ಗ್ಯಾರಂಟಿಗಳಿಗೆ ಹಣ ಹೊಂದಿಸಲು ಜನರ ಮೇಲೆ ಎಷ್ಟು ತೆರಿಗೆ ಹಾಕಿದ್ದೀರಿ? ಕಾಂಗ್ರೆಸ್ಗೆ ಹೆಚ್.ಡಿ.ಕುಮಾರಸ್ವಾಮಿ ಸವಾಲು
ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕುರಿತು ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ನಾಯಕರಿಗೆ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಸವಾಲು ಹಾಕಿದ್ದಾರೆ. "ಕಳೆದ ಮೂರು ವರ್ಷಗಳಲ್ಲಿ ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸಲು ನಿಮ್ಮ ಸರ್ಕಾರ ರಾಜ್ಯದ ಜನರ ಮೇಲೆ ಎಷ್ಟು ಬಾರಿ ತೆರಿಗೆ ವಿಧಿಸಿದೆ? ಯಾವ ಯಾವ ಬಾಬತ್ತುಗಳ ಮೇಲೆ ಎಷ್ಟೆಷ್ಟು ಬೆಲೆ ಏರಿಕೆ ಮಾಡಿದೆ ಎಂಬುದರ ಪಟ್ಟಿಯನ್ನು ಮೊದಲು ಬಿಡುಗಡೆ ಮಾಡಿ" ಎಂದು ಅವರು ಗುಡುಗಿದ್ದಾರೆ.
ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ 'ಜನರೊಂದಿಗೆ ಜನತಾದಳ' ಮತ್ತು ಪಕ್ಷದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದೆಡೆ ಗ್ಯಾರಂಟಿ ನೀಡುತ್ತಿದ್ದೇವೆ ಎಂದು ಜನರ ಮೂಗಿಗೆ ತುಪ್ಪ ಸವರುತ್ತಿರುವ ಕಾಂಗ್ರೆಸ್ ಸರ್ಕಾರ, ಮತ್ತೊಂದೆಡೆ ಮದ್ಯ, ಬಸ್ ಪ್ರಯಾಣ, ವಿದ್ಯುತ್ ಸೇರಿದಂತೆ ಹತ್ತಾರು ಅಗತ್ಯ ಸೇವೆಗಳ ಮೇಲೆ ನಿರಂತರವಾಗಿ ತೆರಿಗೆ ಹೇರಿ ಲೂಟಿ ಮಾಡುತ್ತಿದೆ" ಎಂದು ಎಚ್ಡಿಕೆ ಆಕ್ರೋಶ ವ್ಯಕ್ತಪಡಿಸಿದರು.

ತೈಲ ಬಿಕ್ಕಟ್ಟಿಗೆ ಜಾಗತಿಕ ಯುದ್ಧ ಕಾರಣ
ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ನಡೆಸುತ್ತಿರುವ ಸುದೀರ್ಘ ಯುದ್ಧದಿಂದಾಗಿ ಜಾಗತಿಕವಾಗಿ ತೈಲ ಸರಬರಾಜಿನಲ್ಲಿ ಬಿಕ್ಕಟ್ಟು ಉಂಟಾಗಿದೆ. ಯುದ್ಧದ ಮುನ್ಸೂಚನೆ ಯಾರಿಗಾದರೂ ಮೊದಲೇ ಕನಸಿನಲ್ಲಿ ಬರಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಸಿಂಗಾಪುರದಲ್ಲಿ ಪೆಟ್ರೋಲ್ ಬೆಲೆ ₹245 ದಾಟಿದೆ. ಆದರೆ ಜಗತ್ತಿನ ಮುಂದುವರಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ತೈಲ ಬೆಲೆ ಇಂದಿಗೂ ನಿಯಂತ್ರಣದಲ್ಲಿದೆ ಎಂದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ರಾಜ್ಯದ ಕನಿಷ್ಠ 75 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಜಯಭೇರಿ ಬಾರಿಸಲಿದೆ. ಅದರಲ್ಲೂ 2028ರ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರ ಮತ್ತೆ ಜೆಡಿಎಸ್ ಪಾಲಾಗಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು. ಬರುವ ಮೇ 19ರಂದು ಸಾಧನಾ ಸಮಾವೇಶ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರು, ಕಳೆದ ಮೂರು ವರ್ಷಗಳಲ್ಲಿ ರಾಜ್ಯದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಏನು ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದೂ ಹರಿಹಾಯ್ದರು.

ಕುರುಬ ಸಮುದಾಯದ ಪೇಟ ತೊಟ್ಟು ಎಚ್ಡಿಕೆ ಭಾಷಣ
ಸಮಾವೇಶದಲ್ಲಿ ಸಾಂಪ್ರದಾಯಿಕ ಪೇಟ ಧರಿಸಿ ಭಾಷಣ ಮಾಡಿದ ಕುಮಾರಸ್ವಾಮಿ ಅವರು, "ನಾನು ಹಾಲುಮತಸ್ಥರು ಮತ್ತು ಕುರುಬ ಸಮುದಾಯಕ್ಕೆ ವಿಶೇಷ ಸಂದೇಶ ನೀಡಲು ಈ ಪೇಟ ಧರಿಸಿದ್ದೇನೆ. ಕುರುಬರು, ದಲಿತರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಹಿತ ಕಾಯಲು ಜೆಡಿಎಸ್ ಸದಾ ಸಿದ್ಧವಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಬಯಸುತ್ತೇನೆ" ಎಂದರು. ಅಲ್ಲದೆ ಸದ್ಯದ ಹಾಲಿ ಮುಖ್ಯಮಂತ್ರಿಗಳಿಗಿಂತ (ಸಿದ್ದರಾಮಯ್ಯ) ತಾವು ಮುಖ್ಯಮಂತ್ರಿಯಾಗಿದ್ದ ಅಲ್ಪಾವಧಿಯಲ್ಲೇ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅತಿ ಹೆಚ್ಚು ಅಭಿವೃದ್ಧಿ ಅನುದಾನ ನೀಡಿರುವುದಾಗಿಯೂ ಸಮರ್ಥಿಸಿಕೊಂಡರು.
ಈ ಸಮಾವೇಶದಲ್ಲಿ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಎಂ. ಕೃಷ್ಣಾರೆಡ್ಡಿ, ಮಾಜಿ ಸಚಿವ ಸಾ.ರಾ. ಮಹೇಶ್, ಶಾಸಕ ಜಿ.ಡಿ. ಹರೀಶ್ ಗೌಡ, ಸಿ.ಎನ್. ಮಂಜೇಗೌಡ ಸೇರಿದಂತೆ ಮೈಸೂರು ಭಾಗದ ಹಿರಿಯ ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.













Click it and Unblock the Notifications