ಬದುಕಿದ್ದಾರೋ, ಇಲ್ಲವೋ ಮೊದಲು ಅವರನ್ನು ಹೊರತನ್ನಿ! ಸುಪ್ರೀಂ ಖಡಕ್ ಆದೇಶ
ನವದೆಹಲಿ, ಜನವರಿ 03: ಮೇಘಾಲಯದ ಕಲ್ಲಿದ್ದಲು ಗಣಿಯೊಂದರಲ್ಲಿ ಸಿಲುಕಿಕೊಂಡ, ಮೂರು ವಾರವಾದರೂ ಪತ್ತೆಯಾಗದ 15 ಕಾರ್ಮಿಕರ ಬಗ್ಗೆ ಸುಪ್ರೀಂ ಕೋರ್ಟ್ ಸಂತಾಪ ವ್ಯಕ್ತಪಡಿಸಿದ್ದು, ಅವರ ರಕ್ಷಣೆಯ ಬಗ್ಗೆ ಮೇಘಾಲಯ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.
"ಅವರು ಬದುಕಿದ್ದಾರೋ, ಇಲ್ಲವೋ ಗೊತ್ತಿಲ್ಲ. ಏನಾದರಾಗಲಿ, ಮೊದಲು ಅವರನ್ನು ಹೊರತರುವ ಕೆಲಸ ಮಾಡಿ. ಅವರು ಬದುಕಿರಲಿ ಎಂದು ನಾವು ದೇವರಲ್ಲಿ ಬೇಡುತ್ತೇವೆ" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯಲ್ಲಿ ಡಿ.12 ರಂದು 15 ಕಾರ್ಮಿಕರು ಗಣಿಯೊಳಗೆ ಸಿಲುಕಿ ನಂತರ ನಾಪತ್ತೆಯಾಗಿದ್ದರು. 370 ಅಡಿ ಆಳದ ಗಣಿಯಲ್ಲಿ ಸಿಲುಕಿರುವ ಕಾರ್ಮಿಕರ ಪತ್ತೆಗೆ ಇದುವರೆಗೂ ಸಾಧ್ಯವಿರುವ ಎಲ್ಲಾ ಪ್ರಯತ್ನ ಮಾಡಲಾಗಿದ್ದರೂ, ಅವರ ಕುರುಹು ಸಿಕ್ಕಿಲ್ಲ. ರಕ್ಷಣಾ ಸಿಬ್ಬಂದಿಗಳಿಗೆ ಮೂರು ಹೆಲ್ಮೇಟ್ ಗಳು ಸಿಕ್ಕಿದ್ದು ಬಿಟ್ಟರೆ ಯಾವ ಸುಳಿವೂ ಸಿಕ್ಕಿಲ್ಲ. ನೌಕಾಪಡೆಯ ಅನುಭವಿ ಮುಳುಗುತಜ್ಞರು ಸಹ ಈ ಗಣಿಯ ಆಳ ತಲುಪಿ ಶೋಧ ನಡೆಸಿದ್ದಾರೆ. ಗಣಿಯಲ್ಲಿ ನೀರು ತುಂಬಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು.

ಆದರೆ ಇದುವರೆಗೂ ಕಾರ್ಮಿಕರ ಪತ್ತೆಯಾಗದಿರುವುದು ಆತಂಕ ಮೂಡಿಸಿದ್ದು, ಸುಪ್ರೀಂ ಕೋರ್ಟಿನ ಖಡಕ್ ಆದೇಶದಿಂದ ಮೇಘಾಲಯ ಸರ್ಕಾರಕ್ಕೆ ತೀವ್ರ ಮುಖಭಂಗವಾದಂತಾಗಿದ್ದು, ಕಾರ್ಮಿಕರನ್ನು ಪತ್ತೆಹಚ್ಚುವುದಕ್ಕೆ ಮತ್ತಷ್ಟು ಒತ್ತಡ ಸೃಷ್ಟಿಯಾಗಿದೆ.












Click it and Unblock the Notifications