ಅಣ್ಣಾ ಹೋರಾಟ ಯುಪಿಎ ಉರುಳಿಸಲು ಬಿಜೆಪಿಗೆ ದಾಳವಾಯ್ತು: ಪ್ರಶಾಂತ್ ಭೂಷಣ್
ನವದೆಹಲಿ, ಸೆ. 15: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ಪ್ರಬಲ ಜನ ಲೋಕಪಾಲ ಮಸೂದೆ ಕರಡು ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ವಕೀಲರಾದ ಪ್ರಶಾಂತ್ ಭೂಷಣ್ ಅವರು ಭ್ರಷ್ಟಾಚಾರ ವಿರುದ್ಧ ಹೋರಾಟ(ಐಎಸಿ)ದ ಹಿಂದೆ ಬಿಜೆಪಿ ಹಾಗೂ ಆರೆಸ್ಸೆಸ್ ನೆರಳಿತ್ತು, ಈ ಹೋರಾಟವು ಅಂದಿನ ಯುಪಿಎ ಸರ್ಕಾರ ಬೀಳಿಸಲು ದಾಳವಾಗಿ ಬಳಕೆಯಾಗಿತ್ತು ಎಂದು ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಪರಿಸರ ಯೋಜನೆಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರಿಗಳ ವಿರುದ್ಧ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ದಾಖಲಿಸಿದ ಪ್ರಶಾಂತ್ ಅವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಐಎಸಿ, ಎಎಪಿ ಬಗ್ಗೆ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಐಎಸಿ ಮೂಲಕ ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯವಾಗಿ ಬೆಳೆದು ಇಂದು ದೆಹಲಿ ಮುಖ್ಯಮಂತ್ರಿಯಾಗಿದ್ದಾರೆ. ನನಗೆ ಎರಡು ವಿಷಯದ ಬಗ್ಗೆ ವಿಷಾದವಿದೆ. ಬಿಜೆಪಿ -ಆರೆಸ್ಸೆಸ್ ತಮ್ಮ ರಾಜಕೀಯ ಉದ್ದೇಶಕ್ಕಾಗಿ ಅಣ್ಣಾ ಅವರ ಈ ಅಭಿಯಾನಕ್ಕೆ ಹೆಚ್ಚು ಬೆಂಬಲ ನೀಡಿದ್ದು ತಿಳಿಯದೇ ಹೋಯಿತು. ಅಣ್ಣಾ ಹೋರಾಟ ಯುಪಿಎ ಉರುಳಿಸಲು ಬಿಜೆಪಿಗೆ ದಾಳವಾಯಿತು ಎಂದು ಪ್ರಶಾಂತ್ ಭೂಷಣ್ ಹೇಳಿದರು.

ಈ ಬಗ್ಗೆ ಅಣ್ಣಾ ಹಜಾರೆ ಅವರಿಗೂ ಗೊತ್ತಾಗಿರಲಿಲ್ಲ ಅನ್ನಿಸುತ್ತದೆ. ನನಗೆ ಈಗಂತೂ ಈ ಬಗ್ಗೆ ಸಂಶಯವೇ ಇಲ್ಲ, ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಎನ್ಡಿಎ ಅಧಿಕಾರಕ್ಕೆ ತರಲು ಆರೆಸ್ಸೆಸ್- ಬಿಜೆಪಿ ಈ ಅಭಿಯಾನವನ್ನು ಬಳಸಿಕೊಂಡವು. ಆದರೆ, ಈ ಬಗ್ಗೆ ಅರವಿಂದ್ ಕೇಜ್ರಿವಾಲ್ ಅವರಿಗೆ ಗೊತ್ತಾಗಿತ್ತು. ಅರವಿಂದ್ ರಾಜಕೀಯ ನಡೆಗಳನ್ನು ಆರಂಭದಲ್ಲೇ ಅರ್ಥ ಮಾಡಿಕೊಳ್ಳುವಲ್ಲಿ ನಾನು ವಿಫಲನಾಗಿದ್ದು ನನ್ನ ಎರಡನೇ ವಿಷಾದ ಎಂದು ರಾಜದೀಪ್ ಸರ್ದೇಸಾಯಿ ಜೊತೆ ಮಾತನಾಡುತ್ತಾ ಹೇಳಿದರು.
2015ರಲ್ಲಿ ಪ್ರಶಾಂತ್ ಭೂಷಣ್, ಯೋಗೇಂದ್ರ ಯಾದವ್ ರನ್ನು ಆಮ್ ಆದ್ಮಿ ಪಕ್ಷದಿಂದ ಹೊರ ಹಾಕಲಾಯಿತು. ಯೋಗೇಂದ್ರ ಅವರು ಸ್ವರಾಜ್ ಇಂಡಿಯಾ ಎಂಬ ಹೊಸ ರಾಜಕೀಯ ಪಕ್ಷ ಕಟ್ಟಿದರು.












Click it and Unblock the Notifications