ಪ್ರಧಾನಿ ಅಭ್ಯರ್ಥಿ ವದಂತಿ ಬಗ್ಗೆ ನಿತಿನ್ ಗಡ್ಕರಿ ಪ್ರತಿಕ್ರಿಯೆ
Recommended Video

ನವದೆಹಲಿ, ಡಿಸೆಂಬರ್ 21: 'ಪ್ರಧಾನಿ ಅಭ್ಯರ್ಥಿಯಾಗಿ ನಿತಿನ್ ಗಡ್ಕರಿಯವರನ್ನು ಆಯ್ಕೆ ಮಾಡಿದರೆ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ' ಎಂಬ ಮಹಾರಾಷ್ಟ್ರದ ಪ್ರಮುಖ ರೈತ ಮುಖಂಡರೊಬ್ಬರ ಹೇಳಿಕೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ.
"ನಾನು ಪ್ರಧಾನಿ ಅಭ್ಯರ್ಥಿಯಾಗುವುದು ಸಾಧ್ಯವೇ ಇಲ್ಲ. ನಾನು ಈಗ ಎಲ್ಲಿದ್ದೇನೋ, ಅಲ್ಲಿಯೇ ಸಂತಸವಾಗಿದ್ದೇನೆ" ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ಹೇಳಿದ್ದಾರೆ.
"ನಾನು ಈಗ ಏನಾಗಿದ್ದೇನೋ ಅದರಲ್ಲೇ ನನಗೆ ಸಂತಸವಿದೆ. ನಾನು ಮೊದಲು ಗಂಗಾ ಸ್ವಚ್ಛ ಕಾರ್ಯವನ್ನು ಮುಗಿಸಬೇಕು. ಹಲವು ಜವಾಬ್ದಾರಿಗಳು ನನ್ನ ಮೇಲಿವೆ. ಅವನ್ನೆಲ್ಲ ಮಿಗಿಸಬೇಕಿದೆ. ಈ ಕೆಲಸದಲ್ಲೇ ನನಗೆ ಸಂತಸವಿದೆ" ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ರೈತ ಮುಖಂಡ ಕಿಶೋರ್ ತಿವಾರಿ ಎಂಬುವವರು ಆರೆಸ್ಸೆಸ್ ಮುಖಂಡರಾದ ಮೋಹನ್ ಜೀ ಭಾಗವತ್ ಮತ್ತು ಭಯ್ಯಾಜಿ ಸುರೇಶ್ ಜೋಶಿ ಅವರಿಗೆ ಪತ್ರ ಬರೆದಿದ್ದು, 'ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳ ಫಲಿತಾಂಶ ದುರಹಂಕಾರದ ಪ್ರತಿಫಲ. ಅಪನಗದೀಕರಣ, ಜಿಎಸ್ಟಿ ಮತ್ತು ತೈಲ ಬೆಲೆ ಏರಿಕೆ ಮುಂತಾದ ನಿರ್ಧಾರಗಳೇ ಈ ಸೋಲಿಗೆ ಕಾರಣ' ಎಂದಿದ್ದರು.
"ನರೇಂದ್ರ ಮೋದಿಯವರನ್ನೇ ಮತ್ತೆ ಪ್ರಧಾನಿಯಾಗಿ ಬಿಂಬಿಸಿದರೆ ಬಿಜೆಪಿ ಗೆಲ್ಲುವುದಿಲ್ಲ. ಸ್ನೇಹಪರ ವ್ಯಕ್ತಿತ್ವದ ನಿತಿನ್ ಗಡ್ಕರಿ ಅವರನ್ನು ಪ್ರಧಾನಿಯನ್ನಾಗಿ ಮಾಡಿ. ಅವರು ಕಳೆದ ಹಲವು ವರ್ಷಗಳಿಂದ ಬಿಜೆಪಿ ಮತ್ತು ಆರೆಸ್ಸೆಸ್ ನ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಪತ್ರದಲ್ಲಿ ಬರೆಯಲಾಗಿತ್ತು.












Click it and Unblock the Notifications