ಅಂದು ಪ್ರಾಣಭಯದಿಂದ ಓಡಿಹೋಗಿದ್ದೆ: ಅಂಡರ್ವರ್ಲ್ಡ್ಗೆ ಹೆದರಿ ಚಿತ್ರರಂಗ ತೊರೆದಿದ್ದ "ಸೈನಿಕ" ನಟಿ ಸಾಕ್ಷಿ ಶಿವಾನಂದ್
"ಗಲಾಟೆ ಅಳಿಯಂದಿರು", "ಸೈನಿಕ", "ಕೋದಂಡರಾಮ", "ತಂದೆಗೆ ತಕ್ಕ ಮಗ" ಸೇರಿದಂತೆ ಕನ್ನಡದ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದ ದಕ್ಷಿಣ ಭಾರತದ ಜನಪ್ರಿಯ ನಟಿ ಸಾಕ್ಷಿ ಶಿವಾನಂದ್ ಬಾಲಿವುಡ್ನಿಂದ ದಿಢೀರ್ ನಾಪತ್ತೆಯಾದವರು. ಪ್ರಾಣಭಯದಿಂದ ತಮಗೆ ಸಿಕ್ಕ ದೊಡ್ಡ ಬಾಲಿವುಡ್ ಅವಕಾಶವನ್ನೇ ಕೈಬಿಟ್ಟು ಓಡಿ ಹೋಗಿದ್ದ ನಟಿ ಸಾಕ್ಷಿ ಅವರ ಕಥೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
80 ಮತ್ತು 90ರ ದಶಕದಲ್ಲಿ ಮುಂಬೈ ಭೂಗತ ಲೋಕದ (Mafia) ಕರಾಳ ನೆರಳು ಬಾಲಿವುಡ್ ಮೇಲೆ ಎಷ್ಟು ಗಾಢವಾಗಿ ಆವರಿಸಿತ್ತು ಎಂಬುದಕ್ಕೆ ಚಿತ್ರರಂಗದ ಅನೇಕ ನಟ-ನಟಿಯರ ಕಹಿ ಅನುಭವಗಳೇ ಸಾಕ್ಷಿ. ಆ ಸಮಯದಲ್ಲಿ ಮಾಫಿಯಾ ಜಗತ್ತಿನ ಬೆದರಿಕೆ, ಒತ್ತಡಗಳಿಗೆ ಸಿಲುಕಿ ಎಷ್ಟೋ ಪ್ರತಿಭಾವಂತರ ವೃತ್ತಿಜೀವನವೇ ನಾಶವಾಗಿ ಹೋಗಿರುವ ಮಾತಿದೆ. ಅದೇ ಸಾಲಿನಲ್ಲಿ ಸಾಕ್ಷಿ ಶಿವಾನಂದ್ ಅವರ ಹೆಸರೂ ಸೇರಿಕೊಂಡಿದೆ.

1993ರಲ್ಲಿ ತೆಲುಗಿನ 'ಅಣ್ಣ ವದಿನಾ' ಚಿತ್ರದ ಮೂಲಕ ನಟನೆ ಆರಂಭಿಸಿದ ಸಾಕ್ಷಿ ಶಿವಾನಂದ್, ನಂತರ ಬಾಲಿವುಡ್ ಕಡೆ ಮುಖ ಮಾಡಿದರು. ವಿನೋದ್ ಖನ್ನಾ ಅವರ 'ಜನ್ಮ ಕುಂಡ್ಲಿ', ಮಹೇಶ್ ಭಟ್ ಅವರ 'ಪಾಪಾ ಕೆಹತೇ ಹೈ' ಹಾಗೂ ಧರ್ಮೇಂದ್ರ ಅವರ 'ಜೀಯೋ ಶಾನ್ ಸೇ' ಸಿನಿಮಾಗಳಲ್ಲಿ ನಟಿಸಿದರೂ ಅಲ್ಲಿ ಅವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಬಳಿಕ ಅವರು ದಕ್ಷಿಣ ಭಾರತದ ಚಿತ್ರರಂಗಕ್ಕೆ ಮರಳಿ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿ ಯಶಸ್ವಿ ನಟಿಯಾಗಿ ಗುರುತಿಸಿಕೊಂಡರು. ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ ಅವರ ಕೊನೆಯ ಪ್ರಮುಖ ಸಿನಿಮಾ ಸಹ 2014ರಲ್ಲಿ ತೆರೆಕಂಡ ಕ್ರೇಜಿಸ್ಟಾರ್ ರವಿಚಂದ್ರನ್ ಅವರ 'ಪರಮಶಿವ' ಆಗಿತ್ತು.
"ನನ್ನ ಸಿನಿಮಾದ ಪ್ರೊಡ್ಯೂಸರೇ ಅಂಡರ್ವರ್ಲ್ಡ್ ಡಾನ್"
ದಕ್ಷಿಣದಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾಗ ಸಾಕ್ಷಿ ಅವರಿಗೆ ಬಾಲಿವುಡ್ನಿಂದ ಮತ್ತೊಂದು ದೊಡ್ಡ ಸೆಕೆಂಡ್ ಇನ್ನಿಂಗ್ಸ್ ಅವಕಾಶ ಸಿಕ್ಕಿತು. ಗೋವಿಂದಾ ಜೊತೆ ನಟಿಸಿದ ನಂತರ, ಅವರಿಗೆ ಸೈಫ್ ಅಲಿ ಖಾನ್ ನಾಯಕರಾಗಿದ್ದ 'ತುಮ್' (Tum) ಚಿತ್ರದಲ್ಲಿ ಮುಖ್ಯ ಪಾತ್ರದ ಆಫರ್ ಬಂದಿತ್ತು. ಈ ಸಿನಿಮಾ ಅವರ ಬಾಲಿವುಡ್ ಕೆರಿಯರ್ ಅನ್ನೇ ಬದಲಾಯಿಸಬಹುದು ಎಂಬ ನಿರೀಕ್ಷೆ ಇತ್ತು.
ಆದರೆ, ಸಿನಿಮಾ ಶೂಟಿಂಗ್ ಹಂತ ತಲುಪುವಷ್ಟರಲ್ಲಿ ಆ 'ತುಮ್' ಚಿತ್ರದ ನಿರ್ಮಾಪಕನಿಗೆ ಭೂಗತ ಲೋಕದೊಂದಿಗೆ ನೇರ ಸಂಪರ್ಕವಿದೆ ಎಂಬ ಕರಾಳ ಸತ್ಯ ಸಾಕ್ಷಿ ಅವರಿಗೆ ತಿಳಿಯಿತು. ಹಳೆಯ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದ ಸಾಕ್ಷಿ, "ಆ ಚಿತ್ರದ ಪ್ರೊಡ್ಯೂಸರ್ ಅಂಡರ್ವರ್ಲ್ಡ್ ಹಿನ್ನೆಲೆಯವನು ಎಂದು ತಿಳಿದಾಗ ನಾನು ಅಕ್ಷರಶಃ ನಡುಗಿಹೋಗಿದ್ದೆ. ಬಾಲಿವುಡ್ನಲ್ಲಿ ಮಾಫಿಯಾ ಜಗತ್ತಿನ ಹಿಡಿತ ಎಷ್ಟು ಕ್ರೂರವಾಗಿದೆ ಎಂದು ಎಲ್ಲರೂ ನನಗೆ ಹೇಳುತ್ತಿದ್ದರು. ನನಗೆ ತೀವ್ರ ಭಯವಾಗಿ, ಎಲ್ಲವನ್ನೂ ಬಿಟ್ಟು ತಕ್ಷಣವೇ ತೆಲುಗು ಮತ್ತು ಕನ್ನಡ ಸಿನಿಮಾಗಳ ಕಡೆಗೆ ಓಡಿಬಂದೆ" ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಂಬರ್ ಬದಲಾಯಿಸಿ ಎಸ್ಕೇಪ್
ಈ ಕಠಿಣ ನಿರ್ಧಾರ ಸಾಕ್ಷಿ ಅವರ ಬಾಲಿವುಡ್ ಕೆರಿಯರ್ಗೆ ಮಾರಕವಾಗಿ ಪರಿಣಮಿಸಿತು. ಅವರು ಪ್ರಾಜೆಕ್ಟ್ನಿಂದ ಹೊರಬಂದ ಮೇಲೂ ಆ ನಿರ್ಮಾಪಕ ಸಾಕ್ಷಿ ಅವರನ್ನು ಸಂಪರ್ಕಿಸಲು ನಿರಂತರವಾಗಿ ಯತ್ನಿಸುತ್ತಿದ್ದನಂತೆ. "ಅವನು ಫೋನ್ ಮಾಡಲಾರಂಭಿಸಿದಾಗ ನಾನು ನನ್ನ ಫೋನ್ ನಂಬರ್ ಅನ್ನೇ ಬದಲಾಯಿಸಬೇಕಾಯಿತು. ನಾನು ಎಲ್ಲಿಗೆ ಹೋಗಿದ್ದೇನೆ, ಎಲ್ಲಿದ್ದೇನೆ ಎಂಬುದು ಯಾರಿಗೂ ತಿಳಿಯದಂತೆ ಅನಾಮಧೇಯಳಾಗಿ ಬದುಕಿದೆ. ಆ ಒಂದೇ ಒಂದು ಘಟನೆ ನನ್ನ ಇಡೀ ಬಾಲಿವುಡ್ ಕೆರಿಯರ್ ಅನ್ನು ಕೊನೆಗಾಣಿಸಿತು. ನಾನು ಪ್ರಾಣಭಯದಿಂದ ಓಡಿಹೋಗದಿದ್ದರೆ ಇಂದು ಹಿಂದಿ ಚಿತ್ರರಂಗದಲ್ಲೇ ಮುಂದುವರಿಯುತ್ತಿದ್ದೆ" ಎಂದು ಸಾಕ್ಷಿ ಶಿವಾನಂದ್ ಹೇಳಿದ್ದಾರೆ.

ಇತರ ಸ್ಟಾರ್ಗಳಿಗೂ ಇತ್ತು ಮಾಫಿಯಾ ಕಾಟ
ಕೇವಲ ಸಾಕ್ಷಿ ಶಿವಾನಂದ್ ಮಾತ್ರವಲ್ಲ, ಆ ಕಾಲದಲ್ಲಿ ಬಾಲಿವುಡ್ನ ದೊಡ್ಡ ದೊಡ್ಡ ದಿಗ್ಗಜರು ಕೂಡ ಅಂಡರ್ವರ್ಲ್ಡ್ಗೆ ಹೆದರಿ ಬದುಕುತ್ತಿದ್ದರು ಎಂಬುದಕ್ಕೆ ಇತ್ತೀಚಿನ ಕೆಲವು ಸಂದರ್ಶನಗಳೇ ಸಾಕ್ಷಿ. ಖ್ಯಾತ ನಟ ವರುಣ್ ಧವನ್ ಇತ್ತೀಚೆಗೆ ಮಾತನಾಡಿ, ತಮ್ಮ ತಂದೆ ಹಾಗೂ ಖ್ಯಾತ ನಿರ್ದೇಶಕ ಡೇವಿಡ್ ಧವನ್ ಅವರಿಗೆ ಅಂಡರ್ವರ್ಲ್ಡ್ನಿಂದ "ಗನ್ ತಗೊಂಡು ಬರ್ತೀವಿ" ಎಂದು ಕೊಲೆ ಬೆದರಿಕೆ ಕರೆಗಳು ಬರುತ್ತಿದ್ದವು. ಆ ಸಮಯದಲ್ಲಿ ಸುರಕ್ಷತೆಗಾಗಿ ತಮ್ಮ ತಂದೆ ಬೇರೆ ಕಡೆ ತಂಗಬೇಕಾಗುತ್ತಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ನಿರ್ದೇಶಕಿ ಫರಾ ಖಾನ್ ಇತ್ತೀಚೆಗೆ ಹಂಚಿಕೊಂಡ ಮಾಹಿತಿಯಂತೆ, ಕರಣ್ ಜೋಹರ್ ತಮ್ಮ ಮೊದಲ ಸಿನಿಮಾ 'ಕುಚ್ ಕುಚ್ ಹೋತಾ ಹೈ' ಪ್ರೀಮಿಯರ್ ಶೋ ವೇಳೆಗೆ ಮಾಫಿಯಾದಿಂದ ನೇರ ಜೀವಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದರು. ಇದರಿಂದ ಭಯಭೀತರಾಗಿದ್ದ ಕರಣ್ ಶೋ ಅನ್ನೇ ರದ್ದು ಮಾಡಲು ನಿರ್ಧರಿಸಿದ್ದರು.
ಬೆಳ್ಳಿತೆರೆಯ ಮೇಲೆ ರಂಜಿಸುತ್ತಿದ್ದ ನಟ-ನಟಿಯರ ನಿಜ ಜೀವನದ ಹಿಂದೆ ಇಂತಹದ್ದೊಂದು ಭಯಾನಕ ಕತ್ತಲೆಯ ಪ್ರಪಂಚವಿತ್ತು ಎಂಬುದಕ್ಕೆ ಸಾಕ್ಷಿ ಶಿವಾನಂದ್ ಅವರ ಸಿನಿಮೀಯ ಬದುಕೇ ಒಂದು ದೊಡ್ಡ ಉದಾಹರಣೆಯಾಗಿದೆ. ಭರವಸೆಯ ನಟಿಯೊಬ್ಬರು ಪ್ರತಿಭೆಯಿದ್ದರೂ ಕೇವಲ ಸುರಕ್ಷತೆಯ ಕಾರಣಕ್ಕಾಗಿ ಚಿತ್ರರಂಗದಿಂದಲೇ ದೂರ ಸರಿಯಬೇಕಾಗಿ ಬಂದಿದ್ದು ನಿಜಕ್ಕೂ ದುರಂತ.













Click it and Unblock the Notifications