವೆ. ಜನರು ಬೇಗನೆ ನಗದನ್ನು ಪಡೆದಷ್ಟೂ ಅವರು ಅದನ್ನು ಮಾರುಕಟ್ಟೆಯಲ್ಲಿ ಬಳಸುತ್ತಾರೆ. ಮತ್ತು ಮಾರುಕಟ್ಟೆ ಇನ್ನಷ್ಟು ಉತ್ಪಾದನೆ ಮಾಡುತ್ತದೆ. ಇದರಿಂದ ಆರ್ಥಿಕತೆ ವೃದ್ಧಿಯಾಗುತ್ತದೆ ಎಂದು ರಾಹುಲ್ ಹೇಳಿದರು.
ಅಂಬಾನಿ ಮನೆಯಲ್ಲಿ ಬೇಡ
ಪ್ರಧಾನಿ ಬಳಿ ಪರಿಣತರಿಲ್ಲ. ತಮ್ಮ ಬಳಿ ಇರುವ ಪರಿಣತರನ್ನೂ ಅವರು ಬಳಸುವುದಿಲ್ಲ. ಅವರಿಗೆ ಹೇಳಿದ್ದೆ, ಚರ್ಚೆ ಮಾಡೋಣ ಎಂದು. ಉದ್ಯೋಗದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಚರ್ಚಿಸೋಣ. ನನಗೆ ಕೇವಲ ಹತ್ತು ನಿಮಿಷ ಕೊಡಿ. ನೀವು ಬಯಸಿದ್ದಲ್ಲೇ ಚರ್ಚೆ ಮಾಡೋಣ. ಆದರೆ ಅನಿಲ್ ಅಂಬಾನಿ ಮನೆಯಲ್ಲಿ ಅಲ್ಲ ಎಂದು ಹೇಳಿದರು.