ಮೋದಿಗೆ ಕ್ಲೀನ್ಚಿಟ್: ಬೇಕಾದರೆ ಅರ್ಜಿ ಹಾಕಿ ಎಂದ ಸುಪ್ರೀಂಕೋರ್ಟ್
ನವದೆಹಲಿ, ಮೇ 8: ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿರುವ ಅರ್ಜಿಯ ಕುರಿತು ಯಾವುದೇ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದೆ ಸುಷ್ಮಿತಾ ದೇವ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂಕೋರ್ಟ್, ಅಗತ್ಯವಿದ್ದರೆ ಅವರು ಹೊಸದಾಗಿ ಅರ್ಜಿ ಸಲ್ಲಿಸುವ ಮೂಲಕ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಬಹುದು ಎಂದಿತು.
ಮೋದಿ ಮತ್ತೆ ನಿರಾಳ: ಎರಡು ಪ್ರಕರಣಗಳಲ್ಲಿ ಕ್ಲೀನ್ ಚಿಟ್
'ಕಾಂಗ್ರೆಸ್ ಪಕ್ಷವು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ವಿರುದ್ಧ ಸಲ್ಲಿಸಿದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ಚುನಾವಣಾ ಆಯೋಗ ನಿರ್ಧರಿಸಿದೆ. ಈ ಕ್ರಮಗಳನ್ನು ಬೇಕಾದರೆ ಆಕ್ಷೇಪಣೆಗಾಗಿ ಚುನಾವಣಾ ಅರ್ಜಿ ಸಲ್ಲಿಸುವ ಮೂಲಕ ಪ್ರಶ್ನಿಸಬಹುದು. ಈ ಅರ್ಜಿಯಲ್ಲಿ ಚುನಾವಣಾ ಆಯೋಗದ ಆದೇಶದ ಕುರಿತು ಮುಂದುವರಿಯಲು ಸಾಧ್ಯವಿಲ್ಲ. ಸರಿಯೋ ಅಥವಾ ತಪ್ಪೋ, ಆದೇಶ ನೀಡಲಾಗಿದೆ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ' ಎಂದು ನ್ಯಾಯಪೀಠವು ಸುಷ್ಮಿತಾ ಅವರ ಅರ್ಜಿಯನ್ನು ವಜಾಗೊಳಿಸಿತು.
ಚುನಾವಣಾ ಅರ್ಜಿಯು ಸಂಸತ್ ಅಥವಾ ಸ್ಥಳೀಯ ಸರ್ಕಾರಗಳ ಚುನಾವಣೆಗಳ ಫಲಿತಾಂಶದ ಮಾನ್ಯತೆಯ ಕುರಿತು ವಿಚಾರಣೆ ನಡೆಸುವ ಪ್ರಕ್ರಿಯೆಯಾಗಿದೆ. ಸಂಸತ್, ವಿಧಾನಸಭೆ ಅಥವಾ ಸ್ಥಳೀಯ ಚುನಾವಣೆಯ ಅಭ್ಯರ್ಥಿಯೊಬ್ಬರ ಆಯ್ಕೆಯನ್ನು ಕಾನೂನಿನ ಅಡಿಯಲ್ಲಿ ಪ್ರಶ್ನಿಸಬಹುದಾಗಿದೆ.
ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದ ವ್ಯಕ್ತಿ
ಮೋದಿ ಮತ್ತು ಅಮಿತ್ ಶಾ ಅವರಿಗೆ ಕ್ಲೀನ್ ಚಿಟ್ ನೀಡಿದ ಚುನಾವಣಾ ಆಯೋಗದ ಆದೇಶಗಳ ದಾಖಲೆಯನ್ನು ತರುವಂತೆ ಸುಷ್ಮಿತಾ ದೇವ್ ಅವರಿಗೆ ಸುಪ್ರೀಂಕೋರ್ಟ್ ಸೋಮವಾರ ಸೂಚಿಸಿತ್ತು. ಬಿಜೆಪಿಯ ಇಬ್ಬರು ನಾಯಕರು ದ್ವೇಷ ಭಾಷಣ ಮತ್ತು ರಾಜಕೀಯ ಪ್ರಚಾರಕ್ಕಾಗಿ ಸೇನೆಯ ಹೆಸರು ಬಳಸಿಕೊಳ್ಳುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ನೀಡಲಾಗಿದ್ದ ದೂರಿಗೆ ಚುನಾವಣಾ ಆಯೋಗ ಸೂಕ್ತ ಕ್ರಮ ತೆಗೆದುಕೊಂಡಿಲ್ಲ ಎಂದು ದೇವ್ ಆರೋಪಿಸಿದ್ದರು.