ಸಿಬಿಐ ಮೊದಲು ಅದರ ಮನೆ ಸರಿ ಮಾಡಿಕೊಳ್ಳಲಿ: ಸುಪ್ರೀಂಕೋರ್ಟ್
ನವದೆಹಲಿ, ಅಕ್ಟೋಬರ್ 31: ಕೇಂದ್ರ ಸರ್ಕಾರದ ಆಕ್ಷೇಪದ ನಡುವೆಯೂ, ರಫೇಲ್ ಒಪ್ಪಂದದ ವೆಚ್ಚ, ದರ ಮತ್ತು ತಾಂತ್ರಿಕ ಮಾಹಿತಿಗಳ ವಿವರಗಳನ್ನು ನೀಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಬುಧವಾರ ನಡೆದ ವಿಚಾರಣೆ ವೇಳೆ ಅರ್ಜಿದಾರ ವಕೀಲ ಪ್ರಶಾಂತ್ ಭೂಷಣ್ ಈ ವಿವಾದದಲ್ಲಿ ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸಿದರು. ಆಗ ತಕ್ಷಣ ಪ್ರತಿಕ್ರಿಯೆ ನೀಡಿದ ಸುಪ್ರೀಂಕೋರ್ಟ್, ಸಂಸ್ಥೆಯೊಳಗಿನ ತಿಕ್ಕಾಟವನ್ನು ಪರೋಕ್ಷವಾಗಿ ಉಲ್ಲೇಖಿಸಿ, 'ಸಿಬಿಐ ಮೊದಲು ತನ್ನ ಮನೆಯನ್ನು ಸರಿಪಡಿಸಿಕೊಳ್ಳಲಿ' ಎಂದು ಹೇಳಿತು.
ಕೋರ್ಟ್ ನಿಗಾವಣೆಯಲ್ಲಿ ಸಿಬಿಐ ತನಿಖೆ ಮಾಡಬಹುದು ಎಂದು ಭೂಷಣ್ ಹೇಳಿದರು. ಅದರ ಬಗ್ಗೆ ಮುಂದೆ ನೋಡಬಹುದು ಎಂದು ಕೋರ್ಟ್ ತಿಳಿಸಿತು.

ರಾಜ್ಯಸಭೆಯ ಕಾಂಗ್ರೆಸ್ ಸಂಸದ ಸಂಜಯ್ ಸಿಂಗ್, ಸರ್ಕಾರವು ಯುದ್ಧ ವಿಮಾನಗಳ ದರಗಳನ್ನು ಪ್ರಕಟಿಸಬೇಕು ಎಂದು ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದರು.
'ನಿಮಗೆ ಅದರ ಬೆಲೆ ಎಷ್ಟು ಎಂದು ತಿಳಿದಿದೆಯೇ?' ಎಂದು ನ್ಯಾಯಪೀಠ ಪ್ರಶ್ನಿಸಿತು. ಅದಕ್ಕೆ ಅವರ ಪರ ವಕೀಲರು ಗೊತ್ತು ಎಂದರು. ಆಗ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, 'ಹಾಗಾದರೆ ಅದನ್ನು ನಿಮ್ಮೊಳಗೇ ಇರಿಸಿಕೊಳ್ಳಿ. ಅದರ ಬೆಲೆ ತಿಳಿದಿರುವ ಅದೃಷ್ಟವಂತರಲ್ಲಿ ನೀವೂ ಒಬ್ಬರು' ಎಂದು ತಮಾಷೆಯಾಗಿ ಹೇಳಿದರು.
ಬಳಿಕ ಈ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರ ಆಸಕ್ತಿಯ ಉದ್ದೇಶವನ್ನು ಕೇಳಿತು. ಈಗಾಗಲೇ ಅನೇಕ ಅರ್ಜಿದಾರರು ಇದ್ದಾರೆ. ಅವರು ಎಸ್ಐಟಿ ತನಿಖೆ ಕೇಳಿದ್ದಾರೆ. ಭೂಷಣ್ ಸಿಬಿಐ ತನಿಖೆ ಬಯಸಿದ್ದಾರೆ ಎಂದು ಹೇಳಿತು.
ಮತ್ತೊಬ್ಬ ಅರ್ಜಿದಾರ ಎಂಎಲ್ ಶರ್ಮಾ, ಈ ಪ್ರಕರಣವನ್ನು ಚುನಾವಣೆಯ ಬಳಿಕ ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿದರು. ಆದರೆ ನ್ಯಾಯಪೀಠ, 'ಯಾವ ಚುನಾವಣೆ? ಚುನಾವಣೆಯ ಕಾರಣಕ್ಕೆ ನ್ಯಾಯಾಲಯದ ಕಾರ್ಯಕಲಾಪಗಳನ್ನು ನಿಲ್ಲಿಸಲು ಆಗುವುದಿಲ್ಲ' ಎಂದು ಹೇಳಿತು.
ಅದಕ್ಕೆ ಶರ್ಮಾ, ವಿಧಾನಸಭೆ ಚುನಾವಣೆ ಎಂದರು. 'ಅದಕ್ಕೆ ನಾವು ಹೇಗೆ ಸಂಬಂಧಿಸಿದವರಾಗುತ್ತೇವೆ? ನಿಮ್ಮ ತಲೆಯಲ್ಲಿ ಯಾವ ಚುನಾವಣೆ ನಡೆಸಿದ್ದೀರಿ ಎಂದು ಮೊದಲು ನಿರ್ಧರಿಸಿ' ಎಂದು ಕೋರ್ಟ್ ಖಾರವಾಗಿ ಹೇಳಿತು.












Click it and Unblock the Notifications