ಮತ್ತೆ ಸಮ-ಬೆಸ ಪ್ರಯೋಗ, ಮೊದಲ ದಿನವೇ ಭರ್ಜರಿ ದಂಡ ವಸೂಲಿ
ನವದೆಹಲಿ, ಏಪ್ರಿಲ್, 15: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಏಪ್ರಿಲ್ 15 ರಿಂದ 2ನೇ ಹಂತದ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಆರಂಭವಾಗಿದೆ. ಸಾಮಾಜಿಕ ತಾಣಗಳಲ್ಲೂ ಸಹ ಈ ಸಮ-ಬೆಸದ್ದೇ ಮಾತು.
ಮೊದಲ ದಿನವೇ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದ ಐನೂರಕ್ಕೂ ಅಧಿಕ ಮಂದಿಗೆ ದಂಡ ಹೇರಲಾಗಿದೆ. ದಕ್ಷಿಣ ದಿಲ್ಲಿಯಲ್ಲಿ ಅತ್ಯಧಿಕ ಸಂಖ್ಯೆಯ ಉಲ್ಲಂಘನೆ ನಡೆದಿದ್ದು ಇಲ್ಲಿ 129 ಜನರಿಗೆ ದಂಡ ವಿಧಿಸಲಾಗಿದೆ. ಇದನ್ನು ಅನುಸರಿಸಿ ಪಶ್ಚಿಮ ದಿಲ್ಲಿಯಲ್ಲಿ 108 ಮಂದಿಗೆ ದಂಡ ಹೇರಲಾಗಿದೆ.[ದೆಹಲಿ: ಗುಟ್ಕಾ, ಪಾನ್ ಮಸಾಲಕ್ಕೆ ತಾತ್ಕಾಲಿಕ ನಿಷೇಧ]
ಇಂದಿನಿಂದ ದಿನೈದು ದಿನಗಳ ಕಾಲ ಅಂದರೆ ಏಪ್ರಿಲ್ 30 ರವರೆಗೆ ಬೆಳಗ್ಗೆ 8ರಿಂದ ರಾತ್ರಿ 8ರ ತನಕ ಬೆಸ-ಸಮ ವಾಹನ ಸಂಚಾರ ನಿಯಮ ಜಾರಿಯಲ್ಲಿರುತ್ತದೆ. ಇದನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನರಲ್ಲಿ ಮನವಿ ಮಾಡಿಕೊಂಡಿದ್ದರು. ಕೇಜ್ರಿವಾಲ್ ಸುದ್ದಿಗೋಷ್ಠಿ ವೇಳೆ ಶೂ ಎಸೆದ ಪ್ರಕರಣ ಸಹ ನಡೆದಿತ್ತು.
ಪ್ರತಿಭಟನೆ ಇಲ್ಲ
ಸಮ-ಬೆಸ ಪದ್ಧತಿಯನ್ನು ವಿರೋಧಿಸಿ ದೆಹಲಿಯ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಪ್ರತಿಭಟನೆಗೆ ಮುಂದಾಗಿತ್ತು. ಆದರೆ ಶುಕ್ರವಾರ ಹೇಳಿಕೆ ನೀಡಿರುವ ಸಂಘಟನೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.
ಜನವರಿಯಲ್ಲಿ ಜಾರಿ ಮಾಡಲಾಗಿತ್ತು
ಅರವಿಂದ್ ಕೇಜ್ರಿವಾಲ್ ಸರ್ಕಾರ ಜನವರಿ ತಿಂಗಳಲ್ಲಿ ಸಮ-ಬೆಸ ಪದ್ಧತಿಯಯನ್ನು ಜಾರಿ ಮಾಡಿತ್ತು. ಈ ವೇಳೆ ಜನರಿಂದ ಪರ-ವಿರೋಧದ ಅಭಿಪ್ರಾಯಗಳು ಕೇಳಿ ಬಂದಿದ್ದವು.
ನಮಗೆ ತೃಪ್ತಿಇದೆ
ಸಮ-ಬೆಸ ಪದ್ಧತಿ ಪರಿಣಾಮ ಮಾಲಿನ್ಯ ನಿಯಂತ್ರಣ ಸಾಧ್ಯವಿದೆ. ಈ ಬಾರಿಯೂ ಸಹ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ವಿಶ್ವಾಸವನ್ನು ದೆಹಲಿ ಸಾರಿಗೆ ಸಚಿವ ಗೋಪಾಲ್ ರಾಯ್ ವ್ಯಕ್ತಪಡಿಸಿದ್ದಾರೆ.
ತೂರಿ ಬಂದ ಚಪ್ಪಲಿ
ಅರವಿಂದ ಕೇಜ್ರಿವಾಲ್ ಸಮ-ಬೆಸ ಪದ್ಧತಿ ಜಾರಿಗೆ ಸಂಬಂಧಿಸಿ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ವೇದಪ್ರಕಾಶ್ ಎಂಬಾತ ಶೂ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದ.