Just in: ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣ ಇಡಿ ತನಿಖೆಗೆ ಡಿಕೆಶಿ ಹಾಜರು
ನವದೆಹಲಿ, ಸೆಪ್ಟೆಂಬರ್ 19: ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅಧ್ಯಕ್ಷ ಡಿಕೆ ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ನವದೆಹಲಿಯ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ. ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಫೆಡರಲ್ ಏಜೆನ್ಸಿಯ ಕಚೇರಿಗೆ ಮಧ್ಯಾಹ್ನ ತಲುಪಿದ ಡಿಕೆ ಶಿವಕುಮಾರ್ ತನಿಖೆಗೆ ಹಾಜರಾಗಿದ್ದಾರೆ.
ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷವು ಆಯೋಜಿಸುತ್ತಿರುುವ ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿದ್ದರು. ಈ ವೇಳೆಯಲ್ಲಿಯೇ ಇಡಿ ಸಮನ್ಸ್ ಅನ್ನು ನೀಡಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಅನ್ನ ನೀಡಿತ್ತು.
ಡಿಕೆ ಶಿವಕುಮಾರ್ ಅವರಿಗೆ ಇಡಿ ಕಳೆದ ವಾರ ಸಮನ್ಸ್ ನೀಡಿತ್ತು. ಏಜೆನ್ಸಿಯ ಮುಂದೆ ಹಾಜರಾಗಲು ಕೇಳಲಾದ ಪ್ರಕರಣದ ಬಗ್ಗೆ ತನಗೆ ತಿಳಿದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದರು. ಶಿವಕುಮಾರ್ ಅವರ ವಿರುದ್ಧ ಸಿಬಿಐ ಅಕ್ರಮ ಆಸ್ತಿ ಹೊಂದಿರುವ ಆರೋಪದ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡು ನಂತರ ಇಡಿ ಸಮನ್ಸ್ ಜಾರಿ ಮಾಡಿತ್ತು.
ಸೆಪ್ಟೆಂಬರ್ 15ರಂದು ಇಡಿ ಸಮನ್ಸ್ ನೀಡಿದಾಗ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದರು, "#BharatJodoYatra ಮತ್ತು ಅಸೆಂಬ್ಲಿ ಅಧಿವೇಶನದ ಮಧ್ಯೆ, ಅವರು ಮತ್ತೆ ನನಗೆ ಹಾಜರಾಗಲು ಇಡಿ ಸಮನ್ಸ್ ನೀಡಿದ್ದಾರೆ. ನಾನು ಸಹಕರಿಸಲು ಸಿದ್ಧನಿದ್ದೇನೆ. ಆದರೆ, ಈ ಸಮನ್ಸ್ನ ಸಮಯ ಮತ್ತು ನನಗೆ ನೀಡಲಾದ ಕಿರುಕುಳವು ನನ್ನ ಸಾಂವಿಧಾನಿಕ ಮತ್ತು ರಾಜಕೀಯ ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುತ್ತಿದೆ," ಎಂದು ಟ್ವೀಟ್ ಮಾಡಿದ್ದರು.
ಜಾರಿ ನಿರ್ದೇಶನಾಲಯವು ಈ ಹಿಂದೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ 3, 2019 ರಂದು ಮತ್ತೊಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು ಮತ್ತು ದೆಹಲಿ ಹೈಕೋರ್ಟ್ ಅದೇ ವರ್ಷ ಅಕ್ಟೋಬರ್ನಲ್ಲಿ ಡಿಕೆಶಿಗೆ ಜಾಮೀನು ನೀಡಿತ್ತು.
ಇಡಿ ಸಂಸ್ಥೆಯು ಈ ವರ್ಷದ ಮೇ ತಿಂಗಳಲ್ಲಿ ಡಿಕೆಶಿ ವಿರುದ್ಧ ಆದಾಯ ತೆರಿಗೆ ಇಲಾಖೆ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಡಿಕೆಶಿಗೆ ಸಮನ್ಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಡಿಕೆಶಿ ವಿಚಾರಣೆಗೆ ಹಾಜರಾಗಿದ್ದು ತನಿಖೆಯ ಬಳಿಕವಷ್ಟೇ ಮತ್ತಷ್ಟು ವಿಚಾರ ತಿಳಿದುಬರಲಿದೆ.