ಮತ್ತೆ ಲಾಕ್ಡೌನ್ ಅಗತ್ಯವೇ ಇಲ್ಲ: ಆರೋಗ್ಯ ಸಚಿವರ ಸ್ಪಷ್ಟನೆ
ನವದೆಹಲಿ, ನವೆಂಬರ್ 16: ರಾಜಧಾನಿ ದೆಹಲಿಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏಕಾಏಕಿ ಏರಿಕೆಯಾಗಿ ಆತಂಕ ಮೂಡಿಸಿದೆ. ಕೊರೊನಾ ವೈರಸ್ ಮೂರನೇ ಅಲೆ ತೀವ್ರ ಸ್ವರೂಪದಲ್ಲಿ ಹರಡಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಲಾಕ್ ಡೌನ್ ಜಾರಿಗೆ ತರಲಿದೆ ಎಂಬ ಸುದ್ದಿ ಹರಡಿದೆ. ಆದರೆ ಇದನ್ನು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿರಾಕರಿಸಿದ್ದಾರೆ.
'ಲಾಕ್ಡೌನ್ ಜಾರಿಗೆ ತರುವುದು ಸಾಧ್ಯವೇ ಇಲ್ಲ' ಎಂದು ಸತ್ಯೇಂದ್ರ ಜೈನ್ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ್ದಾರೆ. 'ದೆಹಲಿಯಲ್ಲಿ ಉತ್ತುಂಗಕ್ಕೇರಿದ್ದ ಮೂರನೇ ಅಲೆ ಹೊರಟುಹೋಗಿದೆ ಎಂದು ನಾನು ಇಂದು ನಿಮಗೆ ಹೇಳಬಲ್ಲೆ. ಮಾರುಕಟ್ಟೆಗಳನ್ನು ಮುಚ್ಚುವುದರ ಬಗ್ಗೆ ಎಂದಿಗೂ ಆಲೋಚನೆಯನ್ನೇ ಮಾಡಿಲ್ಲ. ಹಬ್ಬಗಳು ಮುಗಿದಿವೆ. ಇನ್ನು ಮುಂದೆ ಜನದಟ್ಟಣೆ ಕಡಿಮೆಯಾಗಲಿದೆ' ಎಂದಿದ್ದಾರೆ.
ಆದರೆ ಜನರು ಹೊರಗೆ ಬರುವಾಗ ಕಟ್ಟೆಚ್ಚರ ವಹಿಸಬೇಕು. ಅವರು ಮಾಸ್ಕ್ಗಳನ್ನು ಧರಿಸಬೇಕು. ಲಾಕ್ಡೌನ್ ಒಂದು ಕಲಿಕೆಯ ಸಮಯ. ಯಾರು ಮಾಸ್ಕ್ ಧರಿಸಿರುತ್ತಾರೋ ಅವರು ಗಳಿಸಿಕೊಂಡಿರುವುದನ್ನು ನೋಡಿ ನಾವು ಲಾಕ್ಡೌನ್ನಿಂದ ಕಲಿತುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಭಾನುವಾರ 3,235 ಹೊಸ ಕೋವಿಡ್ 19 ಪ್ರಕರಣಗಳು ಮತ್ತು 95 ಸಾವುಗಳು ವರದಿಯಾಗಿವೆ. ದೀಪಾವಳಿ ಸಂದರ್ಭದಲ್ಲಿ ರಾಜಧಾನಿಯಲ್ಲಿನ ಕೋವಿಡ್ ಪ್ರಕರಣಗಳು ಕಳೆದ ವಾರಕ್ಕೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಾಗಿದೆ. ಪರೀಕ್ಷೆ ನಡೆಸಲಾಗಿದ್ದ 21,098 ಮಂದಿಯಲ್ಲಿಯೇ ದಿನವೂ ಸರಾಸರಿ 7,000 ಸೋಂಕಿನ ಪ್ರಕರಣಗಳು ವರದಿಯಾಗಿದ್ದವು. ಸೆಪ್ಟೆಂಬರ್ನಲ್ಲಿ ಎರಡನೆಯ ಅಲೆಯ ವೇಳೆ ದಿನವೂ ಸುಮಾರು 60,000 ಪರೀಕ್ಷೆಗಳನ್ನು ನಡೆಸಿದ್ದರೆ, ಅದರಲ್ಲಿ ಮೂರನೇ ಒಂದು ಭಾಗ ಕೋವಿಡ್ ಪ್ರಕರಣ ಕಂಡುಬರುತ್ತಿತ್ತು.












Click it and Unblock the Notifications