ದ್ವೇಷ ಮರೆತ ದೀದಿ: ಪ್ರಧಾನಿ ಮೋದಿಗೆ ಕುರ್ತಾ ಉಡುಗೊರೆ

ನವದೆಹಲಿ, ಸೆಪ್ಟೆಂಬರ್ 18: ನಿರಂತರವಾಗಿ ಪರಸ್ಪರ ವಾಗ್ದಾಳಿಗಳನ್ನು ನಡೆಸುವ ಮೂಲಕ ಸುದ್ದಿಯಾಗುತ್ತಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಬುಧವಾರ ನಗುನಗುತ್ತಾ ಎದುರಾದರು. ಸುದೀರ್ಘ ಸಮಯ ಮಾತುಕತೆ ನಡೆಸಿದರು. ವಾಡಿಕೆಯಂತೆ ದೀದಿ ಅವರು ಮೋದಿ ಅವರಿಗೆ ಕುರ್ತಾವನ್ನು ಉಡುಗೊರೆಯನ್ನಾಗಿ ನೀಡಿದರು. ಜತೆಗೆ ಬಂಗಾಳದ ಸಿಹಿಯನ್ನು ಕೂಡ ಕೊಟ್ಟು ದ್ವೇಷ ಮರೆತರು.

ನವದೆಹಲಿಯ ಪ್ರಧಾನಿ ನಿವಾಸಕ್ಕೆ ತೆರಳಿದ ಮಮತಾ ಬ್ಯಾನರ್ಜಿ, ಮೋದಿ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅವರೊಂದಿಗಿನ ಮಾತುಕತೆ ತೃಪ್ತಿದಾಯಕವಾಗಿತ್ತು ಮತ್ತು ಫಲಪ್ರದವಾಗಿತ್ತು ಎಂದು ತಿಳಿಸಿದರು.

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಎರಡನೆಯ ಬಾರಿ ಅಧಿಕಾರಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದರು. ಮೋದಿ ಅವರ ಜನ್ಮದಿನಕ್ಕೆ ಮಮತಾ ಬ್ಯಾನರ್ಜಿ ಶುಭ ಹಾರೈಸಿದ್ದರು. ಸದಾ ಮೋದಿ ವಿರುದ್ಧ ಕಿಡಿಕಾರುತ್ತಿದ್ದ ಮಮತಾ ಅವರಲ್ಲಿನ ಈ ಬದಲಾವಣೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಒಳಗಾಗಿದೆ.

ಬಂಗಾಳಕ್ಕೆ ಬರಲು ಮೋದಿಗೆ ಆಹ್ವಾನ

ಬಂಗಾಳಕ್ಕೆ ಬರಲು ಮೋದಿಗೆ ಆಹ್ವಾನ

ಇದೇ ಸಂದರ್ಭದಲ್ಲಿ ಮಮತಾ, ಪಶ್ಚಿಮ ಬಂಗಾಳದ ಬಿರ್ಭುಮ್‌ನಲ್ಲಿ ಸ್ಥಾಪಿಸಲಾಗಿರುವ ಕಲ್ಲಿದ್ದಲು ಫೀಲ್ಡ್ ಪ್ರಾಜೆಕ್ಟ್‌ಗೆ ಚಾಲನೆ ನೀಡಲು ಆಗಮಿಸುವಂತೆ ಮೋದಿ ಅವರಿಗೆ ಆಹ್ವಾನ ನೀಡಿದರು. 'ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗುತ್ತಿರುವ ಜಗತ್ತಿನ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಬ್ಲಾಕ್‌ಅನ್ನು ಉದ್ಘಾಟಿಸಲು ಆಗಮಿಸುವಂತೆ ಮೋದಿ ಅವರಿಗೆ ಮನವಿ ಮಾಡಿದ್ದೇನೆ' ಎಂದು ಹೇಳಿದರು.

ಪಶ್ಚಿಮ ಬಂಗಾಳ ಹೆಸರು ಬದಲಿಸಲು ಮನವಿ

ಪಶ್ಚಿಮ ಬಂಗಾಳ ಹೆಸರು ಬದಲಿಸಲು ಮನವಿ

ಭೇಟಿಯ ವೇಳೆ ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಿಸುವ ಪ್ರಸ್ತಾಪವನ್ನು ಇರಿಸಿದ್ದಾಗಿ ತಿಳಿಸಿದರು. ಜತೆಗೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಸಂಗತಿಗಳ ಕುರಿತು ಕೂಡ ಚರ್ಚಿಸಿದರು. 'ಇದು ಕೇವಲ ಮುಖಾಮುಖಿ ಸಭೆಯಷ್ಟೇ. ಇದು ರಾಜಕೀಯೇತರ ಭೇಟಿಯಾಗಿತ್ತು. ಒಂದು ವೇಳೆ ಅಮಿತ್ ಶಾ ಅವರು ನನಗೆ ಸಮಯ ನೀಡಿದರೆ ನಾಳೆ ಅವರನ್ನ ಕೂಡ ಕೃತಜ್ಞತಾಪೂರ್ವಕವಾಗಿ ಭೇಟಿಯಾಗಲು ಬಯಸಿದ್ದೇನೆ' ಎಂದು ದೀದಿ ತಿಳಿಸಿದರು.

ರಾಜಕೀಯ ಚರ್ಚೆ ನಡೆಸಿಲ್ಲ

ರಾಜಕೀಯ ಚರ್ಚೆ ನಡೆಸಿಲ್ಲ

'ಮೋದಿ ಅವರೊಂದಿಗೆ ಎನ್‌ಆರ್‌ಸಿ ಕುರಿತು ಯಾವುದೇ ಚರ್ಚೆ ನಡೆಸಲಿಲ್ಲ. ಬಿಜೆಪಿಯವರು ತಮಗೆ ಬೇಕಾದಾಗೆಲ್ಲ ರಾಜಕೀಯ ಹೇಳಿಕೆಗಳನ್ನು ನೀಡುತ್ತಾರೆ. ಪ್ರಧಾನಿ ಮೋದಿ ಅವರೊಂದಿಗಿನ ಭೇಟಿ ರಾಜಕೀಯಕ್ಕೆ ಸಂಬಂಧಿಸಿರಲಿಲ್ಲ' ಎಂದರು. ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅವರ ಆಪ್ತ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಕುರಿತಾದ ಪ್ರಶ್ನೆಗೆ ಉತ್ತರಿಸಲು ಅವರು ಮುಂದಾಗಲಿಲ್ಲ. 'ಇಂತಹ ತಲೆಹರಟೆಯ ಪ್ರಶ್ನೆಗಳನ್ನು ನನಗೆ ಕೇಳಬೇಡಿ. ಇದರ ಬಗ್ಗೆಯಲ್ಲ ಮೋದಿ ಅವರೊಂದಿಗೆ ಮಾತನಾಡಿಲ್ಲ' ಎಂದು ಹೇಳಿದರು.

ಜಶೋದಾ ಬೆನ್‌ಗೆ ಸೀರೆ ಉಡುಗೊರೆ

ಜಶೋದಾ ಬೆನ್‌ಗೆ ಸೀರೆ ಉಡುಗೊರೆ

ಮೋದಿ ಅವರ ಭೇಟಿಗೂ ಮೊದಲು ಅವರ ಪತ್ನಿ ಜಶೋದಾ ಬೆನ್ ಅವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ, ಅವರಿಗೆ ಸೀರೆಯೊಂದನ್ನು ಕಾಣಿಕೆಯಾಗಿ ನೀಡಿದರು. ಕೋಲ್ಕತಾದಲ್ಲಿ ಕಲ್ಯಾಣೇಶ್ವರಿ ದೇವಸ್ಥಾನಕ್ಕೆ ತಮ್ಮ ಸಹೋದರ ಮತ್ತು ಅವರ ಪತ್ನಿಯೊಂದಿಗೆ ತೆರಳಿದ್ದ ಜಶೋದಾಬೆನ್ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಮಮತಾ ಬ್ಯಾನರ್ಜಿ, ಅವರ ಯೋಗಕ್ಷೇಮ ವಿಚಾರಿಸಿದರು. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದ ಮಮತಾ, ಪತ್ನಿಯನ್ನು ತ್ಯಜಿಸಿದ ಮೋದಿ ಅವರು ಜಶೋದಾಬೆನ್ ಅವರ ದುರವಸ್ಥೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದರು.

ಕಲ್ಲುಮಣ್ಣಿನ ರಸಗುಲ್ಲಾ ಕೊಡ್ತೀನಿ

ಕಲ್ಲುಮಣ್ಣಿನ ರಸಗುಲ್ಲಾ ಕೊಡ್ತೀನಿ

ಮಮತಾ ಬ್ಯಾನರ್ಜಿ ಅವರು ತಮಗೆ ಪ್ರತಿ ವರ್ಷ ಕುರ್ತಾ ಮತ್ತು ಬಂಗಾಳಿ ಸಿಹಿಯನ್ನು ಕಳುಹಿಸುತ್ತಾರೆ ಎಂದು ಮೋದಿ ಅವರು ನಟ ಅಕ್ಷಯ್ ಕುಮಾರ್ ನಡೆಸಿದ್ದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಅದಕ್ಕೆ ವ್ಯಂಗ್ಯದ ಪ್ರತಿಕ್ರಿಯೆ ನೀಡಿದ್ದ ಮಮತಾ, 'ಮೋದಿ ಅವರಿಗೆ ಮಣ್ಣು ಮತ್ತು ಕಲ್ಲಿನಿಂದ ಮಾಡಿ ರಸಗುಲ್ಲಾ ಕಳಿಸುತ್ತೇನೆ. ಅದನ್ನು ತಿಂದು ಅವರ ಹಲ್ಲು ಮುರಿಯಲಿ' ಎಂದು ಹೇಳಿದ್ದರು. ನೀತಿ ಆಯೋಗದ ಸಭೆಗೆ ಗೈರಾಗಿದ್ದ ವೇಳೆ ಕೂಡ ಹರಿಹಾಯ್ದಿದ್ದ ಅವರು, 'ಮೋದಿ ಅವರೊಂದಿಗೆ ಮಾತನಾಡಲು ಇಷ್ಟವಿಲ್ಲ' ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+