ನಿರ್ಭಯಾ ಅತ್ಯಾಚಾರ ಪ್ರಕರಣ: ಸುಪ್ರೀಂನಲ್ಲಿ ಇಂದು ವಿಚಾರಣೆ
ನವದೆಹಲಿ, ಡಿಸೆಂಬರ್ 18: ದೆಹಲಿಯಲ್ಲಿ ನಡೆದ 'ನಿರ್ಭಯಾ' ಸಾಮೂಹಿಕ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಅಪರಾಧಿ ಅಕ್ಷಯ್ ಕುಮಾರ್ ಸಲ್ಲಿರುವ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ನ್ಯಾಯಮೂರ್ತಿಗಳಾದ ಆರ್. ಭಾನುಮತಿ, ಎ.ಎಸ್. ಬೋಪಣ್ಣ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ಮೂವರು ಸದಸ್ಯರ ನ್ಯಾಯಪೀಠ ಬೆಳಿಗ್ಗೆ 10.30ಕ್ಕೆ ಪ್ರಕರಣದ ವಿಚಾರಣೆ ನಡೆಸಲಿದೆ.
2012ರಲ್ಲಿ ನಡೆದಿದ್ದ ಈ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿತ್ತು. ಈಗಾಗಲೇ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲಾಗಿದ್ದು, ಅವರ ಕ್ಷಮಾದಾನ ಅರ್ಜಿಯನ್ನು ಸರ್ಕಾರ ಮತ್ತು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಈ ನಡುವೆ ಅಪರಾಧಿಗಳಲ್ಲಿ ಒಬ್ಬನಾದ ಅಕ್ಷಯ್ ಕುಮಾರ್, ಸುಪ್ರೀಂಕೋರ್ಟ್ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾನೆ.

ಮಂಗಳವಾರ ನ್ಯಾಯಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬಂದಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ಅವರ ಸಂಬಂಧಿ, 'ನಿರ್ಭಯಾ'ಳ ತಾಯಿಯ ಪರವಾಗಿ ವಕಾಲತ್ತು ವಹಿಸುತ್ತಿರುವುದರಿಂದ ಸಿಜೆಐ ಈ ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ.
ಸಿಜೆಐ ಅವರೇ ವಿಚಾರಣೆ ನಡೆಸುವುದು ಸೂಕ್ತವೇ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೇಳಿದರು. ಸಿಜೆಐ ಈ ವಿಚಾರಣೆ ನಡೆಸುವುದರಿಂದ ಯಾವ ಸಂಘರ್ಷವೂ ಇರುವುದಿಲ್ಲ ಎಂದರು. ಆದರೆ ವಿಚಾರಣೆಯಿಂದ ಹಿಂದೆ ಸರಿಯುವುದಾಗಿ ಎಸ್ಎ ಬೊಬ್ಡೆ ಹೇಳಿದರು.
ನಿರ್ಭಯಾ ಪ್ರಕರಣದ ತನಿಖೆಯೇ ಸಮರ್ಪಕವಾಗಿ ನಡೆದಿಲ್ಲ. ರಾಜಕಾರಣಿಗಳು, ಮಾಧ್ಯಮ ಮತ್ತು ಸಾರ್ವಜನಿಕರ ಒತ್ತಡದ ನಡುವೆ ಈ ತನಿಖೆ ನಡೆಸಲಾಗಿದೆ. ಅಲ್ಲದೆ, ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿರುವುದು ತಪ್ಪು. ಅವರನ್ನು ಹುಡುಕಿದ, ಪತ್ತೆ ಹಚ್ಚಿದ ಮತ್ತು ಬಂಧಿಸಿದ ರೀತಿಯೇ ಅನುಮಾನಾಸ್ಪದವಾಗಿದೆ ಎಂದು ಅಕ್ಷಯ್ ಕುಮಾರ್ ಪರ ವಕೀಲ ಎಪಿ ಸಿಂಗ್ ವಾದಿಸಿದ್ದಾರೆ.












Click it and Unblock the Notifications