ಲಖಿಂಪುರ ಖೇರಿ ಪ್ರಕರಣ: ಸಚಿವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪ್ರಧಾನಿ ವಿಫಲ
ನವದೆಹಲಿ ಡಿಸೆಂಬರ್ 21: ಲಖಿಂಪುರ ಖೇರಿ ಪ್ರಕರಣದಲ್ಲಿ ರಾಜ್ಯ ಗೃಹ ಸಚಿವ ಅಜಯ್ ಮಿಶ್ರಾ ಟೆನಿ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಸಂಸತ್ತಿನ ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕ್ಗೆ ಮೆರವಣಿಗೆ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಸಚಿವರ (ಅಜಯ್ ಮಿಶ್ರಾ) ವಿರುದ್ಧ ಪ್ರಧಾನಿ ಏನೂ ಕ್ರಮ ಕೈಗೊಳ್ಳುತ್ತಿಲ್ಲ. ಮಾಧ್ಯಮವೂ ತನ್ನ ಕೆಲಸವನ್ನು ಮಾಡುತ್ತಿಲ್ಲ, ಸರ್ಕಾರವೂ ಏನನ್ನೂ ಮಾಡುತ್ತಿಲ್ಲ, ಆದರೆ ರೈತರ ವಿಚಾರದಲ್ಲಿ ನಾವು ಸುಮ್ಮನಿರುವ ಮಾತಿಲ್ಲ" ಎಂದು ಹೇಳಿದ್ದಾರೆ.
"ನಾವು ಈ ವಿಷಯವನ್ನು ಮತ್ತೆ ಮತ್ತೆ ಎತ್ತಿದ್ದೇವೆ. ಆದರೆ ಸರಕಾರ ಕೇಳುತ್ತಿಲ್ಲ. ಭಾರತದ ಜನರ ವಿರುದ್ಧದ (ಸರ್ಕಾರದ) ಕೃತ್ಯಗಳನ್ನು ನಾವು ಸಹಿಸುವುದಿಲ್ಲ" ಎಂದು ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. "ನಾವು ಅವರನ್ನು ಬಿಡುವುದಿಲ್ಲ, ಇಂದು ಅಥವಾ ನಾಳೆ ಅವರನ್ನು ಜೈಲಿಗೆ ಕಳುಹಿಸಲಾಗುವುದು" ಎಂದು ರಾಹುಲ್ ಗಾಂಧಿ ಅವರು ಆಡಳಿತ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

"ಸಚಿವರ ಪುತ್ರ ರೈತರನ್ನು ಕೊಂದಿದ್ದಾರೆ. ಎಸ್ಐಟಿ ವರದಿ ಇದನ್ನು ಪಿತೂರಿ ಎಂದು ಹೇಳಿದೆ. ಇದು ಅಜಯ್ ಮಿಶ್ರಾಗೆ ಸಂಬಂಧಿಸದ ಪ್ರತ್ಯೇಕ ಘಟನೆಯಲ್ಲ. ಪ್ರಧಾನಿ ಅದರ ಬಗ್ಗೆ ಯಾವ ಕ್ರಮಕ್ಕೂ ಮುಂದಾಗುತ್ತಿಲ್ಲ. ಪ್ರಧಾನಿ ಅವರೇ ರೈತರ ಮುಂದೆ ಕ್ಷಮೆಯಾಚಿಸಿ. ಮೋದಿ ಸಚಿವರನ್ನು ಅವರ ಸ್ಥಾನದಿಂದ ತೆಗೆದುಹಾಕುತ್ತಿಲ್ಲ" ಎಂದು ರಾಹುಲ್ ಗಾಂಧಿ ಹರಹಾಯ್ದಿದ್ದಾರೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಮಂಗಳವಾರ ಸಂಸತ್ತಿನ ಗಾಂಧಿ ಪ್ರತಿಮೆಯಿಂದ ವಿಜಯ್ ಚೌಕ್ಗೆ ಮೆರವಣಿಗೆ ನಡೆಸಿದರು. ಲಖಿಂಪುರ ಖೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅಜಯ್ ಮಿಶ್ರಾ ತೇನಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದರು.
ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯನ್ನು ಯೋಜಿಸಲಾಗಿದೆ ಎಂದು ಎಸ್ಐಟಿ ವರದಿ ಹೇಳಿದಾಗಿನಿಂದ ರಾಹುಲ್ ಗಾಂಧಿ ಸೇರಿದಂತೆ ವಿರೋಧ ಪಕ್ಷದ ಸಂಸದರು ಮಿಶ್ರಾ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ರಾಹುಲ್ ಗಾಂಧಿ, ವಾಸ್ತವವಾಗಿ, ಗೃಹ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು "ಅಪರಾಧಿ" ಎಂದು ಕರೆದಿದ್ದಾರೆ ಮತ್ತು ಅಕ್ಟೋಬರ್ 3 ರಂದು "ಲಖಿಂಪುರ ಖೇರಿಯಲ್ಲಿ ರೈತರ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ" ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಲಖಿಂಪುರ ಖೇರಿ ಪ್ರಕರಣದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಉಭಯ ಸದನಗಳನ್ನು ಹಲವು ಬಾರಿ ಮುಂದೂಡಲಾಗಿದೆ.
ಅಕ್ಟೋಬರ್ 3 ರಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಲಖಿಂಪುರಕ್ಕೆ ಭೇಟಿ ನೀಡುವ ಮೊದಲು ರೈತರು ಮತ್ತು ಬಿಜೆಪಿ ಕಾರ್ಯಕರ್ತರು ಜೀವ ಕಳೆದುಕೊಂಡಿದ್ದಾರೆ. ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದು ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ.

ಮೃತರಲ್ಲಿ ನಾಲ್ವರು ಯುಪಿ ಸಚಿವರನ್ನು ಸ್ವಾಗತಿಸಲು ಬಂದಿದ್ದ ಬಿಜೆಪಿ ಕಾರ್ಯಕರ್ತರಿದ್ದಾರೆ. ಇವರು ಬೆಂಗಾವಲು ಪಡೆಯ ಭಾಗವಾಗಿದ್ದ ಕಾರುಗಳಲ್ಲಿದ್ದವರು. ಉಳಿದ ನಾಲ್ವರು ರೈತರಾಗಿದ್ದಾರೆ. ಲಖೀಂಪುರ ಖೇರಿ ಹಿಂಸಾಚಾರ ಘಟನೆಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು ಪ್ರತಿಭಟನಾಕಾರರ ರೈತರ ಹತ್ಯೆಯನ್ನು ಯೋಜಿತ ಸಂಚು ಎಂದು ಹೇಳಿದೆ. ಹೀಗಾಗಿ ಪ್ರಕರಣದಲ್ಲಿ ಸಚಿವ ಅಜಯ್ ಮಿಶ್ರಾ ಅವರನ್ನು ರಕ್ಷಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಕೂಡಲೇ ಅಜಯ್ ಮಿಶ್ರಾ ಘಟನೆ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಮತ್ತು ಹತ್ಯೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ರೈತ ಸಂಘಟನೆಗಳು ಇದೇ ವಿಚಾರವಾಗಿ ಹಲವಾರು ಬಾರಿ ಪ್ರತಿಭಟನೆ ನಡೆಸಿವೆ. ಸಚಿವರ ಪುತ್ರನಿಗೆ ಶಿಕ್ಷೆ ಆಗಬೇಕು ಹಾಗೂ ಅಜಯ್ ಮಿಶ್ರಾ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












Click it and Unblock the Notifications