ವಾಹನಗಳ ಮಾಡಿಫಿಕೇಷನ್: ಬೈಕ್, ಕಾರು ಪ್ರೇಮಿಗಳು ಫುಲ್ ಖುಷ್, ಕೇರಳದಲ್ಲಿ ಏನಿದು ಹೊಸ ರೂಲ್ಸ್?
ತಿರುವನಂತಪುರಂ: ಕೇರಳದಲ್ಲಿ ಇತ್ತೀಚೆಗೆ ನಡೆದ ರಾಜಕೀಯ ಬದಲಾವಣೆಗಳ ನಡುವೆ, ಅಲ್ಲಿನ ನೂತನ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರ ಅಧಿಕೃತ ಪತ್ರಿಕಾಗೋಷ್ಠಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಹಿರಿಯ ನಾಗರಿಕರಿಗೆ ಹೊಸ ಇಲಾಖೆಯಂತಹ ದೊಡ್ಡ ಜನಪ್ರಿಯ ಘೋಷಣೆಗಳ ಮಧ್ಯೆ, ವಾಹನ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿಸುವ ನಿರ್ಧಾರವೊಂದನ್ನು ಸಿಎಂ ಪ್ರಕಟಿಸಿದ್ದಾರೆ. ಈ ಕುರಿತ ಕುತೂಹಲಕಾರಿ ವರದಿ ಇಲ್ಲಿದೆ
ಕೇರಳದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ವಿ.ಡಿ. ಸತೀಶನ್ ನಡೆಸಿದ ಮೊದಲ ಸಂಪುಟ ಸಭೆಯ ನಂತರದ ಪತ್ರಿಕಾಗೋಷ್ಠಿ ಈಗ ದೇಶಾದ್ಯಂತ ಸಖತ್ ಸದ್ದು ಮಾಡುತ್ತಿದೆ. ಮಾಧ್ಯಮ ಪ್ರತಿನಿಧಿಯೊಬ್ಬರು "ರಾಜ್ಯದಲ್ಲಿ ವಾಹನಗಳ ಆಲ್ಟರೇಶನ್ ಅಥವಾ ಮಾಡಿಫಿಕೇಶನ್ಗೆ (Vehicle Modification) ಅವಕಾಶ ನೀಡಲಾಗುತ್ತದೆಯೇ?" ಎಂದು ಕೇಳಿದ ತಕ್ಷಣ, ಸಿಎಂ ಸತೀಶನ್ ಮುಗುಳ್ನಗುತ್ತಾ ತಲೆಯಾಡಿಸಿದ ರೀತಿ ಯುವಕರಿಗೆ ಸಿಹಿಸುದ್ದಿ ನೀಡುವಂತಿದೆ. "ನಾವು ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಕಾನೂನುಬದ್ಧಗೊಳಿಸುವುದಾಗಿ ಭರವಸೆ ನೀಡಿದ್ದೆವು. ಇದು ರಾಜ್ಯದ ಸಾವಿರಾರು ಯುವಕರ ಬೇಡಿಕೆಯಾಗಿದೆ, ನಾವು ಖಂಡಿತವಾಗಿಯೂ ಇದನ್ನು ಜಾರಿಗೆ ತರುತ್ತೇವೆ" ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.

ಯುಡಿಎಫ್ ಪ್ರಣಾಳಿಕೆಯಲ್ಲೇ ಇತ್ತು ಭರವಸೆ
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ವಿ.ಡಿ. ಸತೀಶನ್ ಅವರು ವಾಹನ ಪ್ರೇಮಿಗಳ ಹಿತಾಸಕ್ತಿಯನ್ನು ಗುರುತಿಸಿ, ಕೇವಲ ಹವ್ಯಾಸಕ್ಕಾಗಿ ವಾಹನಗಳನ್ನು ಮಾರ್ಪಾಡು ಮಾಡುವುದನ್ನು 'ಅಪರಾಧ'ದಂತೆ ನೋಡುವುದು ಸರಿಯಲ್ಲ ಎಂದು ವಾದಿಸಿದ್ದರು. ಯುಡಿಎಫ್ ಒಕ್ಕೂಟದ ಅಧಿಕೃತ ಪ್ರಣಾಳಿಕೆಯಲ್ಲೂ ಸಹ, "ರಸ್ತೆ ಸುರಕ್ಷತೆ, ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯದ ನಿಯಮಗಳನ್ನು ಉಲ್ಲಂಘಿಸದ ಹಾಗೂ ಸುರಕ್ಷತೆಗೆ ಧಕ್ಕೆ ತರದ ರೀತಿಯಲ್ಲಿ 'ಸುರಕ್ಷಿತ ವಾಹನ ಮಾರ್ಪಾಡು'ಗಳಿಗೆ ಕಾನೂನುಬದ್ಧ ಅವಕಾಶ ನೀಡಲಾಗುವುದು" ಎಂದು ಭರವಸೆ ನೀಡಲಾಗಿತ್ತು.
Kerala CM is pookie 😎, this is madness trending on Instagram.
— Derek Kandur (@derekkandur) May 18, 2026
Congratulations CM, wishing you and all the minister goodness for Kerala and it's growth that North India should learn or die with jealousy. pic.twitter.com/Y33hS7EoiY
ಯಾವುದಕ್ಕೆ ಎಷ್ಟು ದಂಡ?
ಈ ಹೊಸ ನಿರ್ಧಾರವು ಕೇರಳದಲ್ಲಿ ತಲ್ಲಣ ಸೃಷ್ಟಿಸಲು ಒಂದು ಮುಖ್ಯ ಹಿನ್ನೆಲೆಯಿದೆ. ಈ ಹಿಂದಿನ ಎಲ್ಡಿಎಫ್ (LDF) ಸರ್ಕಾರದ ಅವಧಿಯಲ್ಲಿ ಕೇರಳ ಮೋಟಾರು ವಾಹನ ಇಲಾಖೆಯು ಮಾಡಿಫೈಡ್ ವಾಹನಗಳ ವಿರುದ್ಧ ಅತ್ಯಂತ ಕಠಿಣವಾದ ಕಾರ್ಯಾಚರಣೆ ನಡೆಸಿತ್ತು. ಬೈಕ್ ಅಥವಾ ಕಾರುಗಳಿಗೆ ಸಣ್ಣಪುಟ್ಟ ಹೆಚ್ಚುವರಿ ಲೈಟ್ಗಳು ಅಥವಾ ಹಾರ್ನ್ಗಳನ್ನು ಹಾಕಿದರೂ ಕನಿಷ್ಠ ₹5,000 ದಂಡ, ಸೈಲೆನ್ಸರ್ ಬದಲಾಯಿಸಿ ಕರ್ಕಶ ಶಬ್ದ ಮಾಡುವ ವಾಹನಗಳಿಗೆ ₹10,000ವರೆಗೆ ಭಾರಿ ದಂಡ ವಿಧಿಸಲಾಗುತ್ತಿತ್ತು. ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 52ರ ಅಡಿಯಲ್ಲಿ, ಎರಡನೇ ಬಾರಿ ಸಿಕ್ಕಿಬಿದ್ದರೆ ದಂಡದ ಮೊತ್ತ ದುಪ್ಪಟ್ಟಾಗುತ್ತಿತ್ತು ಹಾಗೂ ವಾಹನದ ಆರ್ಸಿ (RC) ಅಮಾನತು ಮಾಡಿ, ವಾಹನವನ್ನೇ ಜಪ್ತಿ ಮಾಡಿಕೊಳ್ಳಲಾಗುತ್ತಿತ್ತು. ಅಕ್ರಮ ಮಾರ್ಪಾಡು ಹೊಂದಿದ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ನೀಡದಂತೆ ಕೇರಳ ಹೈಕೋರ್ಟ್ ಕೂಡ ಕಡಕ್ ಆದೇಶ ನೀಡಿತ್ತು.
ಕೇಂದ್ರದ ಕಾನೂನು ಮತ್ತು ಸುಪ್ರೀಂ ಕೋರ್ಟ್ ತೀರ್ಪು ಏನು ಹೇಳುತ್ತದೆ?
ಹಿಂದಿನ ಸರ್ಕಾರದ ಸಾರಿಗೆ ಸಚಿವರಾಗಿದ್ದ ಕೆ.ಬಿ.ಗಣೇಶ್ ಕುಮಾರ್ ಅವರು ಸತೀಶನ್ ಅವರ ಈ ಭರವಸೆಯನ್ನು ಲೇವಡಿ ಮಾಡಿದ್ದರು. ವಾಹನ ನಿಯಮಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ರಾಜ್ಯ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎಂದು ಅವರು ವಾದಿಸಿದ್ದರು. ಮೋಟಾರು ವಾಹನ ಕಾಯ್ದೆ (1988) ಸೆಕ್ಷನ್ 52ರ ಪ್ರಕಾರ, ವಾಹನ ತಯಾರಕರು ನೀಡಿದ ಮೂಲ ವಿನ್ಯಾಸ ಹಾಗೂ ಆರ್ಸಿ ಬುಕ್ನಲ್ಲಿರುವ ವಿವರಗಳಿಗೆ ಭಿನ್ನವಾಗಿ ವಾಹನದ ಮೂಲ ರಚನೆಯನ್ನು ಬದಲಾಯಿಸುವಂತಿಲ್ಲ.
ಯಾವುದಕ್ಕೆ ಅವಕಾಶವಿದೆ?
ವಾಹನದ ಮೂಲ ಅಸ್ತಿತ್ವಕ್ಕೆ ಧಕ್ಕೆ ತರದ ಸಣ್ಣಪುಟ್ಟ ಕಾಸ್ಮೆಟಿಕ್ ಬದಲಾವಣೆಗಳು, ಇಷ್ಟದ ಬಣ್ಣ ಬಳಿಯುವುದು ಅಥವಾ ಆರ್ಟಿಒ ಅನುಮತಿ ಪಡೆದು ಇಂಧನ ವ್ಯವಸ್ಥೆಯನ್ನು (CNG/Battery) ಬದಲಾಯಿಸಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. 2019ರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪಿನ ಪ್ರಕಾರ, ವಾಹನದ ಚಾಸಿಸ್, ಎಂಜಿನ್ ಅಥವಾ ಬಾಡಿಯ ಮೂಲ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸುವ 'ಸ್ಟ್ರಕ್ಚರಲ್ ಮಾಡಿಫಿಕೇಶನ್'ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಕೇಂದ್ರದ ಕಠಿಣ ಕಾನೂನುಗಳು ಮತ್ತು ಸುಪ್ರೀಂಕೋರ್ಟ್ನ ಮಾರ್ಗಸೂಚಿಗಳು ಚಾಲ್ತಿಯಲ್ಲಿರುವಾಗ ನೂತನ ಮುಖ್ಯಮಂತ್ರಿ ವಿ.ಡಿ.ಸತೀಶನ್ ಅವರು ಕೇಂದ್ರ ನಿಯಮಗಳ ಚೌಕಟ್ಟಿನಲ್ಲೇ ವಾಹನ ಪ್ರೇಮಿಗಳಿಗೆ ಹೇಗೆ ವಿನಾಯಿತಿ ಮತ್ತು 'ಸುರಕ್ಷಿತ ಮಾಡಿಫಿಕೇಶನ್'ಗೆ ಹೊಸ ನಿಯಮಾವಳಿಗಳನ್ನು ರೂಪಿಸಲಿದ್ದಾರೆ ಎಂಬುದು ಇಡೀ ದೇಶದ ಸಾರಿಗೆ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿದೆ.













Click it and Unblock the Notifications