ಬಿಜೆಪಿಗೆ ಒಬಿಸಿ ನಾಯಕ ಅಲ್ಪೇಶ್ ಠಾಕೂರ್?
ನವದೆಹಲಿ, ಮೇ 28: ಗುಜರಾತ್ ಕಾಂಗ್ರೆಸ್ನ ಮಾಜಿ ಮುಖಂಡ ಹಾಗೂ ಹಿಂದುಳಿದ ವರ್ಗಗಳ ನೇತಾರ ಅಲ್ಪೇಶ್ ಠಾಕೂರ್ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗೆ ಮತ್ತೆ ಜೀವ ಬಂದಿದೆ.
ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲರನ್ನು ಅಲ್ಪೇಶ್ ಹಾಗೂ ಕಾಂಗ್ರೆಸ್ ಶಾಸಕ ಬಿ.ಡಿ.ಜಾಲಾ ಅವರು ಸೋಮವಾರ ಭೇಟಿಯಾಗಿರುವುದು ಈ ಊಹಾಪೋಹಕ್ಕೆ ಕಾರಣವಾಗಿದೆ. ಸುಮಾರು ಅರ್ಧ ಗಂಟೆಗಳ ಕಾಲ ಉಭಯ ನಾಯಕರು ನಿತಿನ್ ಪಟೇಲ್ ಜತೆ ಮಾತುಕತೆ ನಡೆಸಿದ್ದಾರೆ. ಮಾತುಕತೆಯ ವಿವರವನ್ನು ಯಾವುದೇ ನಾಯಕರು ಬಹಿರಂಗಪಡಿಸಿಲ್ಲ. ಆದರೆ ಕಳೆದ ೩-೪ ತಿಂಗಳಿಂದ ಅಲ್ಪೇಶ್ ಬಿಜೆಪಿ ಸೇರ್ಪಡೆ ಕುರಿತು ಸುದ್ದಿಗಳು ಬರುತ್ತಿವೆ.
ಆದರೆ ಬಿಜೆಪಿ ವಕ್ತಾರರು ಈ ವರದಿ ತಳ್ಳಿ ಹಾಕಿದ್ದು, ಕ್ಷೇತ್ರದ ಅಭಿವೃದ್ಧಿಗಾಗಿ ಈ ಭೇಟಿ ನಡೆದಿದೆ. ಯಾವುದೇ ರಾಜಕೀಯ ಇರಲಿಲ್ಲ ಎಂದು ತಿಳಿಸಿದ್ದಾರೆ.

ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಅಲ್ಪೇಶ್ ಭಿನ್ನಾಭಿಪ್ರಾಯ ಹೊಂದಿದ್ದರು. ಗುಜರಾತ್ನ ಪಾಠಣ್ ಲೋಕಸಭಾ ಕ್ಷೇತ್ರದಿಂದ ಅಲ್ಪೇಶ್ ಟಿಕೆಟ್ ಬಯಸಿದ್ದರು. ಇಲ್ಲವಾದಲ್ಲಿ ಠಾಕೂರ್ ಸೇನೆಗೆ ಸೇರಿದ ವ್ಯಕ್ತಿಗೆ ಟಿಕೆಟ್ ನೀಡಬೇಕು ಎನ್ನುವ ಆಗ್ರಹ ಮುಂದಿಟ್ಟಿದ್ದರು.
ಇವೆರಡು ಬೇಡಿಕೆ ತಿರಸ್ಕರಿಸಿದ್ದ ಕಾಂಗ್ರೆಸ್, ಮಾಜಿ ಸಂಸದ ಜಗದೀಶ್ ಠಾಕೂರ್ಗೆ ಟಿಕೆಟ್ ನೀಡಿತ್ತು. ರಾಜ್ಯ ಘಟಕದ ಈ ತೀರ್ಮಾನ ವಿರೋಧಿಸಿ ರಾಹುಲ್ ಗಾಂಧಿಗೂ ಅಲ್ಪೇಶ್ ದೂರು ನೀಡಿದ್ದರು. ಇದಲ್ಲದೇ ಪಟೇಲ್ ಮೀಸಲು ಹೋರಾಟದ ಮುಖ್ಯಸ್ಥ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸೇರ್ಪಡೆ ಹಾಗೂ ಪಕ್ಷದಲ್ಲಿನ ಸ್ಥಾನಮಾನದ ಬಗೆಗೂ ಅಲ್ಪೇಶ್ ಬೇಸರ ಹೊಂದಿದ್ದಾರೆ ಎನ್ನಲಾಗಿದೆ.












Click it and Unblock the Notifications