5 ದಿನಗಳಲ್ಲೇ PM-Cares ಖಾತೆಗೆ 3076 ಕೋಟಿ; ಏನಾಯ್ತು ಈ ಹಣ?
ನವದೆಹಲಿ, ಸಪ್ಟೆಂಬರ್.02: ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣ ಮತ್ತು ನಿರ್ವಹಣೆಗಾಗಿ ಪ್ರಧಾನಮಂತ್ರಿ ಪರಿಹಾರ ನಿಧಿ ಖಾತೆಗೆ ಐದು ದಿನಗಳಲ್ಲೇ 3076 ಕೋಟಿ ರೂಪಾಯಿ ಹಣವು ನೆರವಿನ ರೂಪದಲ್ಲಿ ಹರಿದು ಬಂದಿರುವ ವಿಚಾರ ಬಹಿರಂಗವಾಗಿದೆ.
Recommended Video
ಕೇಂದ್ರ ಸರ್ಕಾರ ನೀಡಿದ ಮಾಹಿತಿ ಪ್ರಕಾರ, ಕಳೆದ ಆರ್ಥಿಕ ವರ್ಷದ ಅಂತ್ಯದಲ್ಲಿ ಅಂದರೆ ಮಾರ್ಚ್.27ರಿಂದ ಮಾರ್ಚ್.31ರ ಅವಧಿಯಲ್ಲಿ ಪಿಎಂ ಕೇರ್ ಫಂಡ್ ಗೆ 3076 ಕೋಟಿ ರೂಪಾಯಿ ಬಂದಿದೆ. ಈ ಪೈಕಿ ದೇಶೀಯ ಮೂಲದಿಂದ 3075.85 ಕೋಟಿ ರೂಪಾಯಿ, ವಿದೇಶೀ ಮೂಲದಿಂದ 39.67 ಲಕ್ಷ ರೂಪಾಯಿ ನೆರವಿನ ನಿಧಿಯು ಬಂದಿದೆ.
ಪಿಎಂ ಕೇರ್ಸ್ನಿಂದ ಬಿಹಾರದಲ್ಲಿ ಎರಡು ಆಸ್ಪತ್ರೆಗೆ ಅನುದಾನ: ಕರ್ನಾಟಕಕ್ಕೆ ಎಷ್ಟು?
ಆಡಿಟ್ ಹೇಳಿಕೆಯನ್ನು PM-CARES ಫಂಡ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಆದರೆ ಹೇಳಿಕೆಯಲ್ಲಿರುವ "1 ರಿಂದ 6 ರವರೆಗಿನ ಟಿಪ್ಪಣಿ"ಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ. ದೇಶೀಯ ಮತ್ತು ವಿದೇಶಿ ಕೊಡುಗೆದಾರರು ಅಥವಾ ದಾನಿಗಳ ಕುರಿತು ಸರ್ಕಾರವು ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ.
ದಾನಿಗಳ ಹೆಸರನ್ನು ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನೆ
ಕೊರೊನಾವೈರಸ್ ಸೋಂಕು ನಿರ್ವಹಣೆ ಮತ್ತು ನಿಯಂತ್ರಣಕ್ಕಾಗಿ ಬಳಸಲು ಉದಾರವಾಗಿ ದಾನ ನೀಡಿದ ದಾನಿಗಳ ಹೆಸರನ್ನು ಏಕೆ ಗೌಪ್ಯವಾಗಿ ಇರಿಸಲಾಗಿದೆ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟ್ವೀಟ್ ಗಳಲ್ಲಿ ಪ್ರಶ್ನಿಸಿದ್ದಾರೆ. "ಏಕೆ? ಮಿತಿಮೀರಿದ ಮೊತ್ತಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ದಾನಿಗಳ ಹೆಸರನ್ನು ಬಹಿರಂಗಪಡಿಸುವಂತೆ ಎಲ್ಲ ಎನ್ಜಿಒ ಅಥವಾ ಟ್ರಸ್ಟ್ ನಿರ್ಬಂಧ ಹೊಂದಿದೆ. ಆದರೆ ಪಿಎಂ ಕೇರ್ಸ್ ಫಂಡ್ ಅನ್ನು ಈ ಬಾಧ್ಯತೆಯಿಂದ ಏಕೆ ವಿನಾಯಿತಿ ನೀಡಲಾಗಿದೆ" ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
ದಾನಿಗಳ ಬಗ್ಗೆ ಗೊತ್ತಿದ್ದರೂ ಹೇಳುವುದಕ್ಕೆ ಭಯವೇ?
ಮಾರ್ಚ್.27 ರಿಂದ ಮಾರ್ಚ್.31ರ ಅವಧಿಯಲ್ಲಿ 3076 ಕೋಟಿ ರೂಪಾಯಿ ಹಣವು ಪ್ರಧಾನಮಂತ್ರಿ ಪರಿಹಾರ ನಿಧಿಗೆ ಹರಿದು ಬಂದಿರುವುದನ್ನು ಟ್ರಸ್ಟಿಗಳೇ ಒಪ್ಪಿಕೊಂಡಿದ್ದಾರೆ. ದಾನವನ್ನು ನೀಡಿದವರು ಯಾರು ಎನ್ನುವುದು ಟ್ರಸ್ಟಿಗಳಿಗೆ ಗೊತ್ತಿದೆ. ಹಾಗಿದ್ದ ಮೇಲೆ ಮಾಹಿತಿ ನೀಡುವುದಕ್ಕೆ ಹೆದರುವುದು ಏಕೆ ಎಂದು ಮಾಜಿ ಸಚಿವ ಪಿ.ಚಿದಂಬರಂ ಪ್ರಶ್ನೆ ಮಾಡಿದ್ದಾರೆ.
ಪ್ರಧಾನಮಂತ್ರಿ ಪರಿಹಾರ ನಿಧಿ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿರ್ವಹಣೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಸಂಗ್ರಹಿಸಿದ ಹಣವನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಗೆ ವರ್ಗಾಯಿಸುವ ಅಗತ್ಯವಿಲ್ಲ ಎಂದು ಕಳೆದ ತಿಂಗಳು ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿತ್ತು. ಚಾರಿಟೇಬಲ್ ಟ್ರಸ್ಟ್ ಗಳು ಮತ್ತು ಪಿಎಂ ಕೇರ್ಸ್ ಸಂಗ್ರಹಿಸಿದ ಹಣವೂ ವಿಭಿನ್ನವಾಗಿರುತ್ತದೆ. ತೀರಾ ಅಗತ್ಯ ಎನಿಸಿದ ಸಂದರ್ಭಗಳಲ್ಲಿ ಪಿಎಂ ಕೇರ್ಸ್ ನಿಂದ ವಿಪತ್ತು ನಿರ್ವಹಣೆಗೆ ಹಣವನ್ನು ವರ್ಗಾಯಿಸುವುದಕ್ಕೆ ಅವಕಾಶವಿರುತ್ತದೆ ಎಂದು ಸರ್ವೋಚ್ಛ ನ್ಯಾಯಾಲಯವು ತಿಳಿಸಿತ್ತು.
ತುರ್ತು ಪರಿಸ್ಥಿತಿ ನಿಭಾಯಿಸಲು ಪಿಎಂ ಕೇರ್ಸ್ ರಚನೆ
ಕಳೆದ ಮಾರ್ಚ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಯ ಪರಿಹಾರ ನಿಧಿ(Prime Minister's Citizen Assistance and Relief in Emergency Situations Fund)ನ್ನು ಸ್ಥಾಪಿಸಿದರು. ಕೊರೊನಾವೈರಸ್ ರೀತಿಯ ಸಾಂಕ್ರಾಮಿಕ ಪಿಡುಗಿನ ನಿರ್ವಹಣೆಗೆ ಪಿಎಂ ಕೇರ್ಸ್ ಸ್ಥಾಪಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದರ ನಿರ್ವಹಣೆ ಹೊಣೆ ಹೊತ್ತುಕೊಂಡಿದ್ದು, ಕೇಂದ್ರ ಸಂಪುಟ ಹಿರಿಯ ಸದಸ್ಯರನ್ನು ಟ್ರಸ್ಟಿಗಳಾಗಿ ನೇಮಿಸಲಾಗಿದೆ.