'ಕೇಜ್ರಿವಾಲ್ ಒಬ್ಬ ಭಯೋತ್ಪಾದಕ, ಅದಕ್ಕೆ ಸಾಕಷ್ಟು ಪುರಾವೆಗಳಿವೆ'
ನವದೆಹಲಿ, ಫೆಬ್ರವರಿ 3: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವತಃ ತಮ್ಮನ್ನು 'ಅರಾಜಕತಾವಾದಿ' ಎಂದು ಕರೆದುಕೊಂಡಿದ್ದಾರೆ. ಆದರೆ ಅರಾಜಕತಾವಾದಿಗೂ ಉಗ್ರವಾದಿಗೂ ಅಂತಹ ವ್ಯತ್ಯಾಸವೇನೂ ಇಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಲೇವಡಿ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಒಬ್ಬ 'ಉಗ್ರ' ಎಂದು ಕರೆದಿರುವುದಕ್ಕೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರಿಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿರುವುದಕ್ಕೆ ಜಾವಡೇಕರ್ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, 'ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಖಲಿಸ್ತಾನದ ಕಮಾಂಡೋ ದಳದ ಮುಖ್ಯಸ್ಥ ಗುರಿಂದರ್ ಸಿಂಗ್ನ ಮೋಗಾ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು . ಅದು ಉಗ್ರನ ಮನೆ ಎನ್ನುವುದು ನಿಮಗೆ ತಿಳಿದಿತ್ತು. ಆದರೂ ನೀವು ಅಲ್ಲಿ ಉಳಿದುಕೊಂಡಿದ್ದಿರಿ. ಇದರ ಬಗ್ಗೆ ನಿಮಗೆ ಎಷ್ಟು ಸಾಕ್ಷ್ಯಗಳು ಬೇಕು?' ಎಂದು ಪ್ರಶ್ನಿಸಿದರು.

ಅರಾಜಕತಾವಾದಿಗೂ ಉಗ್ರವಾದಿಗೂ ವ್ಯತ್ಯಾಸವಿಲ್ಲ
'ಕೇಜ್ರಿವಾಲ್ ಈಗ ದುಃಖದ ಮುಖ ಮಾಡಿಕೊಂಡು, 'ನಾನು ಭಯೋತ್ಪಾದಕನೇ?' ಎಂದು ಕೇಳುತ್ತಿದ್ದಾರೆ. ನೀವೊಬ್ಬ ಭಯೋತ್ಪಾದಕ. ಅದನ್ನು ಸಾಬೀತುಪಡಿಸಲು ಸಾಕಷ್ಟು ಪುರಾವೆಗಳಿವೆ. ನಾನೊಬ್ಬ ಅರಾಜಕತಾವಾದಿ ಎಂದು ನಿಮ್ಮನ್ನು ನೀವೇ ಕರೆದುಕೊಂಡಿದ್ದಿರಿ. ಅರಾಜಕತಾವಾದಿಗೂ ಮತ್ತು ಭಯೋತ್ಪಾದಕನಿಗೂ ಅಂತಹದ್ದೇನೂ ವ್ಯತ್ಯಾಸವಿಲ್ಲ' ಎಂದು ಅವರು ಟೀಕಿಸಿದರು.

ಭಯೋತ್ಪಾದಕರ ಬಗ್ಗೆ ಅನುಕಂಪ
ಷಹೀನ್ ಭಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಎಎಪಿ ಬೆಂಬಲ ನೀಡಿದೆ. ಅಲ್ಲಿ 'ಅಸ್ಸಾಂಗೆ ಸ್ವಾತಂತ್ರ್ಯ ಬೇಕು'', 'ಜಿನ್ನಾ ವಾಲಿ ಆಜಾದಿ' ಎಂಬ ಘೋಷಣೆಗಳನ್ನು ಕೂಗಲಾಗಿದೆ. ಅಂತಹ ಘೋಷಣೆಗಳಿಗೆ ಬೆಂಬಲ ನೀಡುವುದು ಕೂಡ ಭಯೋತ್ಪಾದನೆ ಎಂದು ಜಾವಡೇಕರ್ ಆರೋಪಿಸಿದರು.
ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಜೆಎನ್ಯು ವಿಶ್ವವಿದ್ಯಾಲಯದ ಪರ ಕೇಜ್ರಿವಾಲ್ ನಿಂತಿದ್ದಾರೆ. ನೀವು ಸುಳ್ಳುಗಾರರ ಮುಖ್ಯಸ್ಥ ಎನ್ನುವುದು ದೆಹಲಿ ಜನರಿಗೆ ತಿಳಿದಿದೆ. ನೀವೊಬ್ಬ ಅರಾಜಕತಾವಾದಿ ಮತ್ತು ಭಯೋತ್ಪಾದಕರ ಬಗ್ಗೆ ಅನುಕಂಪ ಹೊಂದಿರುವವರು ಎಂದು ವಾಗ್ದಾಳಿ ನಡೆಸಿದರು.
'ನೀವು ಷಹೀನ್ ಭಾಗ್ ಮತ್ತು ಜೆಎನ್ಯುಗಳನ್ನು ಬೆಂಬಲಿಸಿದ್ದೀರಿ. ಅಲ್ಲಿ ಘೋಷಣೆಗಳನ್ನು ಕೂಗಲಾಗಿದೆ. ಎಲ್ಲರೂ ಅಂತಹ ಅರಾಜಕತಾವಾದಿಗಳು. ಹೀಗಾಗಿ ಖಂಡಿತವಾಗಿಯೂ ನೀವೊಬ್ಬ ಭಯೋತ್ಪಾದಕ. ಇದು ನಿಮ್ಮ ಐಡೆಂಟಿಟಿ. ನೀವೆಷ್ಟೇ ಮುಗ್ಧತೆಯ ಮುಖ ತೋರಿಸಿದರೂ ಅದು ಸತ್ಯ' ಎಂದು ಹೇಳಿದರು.

ನಾಲ್ಕು ದಿನ ಪ್ರಚಾರದಿಂದ ನಿರ್ಬಂಧ
ದೆಹಲಿ ಚುನಾವಣೆ ಪ್ರಚಾರದ ವೇಳೆ ಕೇಜ್ರಿವಾಲ್ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ್ದ ಬಿಜೆಪಿ ಸಂಸದ ಪರ್ವೇಶ್ ವರ್ಮಾ ಅವರಿಗೆ ಗುರುವಾರ ನೋಟಿಸ್ ನೀಡಿದ್ದ ಚುನಾವಣಾ ಆಯೋಗ, ನಾಲ್ಕು ದಿನ ಅವರು ಪ್ರಚಾರ ನಡೆಸದಂತೆ ನಿರ್ಬಂಧ ಹೇರಿತ್ತು. ತಾನು ಅವರ ಮಗ, ಸಹೋದರ ಅಥವಾ ಭಯೋತ್ಪಾದಕ ಎಂಬುದನ್ನು ದೆಹಲಿ ಜನರು ತೀರ್ಮಾನಿಸುತ್ತಾರೆ ಎಂದು ಕೇಜ್ರಿವಾಲ್ ಭಾವುಕರಾಗಿ ಹೇಳಿದ್ದರು.

ದೇಶಕ್ಕಾಗಿ ಪ್ರಾಣ ಕೊಡಲೂ ಸಿದ್ಧ
'ನಾನು ಹೇಗೆ ತಾನೆ ಭಯೋತ್ಪಾದಕನಾಗುತ್ತೇನೆ? ನಾನು ಔಷಧಗಳನ್ನು ಒದಗಿಸಿದ್ದೇನೆ. ಅಗತ್ಯವಿರುವವರು ಸಾಕಷ್ಟು ಸಹಾಯ ಮಾಡಿದ್ದೇನೆ. ನನ್ನ ಬಗ್ಗೆ ಅಥವಾ ನನ್ನ ಕುಟುಂಬದ ಬಗ್ಗೆ ನಾನು ಎಂದಿಗೂ ಯೋಚನೆಯನ್ನೇ ಮಾಡಿಲ್ಲ. ದೇಶಕ್ಕಾಗಿ ನನ್ನ ಜೀವ ಕೊಡಲೂ ನಾನು ಸಿದ್ಧನಿದ್ದೇನೆ' ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಹನುಮ ಭಕ್ತ ಕೇಜ್ರಿವಾಲ್
ನೀವು ಹನುಮಂತನ ಭಕ್ತರೇ?'- ಹೀಗೊಂದು ಪ್ರಶ್ನೆ ಎದುರಾದಾಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಹನುಮಾನ್ ಚಾಲೀಸದ ಮಂತ್ರವನ್ನೇ ಪಠಿಸಿದರು.
ಟೆಲಿವಿಷನ್ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್ಗೆ ಪ್ರೇಕ್ಷಕರೊಬ್ಬರು ನೀವು ಹನುಮಂತನ ಭಕ್ತರಾಗಿದ್ದೀರಾ ಎಂದು ಪ್ರಶ್ನಿಸಿದರು. ಅದಕ್ಕೆ 'ಹೌದು' ಎಂದ ಅವರು ಪಟಪಟನೆ ಹನುಮಾನ್ ಚಾಲೀಸ ಹೇಳಿದ್ದು ಕೇಳಿ, ಇಡೀ ಪ್ರೇಕ್ಷಕ ಸಮೂಹ ಹರ್ಷೋದ್ಗಾರ ಮಾಡಿತು.
ದೆಹಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಎರಡನೆಯ ಅವಧಿಗೆ ಮರು ಆಯ್ಕೆಯಾಗಲು ಬಯಸಿರುವ ಕೇಜ್ರಿವಾಲ್, ಸತತ ಪ್ರಚಾರದಲ್ಲಿ ತೊಡಗಿದ್ದಾರೆ. ದೆಹಲಿಯ ಕನ್ನೌಟ್ ಪ್ಲೇಸ್ನ ಹನುಮಾನ್ ದೇವಸ್ಥಾನಕ್ಕೆ ಯಾವಾಗಲೂ ಭೇಟಿ ನೀಡುವುದಾಗಿ ಕೇಜ್ರಿವಾಲ್ ತಿಳಿಸಿದರು.

ಚಾಲೀಸ ಹಾಡಿದ ಕೇಜ್ರಿವಾಲ್
ಹನುಮಾನ್ ಚಾಲೀಸ ಹಾಡಲು ಬರುತ್ತದೆಯೇ ಎಂದು ಕೇಳಿದಾಗ, ಹನುಮಾನ ಚಾಲೀಸದ ಪ್ರತಿಯೊಂದೂ ಸಾಲು ಹೃದಯದಲ್ಲಿದೆ. ಆದರೆ ತಾವು ಒಳ್ಳೆಯ ಗಾಯಕನಾಗಿರದ ಕಾರಣ ಹಾಡಲು ನಾಚಿಕೆಯಾಗುತ್ತದೆ ಎಂದರು.
ಆಗ ಪ್ರೇಕ್ಷಕರೆಲ್ಲರೂ ಜೋರಾಗಿ ನಕ್ಕರು. ಲೋಟದಿಂದ ನೀರು ಕುಡಿದ ಕೇಜ್ರಿವಾಲ್, ಹನುಮಾನ್ ಚಾಲೀಸ ಹಾಡಲು ಆರಂಭಿಸಿದರು. ಅದಕ್ಕೆ ನೆರೆದಿದ್ದ ಗುಂಪು ಉತ್ತೇಜನ ನೀಡಿತು.












Click it and Unblock the Notifications