ಕಪಿಲ್ ಸಿಬಲ್ರಿಗೆ ಅಧೀರ್ ರಂಜನ್ ಚೌಧರಿ ಆತ್ಮಾವಲೋಕನ ಪಾಠ
ನವದೆಹಲಿ, ನವೆಂಬರ್.18: ಬಿಹಾರ ವಿಧಾನಸಭಾ ಚುನಾವಣೆ ಸೋಲಿನ ಬಗ್ಗೆ ಕಾಂಗ್ರೆಸ್ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಹಿರಿಯ ಮುಖಂಡ ಕಪಿಲ್ ಸಿಬಲ್ ವಿರುದ್ಧ ಕಾಂಗ್ರೆಸ್ಸಿನವರೇ ಆಗಿರುವ ಪಶ್ಚಿಮ ಬಂಗಾಳದ ಅಂಧೀರ್ ರಂಜನ್ ಚೌಧರಿ ತೀಕ್ಷ್ಣ ಉತ್ತರ ನೀಡಿದ್ದಾರೆ. ಏನನ್ನೂ ಮಾಡದೇ ಕೇವಲ ಮಾತನಾಡುವುದನ್ನು ಆತ್ಮಾವಲೋಕನ ಎಂದು ಹೇಳಲಾಗುವುದಿಲ್ಲ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡರಾದ ಕಪಿಲ್ ಸಿಬಲ್ ಇದೀಗ ಆತ್ಮಾವಲೋಕನ ಮಾಡಬೇಕು ಎನ್ನುವುದರ ಕುರಿತು ಕಾಳಜಿ ತೋರುತ್ತಿದ್ದಾರೆ. ಆದರೆ ಬಿಹಾರ ವಿಧಾನಸಭಾ ಚುನಾವಣೆ ಹಾಗೂ ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಗುಜರಾತ್ ಉಪ ಚುನಾವಣೆಗಳಲ್ಲಿ ನಾವು ಇವರ ಮುಖವೇ ಕಾಣಿಸಲಿಲ್ಲವಲ್ಲ ಎಂದು ಅಧೀರ್ ರಂಜನ್ ಚೌಧರಿ ಕಿಡಿ ಕಾರಿದ್ದಾರೆ.
ಕಳೆದ 2015ರಲ್ಲಿ ನಡೆದ ಬಿಹಾರ ವಿಧಾನಸಭಾ ಚುನಾವಣೆಗಳಲ್ಲಿ ಪಡೆದ ಸ್ಥಾನಗಳಿಗಿಂತ 2020ರ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದೆ. ಈ ಬಗ್ಗೆ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕಪಿಲ್ ಸಿಬಲ್ ಕಿಡಿ ಕಾರಿದ್ದರು.

ಕೆಲಸ ಮಾಡದೇ ಮಾತನಾಡುವುದು ತರವಲ್ಲ:
ಬಿಹಾರ ವಿಧಾನಸಭಾ ಚುನಾವಣೆ ಮತ್ತು ಮಧ್ಯಪ್ರದೇಶದ ಚುನಾವಣೆ ಸಂದರ್ಭದಲ್ಲಿ ಕಪಿಲ್ ಸಿಬಲ್ ಅವರು ಅಲ್ಲಿಗೆ ಹೋಗಿದ್ದರೆ, ಪಕ್ಷವನ್ನು ಬಲಪಡಿಸುವ ಕೆಲಸ ಮಾಡಿದ್ದಾರೆ ಎಂದು ಒಪ್ಪಿಕೊಳ್ಳಬಹುದಿತ್ತು. ಕೆಲಸ ಮಾಡಿದ ನಂತರವೂ ಫಲಿತಾಂಶ ಬರದಿದ್ದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಯಾವುದೇ ಕೆಲಸವನ್ನು ಮಾಡದೇ ಆತ್ಮಾವಲೋಕನ ಮಾತನ್ನು ಆಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಪ್ರಶ್ನೆ ಮಾಡಿದ್ದಾರೆ.
ಬಿಹಾರದ ವಿಧಾನಸಭಾ ಚುನಾವಣೆ ಮತ್ತು ಉಪಚುನಾವಣೆಗಳಲ್ಲಿ ಜನರು ಕಾಂಗ್ರೆಸ್ ಅನ್ನು "ಪರಿಣಾಮಕಾರಿ ಪರ್ಯಾಯ" ಎಂದು ಪರಿಗಣಿಸುವುದಿಲ್ಲ ಎಂದು ಸಿಬಲ್ ಆರೋಪಿಸಿದ್ದರು. ಈ ಹಿನ್ನೆಲೆ ಕಪಿಲ್ ಸಿಬಲ್ ವಿರುದ್ಧ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುಡುಗಿದ್ದರು.












Click it and Unblock the Notifications