ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ನೇಪಾಳಕ್ಕೆ ಪ್ರಧಾನಿ ಮೋದಿ ಭೇಟಿ
ನವದೆಹಲಿ ಮೇ 16: ಬುದ್ಧ ಪೂರ್ಣಿಮೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಸೋಮವಾರ) ಭಗವಾನ್ ಬುದ್ಧನ ಜನ್ಮಸ್ಥಳವಾದ ನೇಪಾಳದ ಲುಂಬಿನಿಗೆ ಭೇಟಿ ನೀಡಿದ್ದಾರೆ.
ಈಗಾಗಲೇ ನೇಪಾಳದ ಕುಶಿನಗರದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ವಿಮಾನ ನಿಲ್ದಾಣದಿಂದ ನಾಲ್ಕು ಕಿಮೀ ದೂರವಿರುವ ಕುಶಿನಗರ ಬುದ್ಧ ದೇಗುಲಕ್ಕೆ ತೆರಳಲಿದರು. ನಂತರ ಹೆಲಿಕಾಪ್ಟರ್ ಮೂಲಕ ಲುಂಬಿನಿಗೆ ತೆರಳಲಿದರು. ಕುಶಿನಗರವು ಬೌದ್ಧರ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಕುಶಿನಗರ ವಿಮಾನ ನಿಲ್ದಾಣವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ಬೌದ್ಧ ಧರ್ಮದೊಂದಿಗಿನ ಜಾಗತಿಕ ಮತ್ತು ಏಷ್ಯಾದೊಂದಿಗೆ ಭಾರತದ ಸಂಬಂಧಗಳನ್ನು ಪುನಶ್ಚೇತನಗೊಳಿಸುವತ್ತ ಬಿಜೆಪಿ ಗಮನಹರಿಸಿದೆ. ಜತೆಗೆ ಬೌದ್ಧ ಧರ್ಮವನ್ನು ಸ್ವೀಕರಿಸುವ ದಲಿತ ಸಮುದಾಯದ ಬೆಂಬಲವನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ.
1956ರಲ್ಲಿ ದಲಿತ ಸಮುದಾಯದ ಪ್ರಮುಖ ನಾಯಕರಾದ ಡಾ. ಬಿ.ಆರ್.ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದರು. ಇನ್ನೊಂದೆಡೆ ಬಹುಜನ ಸಮಾಜವಾದಿ ಪಕ್ಷದ(ಬಿಎಸ್ಪಿ) ಪ್ರಮುಖ ಮತದಾರರಾದ ದಲಿತರನ್ನು ತನ್ನತ್ತ ಸೆಳೆಯಲು ಬಿಜೆಪಿ ಪ್ರಯತ್ನಸಿದ್ದು, ಬುದ್ಧ ಪೂರ್ಣಿಮೆಯ ಪವಿತ್ರ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಲುಂಬಿನಿ ಭೇಟಿಯು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಿಎಸ್ಪಿ ಹೀನಾಯ ಸೋಲು:
ಇತ್ತೀಚಿಗೆ ಜರುಗಿದ ಉತ್ತರ ಪ್ರದೇಶ ಲೋಕಸಭೆ ಚುನಾವಣೆಯಲ್ಲಿ ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷವು ಹೀನಾಯ ಸೋಲು ಕಂಡಿದೆ. ಪಾರಂಪರಿಕ ಮತಗಳು ಕೂಡ ಈ ಬಾರಿ ಪಕ್ಷದ ಕೈಹಿಡಿಯಲಿಲ್ಲ. ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಅಧಿಕಾರದ ಗದ್ದುಗೆಗೆ ಏರಲಿದ್ದೇವೆ ಎಂಬ ಮಾಯಾವತಿ ಅವರ ವಿಶ್ವಾಸ ಹುಸಿಯಾಯಿತು.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಮಾಯಾವತಿ ಅವರು ಕಾರ್ಯ ನಿರ್ವಹಿಸಿದರು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅವರ ಪಕ್ಷ ಅಳಿವಿನಂಚಿಗೆ ಸಾಗುತ್ತಿದೆ. ಇದರಿಂದ ಹೊರಬರಲು ಕಠಿಣ ನಿರ್ಧಾರವನ್ನು ಪಕ್ಷ ತಾಳಬೇಕಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ. ಕಾಂಗ್ರೆಸ್ ಕೂಡ ತನ್ನ ದಶಕದ ದಲಿತ-ಮುಸ್ಲಿಂ-ಬ್ರಾಹ್ಮಣ ಸೂತ್ರದಿಂದ ಹೊರಬಂದು ಹೊಸ ಹೊಸ ವ್ಯೂಹಗಳನ್ನು ರಚಿಸಬೇಕಿದೆ.
ಈ ಬಾರಿ, ದಲಿತ ಸಮುದಾಯದ ಉಪ ಪಂಗಡವಾದ ಜಾಟರು ಕೂಡ ಮಾಯಾವತಿ ಅವರನ್ನು ಕೈಬಿಟ್ಟಿದ್ದಾರೆ. ಮಾಯಾವತಿ ಅವರು ಜಾಟರ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಉತ್ತರ ಪ್ರದೇಶದ ದಲಿತರ ಜನಸಂಖ್ಯಾಯಲ್ಲಿ ಜಾಟರು ಶೇ.14ರಷ್ಟಿದ್ದಾರೆ. ಈ ಬಾರಿ ಬಿಎಸ್ಪಿ ಕೇವಲ ಒಂದು ಕ್ಷೇತ್ರ ಗೆಲ್ಲಲು ಮಾತ್ರ ಸಫಲವಾಗಿದೆ. ಒಟ್ಟು ಮತಗಳಲ್ಲಿ ಶೇ.12.9ರಷ್ಟು ಮತಗಳು ಬಿಎಸ್ಪಿಗೆ ಬಂದಿದೆ. 2017ರ ವಿಧಾನಸಭೆ ಚುನಾವಣೆಯಲ್ಲಿ 19 ಸ್ಥಾನಗಳೊಂದಿಗೆ ಒಟ್ಟಾರೆ ಶೇ.22.2ರಷ್ಟು ಮತಗಳನ್ನು ಬಿಎಸ್ಪಿ ಪಡೆದಿತ್ತು. ಇದನ್ನು ಹೋಲಿಸಿದರೆ ಸುಮಾರು ಶೇ.10ರಷ್ಟು ಮತಗಳನ್ನು ಪಕ್ಷ ಕಳೆದುಕೊಂಡಿದೆ.
ದಲಿತರನ್ನು ತನ್ನತ್ತ ಸೆಳೆಯಲು ಬಿಜೆಪಿ ಯತ್ನ
ದಲಿತರ ಮತಗಳನ್ನು ಸೆಳೆಯುವ ಮತ್ತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನ ಮುಂದುವರಿಸಿದ್ದು, ಬೌದ್ಧರ ಕುರಿತು ಗಮನಹರಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಇಂದಿನ ಭೇಟಿಯು ಹೆಚ್ಚು ಮಹತ್ವ ಪಡೆದಿದೆ.
ಯುನೆಸ್ಕೊ ವತಿಯಿಂದ ಬುದ್ಧನ ಜನ್ಮ ಸ್ಥಳವಾದ ನೇಪಾಳದ ಲುಂಬಿನಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಗುರುತಿಸಲಾಗಿದೆ. ಲುಂಬಿನಿಯಲ್ಲಿ ಮಾಯಾದೇವಿ ದೇಗುಲಕ್ಕೆ ಭೇಟಿ ನೀಡಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಈ ಸ್ಥಳದಲ್ಲಿ 2600 ವರ್ಷಗಳ ಹಿಂದೆ ಭಗವಾನ್ ಬುದ್ಧ ಅವತರಿಸಿದ್ದರು. ಭೇಟಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇಪಾಳ ಪ್ರಧಾನಿ ಶೇರ್ ಬಹುದ್ದೂರ್ ದೂಬಾ ಕೂಡ ಇದ್ದರು.