ಒಮಿಕ್ರೋನ್ ಪ್ರಕರಣಗಳಿರುವ ದೇಶಗಳ ವಿಮಾನ ಹಾರಾಟ ರದ್ದುಗೊಳಿಸುವಂತೆ ಕೇಜ್ರಿವಾಲ್ ಒತ್ತಾಯ
ನವದೆಹಲಿ, ನವೆಂಬರ್ 27: ಹೊಸ ಕೊರೊನಾ ರೂಪಾಂತರಿ ಒಮಿಕ್ರೋನ್ ಕಂಡುಬಂದಿರುವ ದೇಶಗಳಿಂದ ಬರುವ ವಿಮಾನಗಳನ್ನು ರದ್ದುಗೊಳಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಮೋದಿಯನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೊರೊನಾ ಲಸಿಕೆ, ದೇಶದಲ್ಲಿರುವ ಕೊರೊನಾ ಪರಿಸ್ಥಿತಿ ಕುರಿತು ಉನ್ನತ ಅಧಿಕಾರಿಗಳ ಜತೆ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಕೇಜ್ರಿವಾಲ್ ಹೇಳಿದ್ದಾರೆ.
ಹೊಸ ಕೋವಿಡ್ ರೂಪಾಂತರಿ ವಿರುದ್ಧ ಬೂಸ್ಟರ್ ಡೋಸ್ ಸಿದ್ಧಪಡಿಸಲಿದೆ ಮಾಡೆರ್ನಾ
ಹೊಸ ರೂಪಾಂತರದಿಂದ ಪ್ರಭಾವಿತವಾಗಿರುವ ದೇಶಗಳಿಂದ ಬರುವ ವಿಮಾನಗಳನ್ನು ನಿಲ್ಲಿಸಬೇಕು. ಬಹಳ ಕಷ್ಟದಿಂದ ನಮ್ಮ ದೇಶವು ಕೊರೊನಾದಿಂದ ಚೇತರಿಸಿಕೊಳ್ಳುತ್ತಿದೆ. ಈ ಹೊಸ ರೂಪಾಂತರಿಯು ಭಾರತವನ್ನು ಹೆಚ್ಚೆಚ್ಚು ಪ್ರವೇಶಿಸದಂತೆ ತಡೆಯಲು ಮುನ್ನೆಚ್ಚರಿಕೆವಹಿಸಬೇಕಿದೆ.
ಕೊರೊನಾದ ಆತಂಕ ಇನ್ನೂ ಸುಳಿದಾಡುತ್ತಿರುವ ಬೆನ್ನಲ್ಲೇ ಮತ್ತೊಂದು ಕೊರೊನಾ ರೂಪಾಂತರಿ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದು, ವಿಶ್ವಸಂಸ್ಥೆ ಅದಕ್ಕೆ 'ಒಮಿಕ್ರೋನ್' ಎಂದು ಹೆಸರಿಟ್ಟಿದೆ.
ಇದು ಹೆಚ್ಚಿನ ಸಂಖ್ಯೆಯ ರೂಪಾಂತರಗಳನ್ನು ಹೊಂದಿರಲಿದ್ದು ಮರುಸೋಂಕಿನ ಅಪಾಯವನ್ನು ಸೂಚಿಸುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇದು ನವೆಂಬರ್ 24 ರಂದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾಗಿದೆ ಎಂದು WHOಗೆ ವರದಿ ಮಾಡಲಾಗಿದೆ. ನಂತರ ಬೋಟ್ಸ್ವಾನಾ, ಬೆಲ್ಜಿಯಂ, ಹಾಂಕಾಂಗ್ ಮತ್ತು ಇಸ್ರೇಲ್ನಲ್ಲಿಯೂ ಈ ಅಪಾಯಕಾರಿ ವೈರಸ್ ಇರುವುದನ್ನು ಗುರುತಿಸಲಾಗಿದೆ.
'ಒಮಿಕ್ರೋನ್' ಆತಂಕ ಹಿನ್ನೆಲೆ ಹಲವಾರು ದೇಶಗಳು ದಕ್ಷಿಣ ಆಫ್ರಿಕಾಕ್ಕೆ ಮತ್ತು ಅಲ್ಲಿಂದ ಬೇರೆಡೆಗೆ ಪ್ರಯಾಣವನ್ನು ನಿಷೇಧಿಸಲು ಅಥವಾ ನಿರ್ಬಂಧಿಸಲು ನಿರ್ಧರಿಸಿವೆ. ದಕ್ಷಿಣ ಆಫ್ರಿಕಾ, ನಮೀಬಿಯಾ, ಜಿಂಬಾಬ್ವೆ, ಬೋಟ್ಸ್ವಾನಾ, ಲೆಸೊಥೊ ಮತ್ತು ಇಸ್ವಾಟಿನಿಯಿಂದ ಬರುವ ಪ್ರಯಾಣಿಕರು ಯುಕೆ ಅಥವಾ ಐರಿಶ್ ಪ್ರಜೆಗಳು ಅಥವಾ ಯುಕೆ ನಿವಾಸಿಗಳ ಹೊರತು ಬೇರೆ ಯಾರೂ ಯುಕೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ದಕ್ಷಿಣ ಆಫ್ರಿಕಾ, ಬೋಟ್ಸ್ವಾನಾ, ಜಿಂಬಾಬ್ವೆ, ನಮೀಬಿಯಾ, ಲೆಸೊಥೊ, ಇಸ್ವಾಟಿನಿ, ಮೊಜಾಂಬಿಕ್ ಮತ್ತು ಮಲಾವಿಯಿಂದ ವಿಮಾನಗಳನ್ನು ನಿರ್ಬಂಧಿಸಲಾಗುವುದು ಎಂದು ಅಮೆರಿಕ ಅಧಿಕಾರಿಗಳು ಹೇಳಿದ್ದಾರೆ. ಸೋಮವಾರದಿಂದಲೇ ಇದು ಜಾರಿಗೆ ಬರಲಿದೆ.
ಕಾಲಾನಂತರದಲ್ಲಿ ವೈರಸ್ ಬದಲಾಗುವುದು ಅಥವಾ ರೂಪಾಂತರಗೊಳ್ಳುವುದು ಅಸಾಮಾನ್ಯವೇನಲ್ಲ. ರೂಪಾಂತರವು ಪ್ರಸರಣ, ವೈರಲೆನ್ಸ್ ಅಥವಾ ಲಸಿಕೆಗಳ ಪರಿಣಾಮಕಾರಿತ್ವದಂತಹ ವಿಷಯಗಳ ಮೇಲೆ ಪರಿಣಾಮ ಬೀರಿದಾಗ ಒಂದು ರೂಪಾಂತರವು ಹಲವು ರೂಪುಗಳನ್ನು ಪಡೆಯುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ದೇಶದಲ್ಲಿ ಕೊರೋನಾ ಹಾಗೂ ಲಸಿಕೆ ಪರಿಸ್ಥಿತಿಯ ಪರಿಶೀಲನೆ ನಡೆಸಲಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆಂದು ತಿಳಿದುಬಂದಿದೆ.
ವಿಶ್ವಾದ್ಯಂತ ಕೋವಿಡ್ ರೂಪಾಂತರಿ ತಳಿಗಳು ಕೋಲಾಹಲ ಎಬ್ಬಸಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಇಂದು ನಡೆಸುತ್ತಿರುವ ಸಭೆಯಲು ತೀವ್ರ ಕುತೂಹಲವನ್ನು ಮೂಡಿಸಿದೆ.
ಸಭೆ ವೇಳೆ ದೇಶದಲ್ಲಿ ಒಮಿಕ್ರೋನ್ ಸೇರಿದಂತೆ ಡೆಲ್ಟಾ, ಆಲ್ಟ್ರಾ ಹಾವಳಿ ತಡೆಗಟ್ಟುವ ಬಗ್ಗೆ ಹಾಗೂ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಹಾಗೂ ಇದನ್ನು ತಡೆಗಟ್ಟುವ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಿರ್ದೇಶನ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ವಿಶ್ವದ ಹಲವು ದೇಶಗಳಲ್ಲಿ ಕೊರೊನಾದ ಹೊಸ ತಳಿ B.1.1.529 ವೈರಸ್ ಪತ್ತೆಯಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಓಮಿಕ್ರಾನ್ ಎಂದು ಹೆಸರಿಸಿದೆ. ಹೀಗಾಗಿ ಕೇಂದ್ರ ಸರ್ಕಾರವೂ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ.
ಐರೋಪ್ಯ ರಾಷ್ಟ್ರಗಳು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಸಿಂಗಾಪುರ, ಹಾಂಗ್ಕಾಂಗ್, ಇಸ್ರೆಲ್ನಿಂದ ಭಾರತಕ್ಕೆ ಬರುವವರಿಗೆ ಕೊವಿಡ್ ಟೆಸ್ಟ್ ಸೇರಿ ಹೆಚ್ಚುವರಿ ಕ್ರಮ ಅನುಸರಿಸಲು ಸೂಚನೆ ನೀಡಲಾಗಿದೆ.