ಈ ಒಂದು ವಿಷಯ ಇಡೀ ದೇಶದ ಭಾವನೆಯನ್ನೇ ಬದಲಾಯಿಸಿದೆ; ಜೈಶಂಕರ್
ನವದೆಹಲಿ, ಡಿಸೆಂಬರ್ 09: ಗಡಿ ವಿಷಯದಲ್ಲಿ ಚೀನಾ ಪದೇ ಪದೇ ತನ್ನ ಒಪ್ಪಂದವನ್ನು ಉಲ್ಲಂಘಿಸುತ್ತಿದೆ. ಈ ಒಂದು ಬೆಳವಣಿಗೆಯಿಂದ ಭಾರತ-ಚೀನಾ ನಡುವಿನ ಸಂಬಂಧ ಮತ್ತಷ್ಟು ಹದಗೆಡಲಿದೆ ಎಂದು ಹೇಳಿದ್ದಾರೆ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್.
ಲೋವಿ ಇನ್ ಸ್ಟಿಟ್ಯೂಟ್ ನಲ್ಲಿ ಚೀನಾ ಗಡಿ ವಿವಾದದ ಕುರಿತು ಪ್ರಸ್ತಾಪಿಸಿದ ಜೈಶಂಕರ್, ಗಡಿಯಲ್ಲಿನ ಬೆಳವಣಿಗೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಡಿಯಲ್ಲಿ ಶಾಂತಿ ಕಾಪಾಡಿಕೊಳ್ಳಲು ಚೀನಾ-ಭಾರತದ ನಡುವೆ ಹಲವು ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಗಡಿ ನಿಯಂತ್ರಣ ರೇಖೆಯಲ್ಲಿ ಹೆಚ್ಚಿನ ಸೇನೆ ನಿಯೋಜಿಸಬಾರದು ಎಂಬ ಷರತ್ತಿನ ನಡುವೆಯೂ ಚೀನಾ ತನ್ನ ಗಡಿಯಲ್ಲಿ ಸಾವಿರಾರು ಸೈನಿಕರನ್ನು ನಿಯೋಜಿಸಿ ಒಪ್ಪಂದಗಳನ್ನು ಮುರಿಯುತ್ತಿದೆ ಎಂದು ದೂರಿದರು.
ಪ್ರತಿ ಬಾರಿಯೂ ತನ್ನ ನಡೆಗೆ ಬೇರೆ ಬೇರೆ ಕಾರಣಗಳನ್ನು ಚೀನಾ ನೀಡುತ್ತದೆ. ಆದರೆ ಇಂಥ ಸಂಗತಿಗಳಿಂದ ಚೀನಾ-ಭಾರತ ಸಂಬಂಧ ಇನ್ನಷ್ಟು ಹದಗೆಡುತ್ತದೆ. ಇಂಥ ಕಾರಣಗಳಿಗಾಗಿಯೇ ಎರಡೂ ರಾಷ್ಟ್ರಗಳ ನಡುವಿನ ಸಂಬಂಧ ಹಾಳಾಗುತ್ತಿದೆ. ಈ ಒಂದು ಸಂಬಂಧವನ್ನು ಮತ್ತೆ ಮೊದಲಿನ ಹಾದಿಗೆ ತರುವುದೇ ದೊಡ್ಡ ವಿಷಯವಾಗಿದೆ ಎಂದರು.

1975ರಿಂದ ಇದೇ ಮೊದಲ ಬಾರಿಗೆ ಗಡಿಯಲ್ಲಿ ಈ ರೀತಿಯಾಗಿದೆ. ಭಾರತ ತನ್ನ 20 ಯೋಧರನ್ನು ಕಳೆದುಕೊಂಡಿದೆ. ಈ ಒಂದು ವಿಷಯ ದೇಶದ ಭಾವನೆಯನ್ನೇ ಬದಲಾಯಿಸಿದೆ. ಹಲವು ಭಿನ್ನತೆಗಳ ನಡುವೆಯೂ ಚೀನಾ ಹಾಗೂ ಭಾರತ ಶಾಂತಿ ಸೌಹಾರ್ದವನ್ನು ಕಾಪಾಡಿಕೊಂಡಿತ್ತು. ಮೂರು ದಶಕಗಳ ಕಾಲ ಕೆಲವು ಭಿನ್ನಾಭಿಪ್ರಾಯಗಳ ಹೊರತಾಗಿಯೂ ಉತ್ತಮ ಸಂಬಂಧವಿತ್ತು. ಆದರೆ ಇದೀಗ ಗಡಿ ವಿಷಯವಾಗಿ ಎರಡೂ ರಾಷ್ಟ್ರಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications