ಇದು ಸೂಟು ಬೂಟಿನ ಸರ್ಕಾರ ಎಂದ ರಾಹುಲ್ ಗಾಂಧಿ: ಕಾರಣವೇನು?
ನವದೆಹಲಿ, ನವೆಂಬರ್ 24: ಇದು ಸೂಟು ಬೂಟಿನ ಸರ್ಕಾರ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಗುಡುಗಿದ್ದಾರೆ.
ಸರ್ಕಾರ ನಿಧಾನವಾಗಿ ವ್ಯವಸ್ಥಿತ ವಿಧಾನದಲ್ಲಿ ಉದ್ಯಮಿಗಳ ಹಿತಾಸಕ್ತಿ ಕಾಪಾಡಲು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು ಕ್ರಮಾಂಕವನ್ನು ಅರ್ಥ ಮಾಡಿಕೊಳ್ಳಿ. ಮೊದಲು ಕೆಲ ದೊಡ್ಡ ಕಂಪನಿಗಳ ಸಾಲ ಮನ್ನಾ, ನಂತರ ಕಂಪನಿಗಳಿಗೆ ದೊಡ್ಡ ಮಟ್ಟದ ತೆರಿಗೆ ವಿನಾಯತಿ.

ಮಾಜಿ ಆರ್ಬಿಐ ಗವರ್ನರ್ ರಘುರಾಮ್ ರಾಜನ್ ಮತ್ತು ಪ್ರಸಿದ್ಧ ಆರ್ಥಿಕ ತಜ್ಞ ವೈರಲ್ ಆಚಾರ್ಯ ಅವರು, ಭಾರತೀಯ ಕಾರ್ಪೊರೇಟ್ ಕಂಪನಿಗಳಿಗೆ ಬ್ಯಾಂಕ್ ಆರಂಭಿಸಲು ಸಲಹೆ ನೀಡಿರುವುದು ತಪ್ಪು ಎಂದಿರುವ ವರದಿಯನ್ನು ಉಲ್ಲೇಖಿಸಿದ್ದಾರೆ.
ಈಗ ಈ ಕಂಪನಿಗಳು ಆರಂಭಿಸಿರುವ ಬ್ಯಾಂಕ್ಗಳಿಗೆ ಜನರ ಉಳಿತಾಯವನ್ನು ನೇರವಾಗಿ ನೀಡಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಅವರು ಸೂಟುಬೂಟಿನ ಸರ್ಕಾರ ಎಂದು ಹ್ಯಾಷ್ಟ್ಯಾಗ್ ಬಳಸಿದ್ದಾರೆ.
ಕೊರೊನಾ ಸಂಕಷ್ಟ ಕಾಲದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ ಮುಂದಾಗಿದೆ.ಈ ನಿಟ್ಟಿನಲ್ಲಿ ಕೆಲವು ಪರಿಣಾಮಕಾರಿ ಕ್ರಮಗಳನ್ನು ಜಾರಿಗೆ ತರಲು ಕೆಲವು ಅವಕಾಶಗಳನ್ನು ಮಾಡಿಕೊಡಲು ಆರ್ಬಿಐ ಚಿಂತನೆ ನಡೆಸಿದೆ.
ಆರ್ಥಿಕತೆಗೆ ಒತ್ತು ನೀಡಲು ದೊಡ್ಡ ಕೈಗಾರಿಕೋದ್ಯಮ ಹಾಗೂ ಕಾರ್ಪೊರೇಟ್ ಕಂಪನಿಗಳು ಪೇಮೆಂಟ್ ಬ್ಯಾಂಕ್ಗಳನ್ನು ಆರಂಭಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ.
ಟಾಟಾ, ಬಿರ್ಲಾ, ಅಂಬಾನಿಯಂಥ ಸಮೂಹ ಕಂಪನಿಗಳು ಬ್ಯಾಂಕ್ ನಡೆಸಲು ಅನುಮತಿ ನೀಡಬಹುದು ಎಂದು ಆರ್ಬಿಐ ಸಲಹಾ ಸಮಿತಿ ಶಿಫಾರಸು ಮಾಡಿದೆ.
ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಾಗಿ ಇವು ಕಾರ್ಯ ನಿರ್ವಹಿಸಬಹುದು. ಈಗಾಗಲೇ ಕೆಲವು ಕಂಪನಿಗಳು ಬ್ಯಾಂಕ್ ಆರಂಭಿಸಲು ಅರ್ಜಿ ಸಲ್ಲಿಸಿದ್ದು, ಕೆಲವು ಈಗಾಗಲೇ ಅರ್ಜಿಯನ್ನು ಹಿಂಪಡೆದಿವೆ.












Click it and Unblock the Notifications