ನಟಿ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಲು ಸಿಖ್ಖರ ಮನವಿ
ನವದೆಹಲಿ, ಮಾರ್ಚ್ 11: ನಟಿ ಕಂಗನಾ ಅವರ ಟ್ವೀಟ್ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಿದೆ. ರೈತರ ವಿರುದ್ಧ ಟ್ವೀಟ್ ಮಾಡಿ ಪ್ರಕರಣ ಎದುರಿಸುತ್ತಿರುವ ಕಂಗನಾ ಈಗ ಸಿಖ್ ಸಮುದಾಯದ ಕೋಪಕ್ಕೆ ಗುರಿಯಾಗಿದ್ದಾರೆ.
ಸಿಖ್ ಸಮುದಾಯದ ವಿರುದ್ಧ ಬಾಲಿವುಡ್ ನಟಿ ಕಂಗನಾ ರನೌತ್ ಅವರು ಮಾಡಿರುವ ಟ್ವೀಟ್ಸ್ ದ್ವೇಷಕ್ಕೆ ಪ್ರಚೋದನೆ ನೀಡುವಂತಿದೆ ಎಂದು ಸಿಖ್ಖರು ಆರೋಪಿಸಿದ್ದಾರೆ. ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿದೆ. ಮನವಿಯನ್ನು ಪುರಸ್ಕರಿಸಿದ ದೆಹಲಿ ಪಟಿಯಾಲ ಹೌಸ್ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಮರದೀಪ್ ಕೌರ್ ಅವರು ಈ ಬಗ್ಗೆ ಸ್ಥಿತಿಗತಿ ವರದಿ (Action Taken Report)ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದ್ದಾರೆ.
ರೈತರ ವಿರುದ್ಧ ಟ್ವೀಟ್: ಕಂಗನಾ ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಕಾರ
ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಅಧ್ಯಕ್ಷ ಮಣೀಂದರ್ ಸಿಂಗ್ ಸಿರ್ಸಾ ಅವರ ಕಂಗನಾ ವಿರುದ್ಧ ದೂರು ಸಲ್ಲಿಸಿದ್ದರು. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಾತ್ಮಕ ಕೃಷಿ ಕಾಯಿದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಸಿಖ್ ಸಮುದಾಯ ಮತ್ತು ರೈತರ ಹೆಸರಿಗೆ ಕಳಂಕ ತರುವುದರ ಜೊತೆಗೆ ಸಮುದಾಯ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಕಂಗನಾ ಟ್ವೀಟ್ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಕಂಗನಾ ವಿರುದ್ಧ ಐಪಿಸಿ ಸೆಕ್ಷನ್ 153ಎ, 153ಬಿ, 295ಎ, 505(1)(ಬಿ) ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 66ರ ಅಡಿ ಎಫ್ಐಆರ್ ದಾಖಲಿಸಲು ಕೋರಿ ಸಿರ್ಸಾ ಮನವಿ ಮಾಡಿಕೊಂಡಿದ್ದಾರೆ.