'ಅಜ್ಜ'ನನ್ನು ಸಿದ್ಧಪಡಿಸಿದ್ದ ಕಲಾವಿದ 'ಬಿಲ್ಲು ಬಾರ್ಬರ್' ಪೊಲೀಸರ ಬಲೆಗೆ
ನವದೆಹಲಿ, ಸೆಪ್ಟೆಂಬರ್ 17: ಅಜ್ಜನಂತೆ ವೇಷ ಧರಿಸಿದ್ದ 32 ವರ್ಷದ ವ್ಯಕ್ತಿಯೊಬ್ಬ ದೆಹಲಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಘಟನೆ ನಡೆದ ವಾರದ ಬಳಿಕ ಪೊಲೀಸರು ಆತನಿಗೆ ಮೇಕಪ್ ಮಾಡಿದ್ದ ಕಲಾವಿದನನ್ನು ಬಂಧಿಸಿದ್ದಾರೆ.
ಬಿಲ್ಲು ಬಾರ್ಬರ್ (2009ರಲ್ಲಿ ಬಿಡುಗಡೆಯಾದ ಹಿಂದಿ ಸಿನಿಮಾ) ಎಂಬ ಹೆಸರಿನೊಂದಿಗೆ ಗುರುತಿಸಿಕೊಂಡಿರುವ ಶಮ್ಶೇರ್ ಸಿಂಗ್ (42) ಎಂಬಾತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ದೆಹಲಿಯ ರೋಹಿನಿ ಎಂಬ ಪ್ರದೇಶದಲ್ಲಿ ಸಲೂನ್ ಅಂಗಡಿ ನಡೆಸುತ್ತಿರುವ ಬಿಲ್ಲು ಬಾರ್ಬರ್, ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ವ್ಯಕ್ತಿಗೆ ಮಾತ್ರವಲ್ಲ, ಇನ್ನೂ 10-12 ಮಂದಿಗೆ ಈ ರೀತಿ ಅಜ್ಜನ ವೇಷ ತೊಡಿಸಿದ್ದಾಗ ಒಪ್ಪಿಕೊಂಡಿದ್ದಾನೆ. ಈ ರೀತಿ ಮೇಕಪ್ ಮಾಡಲು ಆತ ಒಬ್ಬ ವ್ಯಕ್ತಿಗೆ 20 ಸಾವಿರ ರೂ. ಚಾರ್ಜ್ ಮಾಡುತ್ತಿದ್ದನಂತೆ.
ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಒಂದು ದಿನದ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪಟೇಲ್ ನಗರದ ತನ್ನ ಸಲೂನ್ ಅಂಗಡಿಯಲ್ಲಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗೆ ಕಪ್ಪುಕೂದಲನ್ನು ಬಿಳಿ ಬಣ್ಣದಂತೆ ಬದಲಿಸಲು ಬಳಸುತ್ತಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇಬ್ಬರು ಮಹಿಳೆಯರಿಗೂ ವೇಷ ಬದಲು
ಸಲೂನ್ ಶಾಪ್ ಜತೆಗೆ, ಹೆಚ್ಚುವರಿ ಹಣ ಸಂಪಾದಿಸಲು ಶಮ್ಶೇರ್ ಸಿಂಗ್ ಜನರ ಚಹರೆಯನ್ನೇ ಬದಲಿಸುವ ಮೇಕಪ್ ಕೆಲಸವನ್ನೂ ಮಾಡುತ್ತಿದ್ದ. ಏಜೆಂಟ್ಗಳ ಸೂಚನೆಯಂತೆ ಜನರ ವೇಷ ಬದಲಿಸಿಕೊಡುತ್ತಿದ್ದುದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಇಬ್ಬರು ಮಹಿಳೆಯರ ವೇಷವನ್ನೂ ಬದಲಿಸಿದ್ದಾಗಿ ತಿಳಿಸಿದ್ದಾನೆ. ಸೂಕ್ಷ್ಮವಾಗಿ ಗಮನಿಸಿದರೂ ಅದು ಮೇಕಪ್ ಅಲ್ಲ ಎನ್ನುವುದು ಗೊತ್ತಾಗದಷ್ಟು ಚೆನ್ನಾಗಿ ಬಣ್ಣ ಹಚ್ಚುವ ಕಲೆಯನ್ನು ಆತನ ಕರಗತ ಮಾಡಿಕೊಂಡಿದ್ದ. ಅದಕ್ಕೆ ತಕ್ಕಂತೆ ವೇಷಭೂಷಣಗಳನ್ನೂ ಮಾಡುತ್ತಿದ್ದ.

ಸಿಕ್ಕಿದ್ದು ಒಬ್ಬ, ಉಳಿದವರು?
ಜನರಿಂದ ಹಣ ಪಡೆದು ಅವರಿಗೆ ನಕಲಿ ಪಾಸ್ಪೋರ್ಟ್ಗಳನ್ನು ನೀಡುತ್ತಿದ್ದ ಭರತ್ ಎಂಬ ಏಜೆಂಟ್ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಜತೆಗೆ 'ಬಿಲ್ಲು ಬಾರ್ಬರ್'ನ ಕೈಚಳಕದಲ್ಲಿ ವೇಷ ಮರೆಸಿಕೊಂಡು ಹೋಗಿರುವ ವ್ಯಕ್ತಿಗಳು ಯಾರು, ಅವರು ಎಲ್ಲಿದ್ದಾರೆ ಎಂಬುದನ್ನು ತಿಳಿಯಲು ತನಿಖೆ ನಡೆಸುತ್ತಿದ್ದಾರೆ.

ಅಜ್ಜನಾಗಿ ಬಂದಿದ್ದ 32ರ ವ್ಯಕ್ತಿ
ಗುಜರಾತ್ನ ಅಹಮದಾಬಾದ್ನ ನಿವಾಸಿಯಾಗಿರುವ ಜಯೇಶ್ ಪಟೇಲ್ ಎಂಬಾತನನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಐಎಸ್ಎಫ್ ಸಿಬ್ಬಂದಿ ಪತ್ತೆಹಚ್ಚಿದ್ದರು. ತನ್ನ ತಲೆಗೂದಲು ಮತ್ತು ಗಡ್ಡಕ್ಕೆ ಬಿಳಿ ಬಣ್ಣ ಬಳಿದುಕೊಂಡಿದ್ದ ಜಯೇಶ್ ಪಟೇಲ್, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ಗೆ ತೆರಳಲು ಸಿದ್ಧನಾಗಿ ಬಂದಿದ್ದ. ತಾನು ಹಿರಿಯ ಪ್ರಜೆಯಂತೆ ತೋರಿಸಿಕೊಳ್ಳುವ ಸಲುವಾಗಿ ಗಾಲಿಕುರ್ಚಿಯಲ್ಲಿ ಬಂದಿದ್ದ.

ಅಜ್ಜನ ಗೆಟಪ್ ಬಗ್ಗೆ ಮೂಡಿದ್ದ ಅನುಮಾನ
81 ವರ್ಷದ ಅಮ್ರಿಕ್ ಸಿಂಗ್ ಎಂಬ ಹೆಸರಿನ ನಕಲಿ ಪಾಸ್ಪೋರ್ಟ್ಅನ್ನು ಹೊಂದಿದ್ದ ಜಯೇಶ್ ನಡವಳಿಕೆ ಬಗ್ಗೆ ಸಿಐಎಸ್ಎಫ್ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಯಲ್ಲಿ ಅನುಮಾನ ಮೂಡಿತ್ತು. ಗಾಲಿಕುರ್ಚಿಯಿಂದ ಏಳಲು ತನಗೆ ಸಾಮರ್ಥ್ಯವಿಲ್ಲ ಎಂದಿದ್ದ ಆತ, ಅವರೊಂದಿಗೆ ಮುಖಕೊಟ್ಟು ಮಾತನಾಡಲು ಹಿಂದೇಟು ಹಾಕಿದ್ದ. ಅವನ ಕೈಯನ್ನು ಗಮನಿಸಿದ ಸಿಬ್ಬಂದಿಗೆ ಮುಖಕ್ಕೂ ಕೈ ಚರ್ಮಕ್ಕೂ ವ್ಯತ್ಯಾಸ ಇರುವುದು ಅನುಮಾನ ಮೂಡಿಸಿತ್ತು. ಆತನ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆಗೆ ಒಳಪಡಿಸಿದಾಗ ಆತನ ನೈಜ ಚಹರೆ ಬಹಿರಂಗವಾಗಿತ್ತು.












Click it and Unblock the Notifications