ರಫೇಲ್ ಡೀಲ್ ಬಗ್ಗೆ ಅಸಮ್ಮತಿ ಇರಲಿಲ್ಲ : ಏರ್ ಮಾರ್ಷಲ್ ಭಡೌರಿಯಾ
ನವದೆಹಲಿ, ಫೆಬ್ರವರಿ 13 : ರಫೇಲ್ ಡೀಲ್ ಹಗರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿರುವ, ಭಾರತೀಯ ಸಮಾಲೋಚನಾ ತಂಡದ ಚೇರ್ಮನ್ ಆಗಿರುವ ಏರ್ ಮಾರ್ಷಲ್ ಆರ್ ಕೆ ಎಸ್ ಭಡೌರಿಯಾ ಅವರು, ರಫೇಲ್ ಮಾತಕತೆಗೆ ಸಂಬಂಧಿಸಿದಂತೆ ಅಸಮ್ಮತಿ ವ್ಯಕ್ತಪಡಿಸಿರಲಿಲ್ಲ ಎಂದು ಹೇಳಿದ್ದಾರೆ.
ರಫೇಲ್ ಡೀಲ್ ನಡೆಯುತ್ತಿರುವಾಗ ಪ್ರಧಾನಿ ಕಚೇರಿಯಿಂದ ಸಮಾನಾಂತರ ಮಾತುಕತೆ ನಡೆಯುತ್ತಿತ್ತು ಮತ್ತು ಅನಗತ್ಯ ಹಸ್ತಕ್ಷೇಪ ಆಗುತ್ತಿತ್ತು ಎಂದು ವರದಿಯಾಗಿರುವ ದಿ ಹಿಂದೂ ಪತ್ರಿಕೆಗೆ ಉತ್ತರ ನೀಡಿರುವ ಅವರು, ಏಳು ಜನರಿದ್ದ ತಂಡದಲ್ಲಿ ಮೂವರು ಕೆಲ ಆಕ್ಷೇಪ ವ್ಯಕ್ತಪಡಿಸಿದ್ದರು, ಆದರೆ, ಅಸಮ್ಮತಿ ವ್ಯಕ್ತಪಡಿಸಿರಲಿಲ್ಲ ಎಂದು ಸ್ಪಷ್ಟನ ನೀಡಿದ್ದಾರೆ.
ರಫೇಲ್ ಡೀಲ್ : ವಿರೋಧಿಗಳಿಗೆ ತಿರುಗುಬಾಣವಾದ ಸ್ಪಷ್ಟೀಕರಣ
ಆ ಮೂವರು ನೀಡಿದ್ದ ಆಕ್ಷೇಪದ ವಿವರಗಳನ್ನು ಭಾರತೀಯ ಸಮಾಲೋಚನಾ ತಂಡದ ಚೇರ್ಮನ್ ಆಗಿದ್ದ ನನಗೆ ನೀಡಲಾಗಿತ್ತು. ಈ ಎಲ್ಲ ವಿಷಯಗಳ ಬಗ್ಗೆ ಹಿಂದೆಯೂ ಚರ್ಚೆ ಮಾಡಲಾಗಿತ್ತು ಮತ್ತು ಅವುಗಳಿಗೆ ಸೂಕ್ತ ಉತ್ತರ ನೀಡಲಾಗಿತ್ತು. ಎಲ್ಲ ಸಂದೇಹಗಳಿಗೆ ಉತ್ತರ ಕಂಡುಕೊಂಡ ನಂತರ ಸಲ್ಲಿಸಲಾದ ಅಂತಿಮ ವರದಿಯಲ್ಲಿ ಯಾವುದೇ ಆಕ್ಷೇಪಗಳೂ ಇರಲಿಲ್ಲ ಎಂದು ಭಡೌರಿಯಾ ಅವರು ಎಎನ್ಐಗೆ ತಿಳಿಸಿದ್ದಾರೆ.
ಸಮಾಲೋಚನಾ ತಂಡದಲ್ಲಿದ್ದ ಮೂವರು ಎಂಟು ಪುಟಗಳ ಅಸಮ್ಮತಿ ಪತ್ರವನ್ನು ಬರೆದಿದ್ದರು ಎಂದು ದಿ ಹಿಂದೂ ಪತ್ರಿಕೆ ಬರೆದಿರುವುದನ್ನು ಭಡೌರಿಯಾ ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಆ ಆಕ್ಷೇಪಗಳನ್ನು ಅಂತಿಮ ವರದಿಯಲ್ಲಿ ಕೂಡ ಸೇರಿಸಲಾಗಿತ್ತು. ಅವುಗಳಿಗೆ ಅನಗತ್ಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಕಾಕತಾಳೀಯವೆಂದರೆ, ರಫೇಲ್ ಡೀಲ್ ಬಗ್ಗೆ ಸಿಎಜಿ ವರದಿ ಮಂಡನೆಯಾದ ಸಂದರ್ಭದಲ್ಲಿಯೇ ಭಡೌರಿಯಾ ಅವರು ಸ್ಪಷ್ಟನೆ ನೀಡಿದ್ದಾರೆ.
ರಫೇಲ್ : ಸಿಎಜಿ ವರದಿ ಮಂಡನೆ, ಕಾಂಗ್ರೆಸ್ಸಿಗೆ ಭಾರೀ ಮುಖಭಂಗ
58 ಸಾವಿರ ಕೋಟಿ ರುಪಾಯಿ ಮೌಲ್ಯದ ಒಪ್ಪಂದವಿರುವ ರಫೇಲ್ ಯುದ್ಧ ಹಗರಣಕ್ಕೆ ಸಂಬಂಧಿಸಿದಂತೆ, ದಿ ಹಿಂದೂ ಪ್ರಕಟಿಸಿದ ವರದಿ ಪ್ರಕಟವಾದ ನಂತರ, ವಿರೋಧಿಗಳು ಬಿಜೆಪಿಯನ್ನು ಹುರಿದು ಮುಕ್ಕುತ್ತಿದ್ದರೂ ಭಡೌರಿಯಾ ಬಾಯಿಬಿಟ್ಟಿರಲಿಲ್ಲ. ಆದರೆ, ಮೊದಲ ಬಾರಿಗೆ ತಮ್ಮ ಅನಿಸಿಕೆಯನ್ನು ಅವರು ಹೊರಹಾಕಿದ್ದಾರೆ.
All their observations were suitably included in the INT report and addressed in the forwarding note by the Chairman INT: Air Marshal RKS Bhadauria #Rafale pic.twitter.com/JpxcHqU7qa
— ANI (@ANI) February 13, 2019
ಮೋದಿ ಅನಿಲ್ ಅಂಬಾನಿಯ ಮಿಡ್ಲ್ ಮ್ಯಾನ್! ರಾಹುಲ್ ರಫೇಲ್ ದಾಳಿ!
ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿದಾಗ, 2015 ಡಿಸೆಂಬರ್ ನಿಂದ 2016 ಸೆಪ್ಟೆಂಬರ್ ವರೆಗೆ ಭಡೌರಿಯಾ ಅವರು ಭಾರತೀಯ ಸಮಾಲೋಚನಾ ತಂಡದ ಚೇರ್ಮನ್ ಆಗಿದ್ದರು. ಇವರಿಗೂ ಮೊದಲು ಎಸ್ ಬಿ ಪಿ ಸಿನ್ಹಾ ಅವರು ಸಮಾಲೋಚನಾ ತಂಡದ ನೇತೃತ್ವ ವಹಿಸಿದ್ದರು. ಅವರು ಕೂಡ ಹಿಂದೂ ಪತ್ರಿಕೆಯ ವರದಿಗೆ ಪ್ರತಿಕ್ರಿಯೆ ನೀಡಿದ್ದು, ಅಂದು ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು, ಆ ಪತ್ರಕ್ಕೆ ಸೂಕ್ತ ಉತ್ತರ ನೀಡಿದ್ದರೆಂದು ತಿಳಿಸಿದ್ದಾರೆ.