ಲ್ಯಾಪ್ ಟಾಪ್ ಹಗರಣ: ನ್ಯಾಯಾಧೀಶರುಗಳ ಮೇಲೆ ತನಿಖೆ
ನವದೆಹಲಿ, ನ.24: ದೆಹಲಿಯ ಕೆಳಹಂತದ ನ್ಯಾಯಾಲಯದಲ್ಲಿ ಲ್ಯಾಪ್ ಟಾಪ್ ಖರೀದಿ ಹಗರಣದಲ್ಲಿ ನ್ಯಾಯಾಧೀಶರು ಸಿಲುಕಿದ್ದಾರೆ. ನ್ಯಾಯಾಲಯದ 300ಕ್ಕೂ ಅಧಿಕ ನ್ಯಾಯಾಧೀಶರು ವಿಚಾರಣೆಗೆ ಒಳಪಡಬೇಕಾಗಿದೆ.
ದೆಹಲಿ ಹೈಕೋರ್ಟ್ ಮತ್ತು ರಾಜ್ಯ ಸರ್ಕಾರ 2013ರಲ್ಲಿ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಖರೀದಿಗಾಗಿ ಹಣ ಬಿಡುಗಡೆ ಮಾಡಿತ್ತು. ಆದರೆ, ಖರೀದಿ ಮಾಡುವಾಗ ಅವ್ಯಹಾರ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಕೆಳ ನ್ಯಾಯಾಲಯದ 300ಕ್ಕೂ ಅಧಿಕ ನ್ಯಾಯಾಧೀಶರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಕಂಡು ಬಂದಿದೆ.
ಸಮಿತಿಯಿಂದ ತನಿಖೆ: ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಹಾಗೂ ನ್ಯಾಯಾಧೀಶರು ಹಣ ದುರ್ಬಳಕೆ ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಮೂವರು ಹೈಕೋರ್ಟ್ ನ್ಯಾಯಾಧೀಶರುಳ್ಳ ಉನ್ನತ ಮಟ್ಟದ ಸಮಿತಿಯನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ರಚಿಸಿದ್ದಾರೆ.

ಸರ್ಕಾರದ ಅನುದಾನದ ಪ್ರಕಾರ ಪ್ರತಿ ನ್ಯಾಯಾಧೀಶರಿಗೆ ಲ್ಯಾಪ್ಟಾಪ್ ಖರೀದಿಸಲು ತಲಾ ರು. 1.1 ಲಕ್ಷ ಹಣವನ್ನು ಸರ್ಕಾರ ಮತ್ತು ದೆಹಲಿ ಹೈಕೋರ್ಟ್ ಬಿಡುಗಡೆ ಮಾಡಿತ್ತು.ಆದರೆ, ಇದರಲ್ಲಿ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು, ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವನ್ನು ಹೊರೆಸಲಾಗಿದೆ. ಈಗಾಗಲೇ ಆರೋಪ ಹೊತ್ತಿರುವ ನ್ಯಾಯಾಧೀಶರ ಕಚೇರಿಗಳಿಗೆ ವಿವರಣೆ ಕೇಳಿ ನೋಟಿಸ್ ನೀಡಲಾಗಿದೆ.
ಲ್ಯಾಪ್ ಟಾಪ್ ಹಾಗೂ ಕಂಪ್ಯೂಟರ್ ಖರೀದಿಸುವ ಬದಲು ನ್ಯಾಯಾಧೀಶರು ಟಿವಿ, ಹೋಂ ಥೇಟರ್ ಸಿಸ್ಟಮ್ ಖರೀದಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಕೋರ್ಟ್ ಅಧಿಕಾರಿಗಳು ಹೇಳಿದ್ದಾರೆ. ಈ ಎಲ್ಲಾ ಪುರಾವೆಗಳನ್ನು ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ್ದಾರೆ. ನಂತರ ಮುಖ್ಯ ನ್ಯಾಯಮೂರ್ತಿ ಜಿ ರೋಹಿಣಿ ಅವರು ನ್ಯಾ. ವಿಪಿನ್ ಸಾಂಘಿ, ನ್ಯಾ. ರಾಜೀವ್ ಶಾಕ್ದೇರ್, ನ್ಯಾ. ವಿಕೆ ರಾವ್ ಅವರುಳ್ಳ ಸಮಿತಿ ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.












Click it and Unblock the Notifications