ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಹರಿದು ಹಾಕಿದ ಓವೈಸಿ
ನವದೆಹಲಿ, ಡಿಸೆಂಬರ್ 10: ಪೌರತ್ವ ಮಸೂದೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಮಂಡಿಸಿದರು. ಲೋಕಸಭೆಯಲ್ಲಿ ಅದು ಅಂಗೀಕಾರಗೊಂಡಿದೆ.
ಆದರೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಕೋಲಾಹಲ ಎಬ್ಬಿಸಿದ್ದು, ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಪೌರತ್ವ ಮಸೂದೆಯ ಪ್ರತಿಯನ್ನೇ ಸದನದಲ್ಲಿ ಹರಿದು ಹಾಕುವ ಮೂಲಕ ತೀವ್ರ ವಿವಾದಕ್ಕೆ ಕಾರಣವಾಗಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದಂತೆಯೇ ವಿಪಕ್ಷಗಳು ತೀವ್ರ ಗದ್ದಲ ಎಬ್ಬಿಸಿದವು. ಅಸಾದುದ್ದಿನ್ ಓವೈಸಿ ಅವರು ಮಸೂದೆ ಮಂಡನೆಗೆ ಆಕ್ರೋಶ ವ್ಯಕ್ತಪಡಿಸಿ, ಮಸೂದೆಯ ಪ್ರತಿಯನ್ನು ಹರಿದು ಹಾಕಿದ ಪ್ರಸಂಗ ಲೋಕಸಭೆಯಲ್ಲಿ ನಡೆಯಿತು.

ಈಶಾನ್ಯ ರಾಜ್ಯಗಳಲ್ಲಿ ತೀವ್ರ ವಿರೋಧ
ಈ ವೇಳೆ ಮಾತನಾಡಿದ ಅಸಾದುದ್ದಿನ್ ಒವೈಸಿ, "ಈ ಮಸೂದೆಯ ಮೂಲಕ ಭಾರತವನ್ನು ವಿಭಜಿಸಲಾಗುತ್ತಿದೆ, ಹೀಗಾಗಿ ನಾನು ಮಸೂದೆಯನ್ನು ನಾನು ಹರಿದು ಹಾಕುತ್ತೇನೆ ಎಂದರು. ಇದು ದೇಶದ ಎರಡನೇ ವಿಭಜನೆಯಾಗಿದೆ ಎಂದು ಕಿಡಿಕಾರಿದರು.
ಇತ್ತ ಈಶಾನ್ಯ ರಾಜ್ಯಗಳಲ್ಲಿಯೂ ಪೌರತ್ವ ಮಸೂದೆಗೆ ವಿರೋಧ ವ್ಯಕ್ತವಾಗುತ್ತಿದೆ. ಅಕ್ರಮ ವಲಸಿಗರನ್ನು ಧಾರ್ಮಿಕ ಆಧಾರದ ಮೇಲೆ ಹೊರತಾಗಿಯೂ ಗಡಿಪಾರು ಮಾಡುವ 1985 ರ ಆಸ್ಸಾಮ್ ಒಪ್ಪಂದವನ್ನು ರದ್ದುಗೊಳಿಸಿ, ಪೌರತ್ವ ಮಸೂದೆಯನ್ನು ಅಂಗೀಕಾರ ಮಾಡಲಾಗುತ್ತಿದೆ ಎಂದು ಈಶಾನ್ಯ ರಾಜ್ಯಗಳಲ್ಲಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಸ್ಲಿಮೇತರರಿಗೆ ಪೌರತ್ವ ನೀಡುವುದು
ಪೌರತ್ವ ಮಸೂದೆಯ ವಿರುದ್ದ ಈಶಾನ್ಯ ರಾಜ್ಯಗಳ ಅನೇಕ ಜನ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗಾಗಿ ಇಂದು ಆಸ್ಸಾಮ್, ಮಣಿಪುರ್ ಸೇರಿದಂತೆ ಅಲ್ಲಿನ ಕೆಲವು ರಾಜ್ಯಗಳಲ್ಲಿ ಸ್ವಯಂ ಘೋಷಿತ ಬಂದ್ ಗೆ ಕರೆ ನೀಡಲಾಗಿದೆ.
ಆರು ದಶಕಗಳ ಹಳೆಯ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗುತ್ತಿದ್ದು, ನೆರೆ ದೇಶಗಳಾದ ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳಿಂದ ಬಂದ ಮುಸ್ಲಿಮೇತರರಾದ ಹಿಂದೂ, ಕ್ರಿಶ್ಚಿಯನ್, ಬೌದ್ದ, ಜೈನ, ಪಾರ್ಸಿ ಮತ್ತು ಸಿಖ್ ಧರ್ಮದ ಜನರಿಗೆ ಪೌರತ್ವ ನೀಡುವ ಮಸೂದೆ ಇದಾಗಿದೆ.

ಲೋಕಸಭೆಯಲ್ಲಿ ಗದ್ದಲ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ ಮಂಡಿಸಿದಾಗ ವಿಪಕ್ಷಗಳು ವಿರೋಧ ಮಾಡಿದವು, ಇದು ಅಲ್ಪಸಂಖ್ಯಾತ ವಿರೋಧಿ ಮಸೂದೆಯಾಗಿದೆ ಎಂದು ಕೂಗಿದರು. ಈ ಆರೋಪ ತಳ್ಳಿ ಹಾಕಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಶೇ. 0.001 ರಷ್ಟು ಕೂಡ ಅಲ್ಪಸಂಖ್ಯಾತ ಸಮುದಾಯದ ವಿರುದ್ದವಾಗಿಲ್ಲ ಎಂದು ಸಮಜಾಯಿಷಿ ನೀಡಿದರು.
ಕಾಂಗ್ರೆಸ್ ನಾಯಕ ಅಧೀರ್ ಚೌಧರಿ ಮತ್ತು ಅಸಾದುದ್ದಿನ್ ಓವೈಸಿ ಸೇರಿದಂತೆ ಅನೇಕ ವಿಪಕ್ಷ ಸಂಸದರು ಸಂಸತ್ತಿನ ಕೆಳಮನೆಯಲ್ಲಿ ಅಸಮಾಧಾನ ಹೊರಹಾಕಿದರು. ಗಲಾಟೆ ತೀವ್ರವಾಗುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಅವರು ಪೌರತ್ವ ಮಸೂದೆಯನ್ನು ಮತಕ್ಕೆ ಹಾಕುವಂತೆ ನಿರ್ದೇಶನ ನೀಡಿದರು.

ರಾಜ್ಯಸಭೆಯಲ್ಲಿ ಮಂಡನೆ ಬಾಕಿ
ಮಸೂದೆಯನ್ನು ಮತಕ್ಕೆ ಹಾಕಿದಾಗ, ಮಸೂದೆಯ ಪರವಾಗಿ 311 ಮತ್ತು ವಿರುದ್ದವಾಗಿ 82 ಮತಗಳು ಚಲಾವಣಣೆಗೊಂಡವು. ಪೌರತ್ವ ಮಸೂದೆಯ ಪರವಾಗಿ ಹೆಚ್ಚಿನ ಮತಗಳು ಬಂದಿದ್ದರಿಂದ ಬಹುಮತ ಪಡೆದು ಲೋಕಸಭೆಯಯಲ್ಲಿ ಅಂಗೀಕಾರಗೊಂಡಿತು.
ಲೋಕಸಭೆಯಲ್ಲಿ ಪಾಸ್ ಆಗಿದ್ದರಿಂದ ಮುಂದೆ ಇದನ್ನನು ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗುತ್ತದೆ. ಅಲ್ಲಿ ಬಹುಮತ ಪಡೆದು ಅಂಗೀಕಾರಗೊಂಡರೆ ರಾಷ್ಟ್ರಪತಿ ಅಂಕಿತಕ್ಕೆ ಹೋಗುತ್ತದೆ. ಅಂಕಿತ ಬಿದ್ದ ನಂತರ ಕಾಯ್ದೆಯಾಗಿ ಜಾರಿಗೆ ಬರುತ್ತದೆ.












Click it and Unblock the Notifications